ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌ಗೆ ಸುಖೋಯ್‌ ಪರ್ಯಾಯ ಆಗುವುದಾದರೆ...!

Last Updated 30 ಸೆಪ್ಟೆಂಬರ್ 2018, 3:32 IST
ಅಕ್ಷರ ಗಾತ್ರ

ಇದೀಗ ನಮ್ಮ ಚರಿತ್ರೆಯು ಗೂಗಲ್ ಪೂರ್ವ ಮತ್ತು ಗೂಗಲ್ಲೋತ್ತರ ಎಂದು ವಿಭಜಿತವಾಗಿದೆ. ಈ ಹಿನ್ನೆಲೆಯಲ್ಲಿ, 20 ವರ್ಷಗಳ ಹಿಂದಿನ, ಅಂದರೆ 1998ರ ಆರಂಭ ಕಾಲದ ವಿದ್ಯಮಾನವೊಂದನ್ನು ಇಲ್ಲಿ ಪ್ರಸ್ತಾಪಿಸುವುದು ಅತ್ಯಂತ ಸೂಕ್ತ ಎನ್ನಿಸುತ್ತಿದೆ. ಆಗ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಚಿವ ಸಂಪುಟದಲ್ಲಿ ಜಾರ್ಜ್ ಫರ್ನಾಂಡಿಸ್ ಅವರನ್ನು ರಕ್ಷಣಾ ಮಂತ್ರಿಯನ್ನಾಗಿ ನೇಮಿಸಿದ್ದು ಅಚ್ಚರಿ ಮೂಡಿಸುವುದರ ಜೊತೆಗೆ ಸಾಕಷ್ಟು ಅನುಮಾನಗಳಿಗೂ ಎಡೆಮಾಡಿಕೊಟ್ಟಿತ್ತು. ಸುಕ್ಕುಸುಕ್ಕಾದ ಕುರ್ತಾ- ಪೈಜಾಮ ಧರಿಸುತ್ತಿದ್ದ ಹಾಗೂ ಸಾದಾಸೀದಾ ಚಪ್ಪಲಿಯನ್ನಷ್ಟೇ ಹಾಕಿಕೊಳ್ಳುತ್ತಿದ್ದ ಕಾರ್ಮಿಕ ಸಂಘಟನಾ ನಾಯಕ ಅದು ಹೇಗೆ ರಾಷ್ಟ್ರದ ಅತ್ಯಂತ ಸೂಕ್ಷ್ಮ ಖಾತೆಯನ್ನು ನಿರ್ವಹಿಸಲಿದ್ದಾರೆ ಎಂಬ ಕುತೂಹಲಕ್ಕೆ ಇದು ಕಾರಣವಾಗಿತ್ತು.

ಫರ್ನಾಂಡಿಸ್ ಅವರು ಶೀಘ್ರವೇ ತಮ್ಮ ಕಾರ್ಯದ ಮೇಲೆ ಹಿಡಿತ ಸಾಧಿಸಿ ನಮ್ಮೆಲ್ಲರಲ್ಲೂ ಬೆರಗು ಮೂಡಿಸಿದರು. ‘ನಾನು ಏನನ್ನೂ ಮಾಡುವುದಿಲ್ಲ; ನಿನಗೂ ಏನನ್ನೂ ಮಾಡಲು ಬಿಡುವುದಿಲ್ಲ’ ಎಂಬ ಅಧಿಕಾರಶಾಹಿ ಧೋರಣೆಯನ್ನು ಭೇದಿಸುವುದು ಅವರ ಮುಂದಿದ್ದ ಮೊದಲ ಸವಾಲಾಗಿತ್ತು. ನಾಸ್ತಿಕರಾದ ಫರ್ನಾಂಡಿಸ್ ಅವರಿಗೆ (ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರಲಿಲ್ಲ) ಸಿಯಾಚಿನ್ ನೀರ್ಗಲ್ಲು ತಾಣವೇ ಅಚ್ಚುಮೆಚ್ಚಿನ ಪುಣ್ಯಕ್ಷೇತ್ರವಾಯಿತು.

ಸಿಯಾಚಿನ್‌ನಲ್ಲಿ ನಾನು ಅವರ ಧ್ವನಿಮುದ್ರಿತ ಸಂದರ್ಶನ ನಡೆಸಿದ್ದೆ. ಆಗ ಅವರು ನನ್ನೊಂದಿಗೆ ಮಾತನಾಡುತ್ತಾ, ‘ರಕ್ಷಣಾ ಸಚಿವಾಲಯದಲ್ಲಿ ಯಾರೂ ಯಾವುದರ ಕುರಿತಾಗಿಯೂ ‘ಹೌದು’ ಅಥವಾ ‘ಇಲ್ಲ’ ಎಂದು ಸ್ಪಷ್ಟವಾಗಿ ಹೇಳುವುದಿಲ್ಲ. ಅವರು ಕಡತವನ್ನು ‘ಕಕ್ಷೆ’ಗೆ ದೂಡಿಬಿಡುತ್ತಾರೆ ಅಷ್ಟೆ. ನೀವು ಅದರ ಬೆನ್ನಟ್ಟುತ್ತಲೇ ಇರಬೇಕಾಗುತ್ತದೆ. ಈ ಮಧ್ಯೆ ಯುದ್ಧಗಳು ಬರುತ್ತವೆ, ಹೋಗುತ್ತವೆ. ಅದರಲ್ಲಿ ಜಯ ಗಳಿಸಬಹುದು ಅಥವಾ ಸೋಲಬಹುದು. ಇದು ನಾನು ಕಂಡುಹಿಡಿದ ಯಾತನಾಮಯ ಶೋಧನೆ’ ಎಂದಿದ್ದರು.

ಹೀಗೆ ಅವರು ಸಿಯಾಚಿನ್‌ಗೆ ಭೇಟಿ ಕೊಟ್ಟಿದ್ದಾಗ, ನಮ್ಮ ತುಕಡಿಗಳಿಗೆ ಹಿಮಹಾಸಿನ ಮೇಲೆ ಚಲಿಸಲು ಅನುವು ಮಾಡಿಕೊಡುವ ಸ್ನೋಮೊಬೈಲ್‌ಗಳು ಮತ್ತು ಸ್ಕೂಟರುಗಳ ತುರ್ತು ಜರೂರು ಇದೆ ಎಂಬುದನ್ನು ಮನಗಂಡಿದ್ದರು. ಇವುಗಳ ಖರೀದಿ ಪ್ರಸ್ತಾವದ ಕಡತವನ್ನು ಮೇಲೆ ಹೇಳಿದಂತೆ ‘ಕಕ್ಷೆ’ಗೆ ದೂಡಲಾಗಿದೆ ಎಂಬುದನ್ನೂ ಅವರು ಪತ್ತೆಹಚ್ಚಿದ್ದರು.

ಆಮೇಲೆ ಅವರು, ಹೀಗೆ ಕಡತದೊಂದಿಗೆ ಆಟವಾಡುತ್ತಿದ್ದ ಅಧಿಕಾರಿಗಳು ಯಾರು ಎಂಬುದನ್ನು ಕಂಡುಹಿಡಿದರು. ತಕ್ಷಣವೇ ಅವರಿಗೆ ಸಿಯಾಚಿನ್‌ಗೆ ತೆರಳಿ ಈ ಸ್ಕೂಟರುಗಳು ಎಷ್ಟರಮಟ್ಟಿಗೆ ಅಗತ್ಯ ಎಂಬುದು ಮನವರಿಕೆಯಾಗುವ ತನಕ ಅಲ್ಲೇ ಇರಬೇಕು ಎಂದು ಆದೇಶಿಸಿದರು.

ಈಗ ಫರ್ನಾಂಡಿಸ್ ಅವರು ಮಾತನಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ, ರಫೇಲ್ ಪ್ರಸ್ತಾವದ ಬಗ್ಗೆ ವ್ಯತಿರಿಕ್ತ ಅಭಿಪ್ರಾಯದ ಟಿಪ್ಪಣಿ ಬರೆದ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಖರೀದಿ ಮ್ಯಾನೇಜರ್ (ವಾಯುಪಡೆ) ಬಗ್ಗೆ ಅವರ ಯೋಚನೆ ಏನಾಗಿರುತ್ತಿತ್ತು ಎಂದು ನಾವು ಊಹಿಸಬಹುದು. ಈ ‘ಮೇಧಾವಿ ಟಿಪ್ಪಣಿ’ಯನ್ನು ಅವರು ಓದಿದ್ದರೆ ಹೀಗೆ ಬರೆದವರನ್ನು, ರಫೇಲ್ ವಿಮಾನವನ್ನು ಕಕ್ಷೆಗೆ ದೂಡಬಲ್ಲ ಸಾಮರ್ಥ್ಯವಿರುವ ಪ್ರತಿಭಾನ್ವಿತ ವಿಜ್ಞಾನಿ ಎಂದು ತಕ್ಷಣವೇ ಘೋಷಿಸುತ್ತಿದ್ದರು.

ಒಂದೊಮ್ಮೆ, ಯುಪಿಎ ಅವಧಿಯಲ್ಲಿದ್ದ ರೀತಿಯಲ್ಲಿ ಈಗಿನ ಮಹಾಲೇಖಪಾಲರು ಕೂಡ ಹೆಡ್‌ಲೈನ್ ಸುದ್ದಿಯಾಗುವ ಗೀಳು ಹೊಂದಿರುವ ಸಿನಿಕರೇ ಆಗಿದ್ದರೆ, ಹೀಗೆ ಟಿಪ್ಪಣಿ ಬರೆದಾತನು ಭ್ರಷ್ಟಾಚಾರ ವಿರೋಧಿ ಸಾಮಾಜಿಕ ಕಾರ್ಯಕರ್ತ ಎಂದು ಬಿಂಬಿತಗೊಳ್ಳುವ ಅಪಾಯವಿದೆ. ಆದರೂ ನಾನು, ಹೀಗೆ ಟಿಪ್ಪಣಿ ಬರೆದ ಅಧಿಕಾರಿ ಅದೆಂತಹಾ ಬೃಹಸ್ಪತಿ ಎಂದು ಕೇಳುವ ಧೈರ್ಯ ಮಾಡುತ್ತಿದ್ದೇನೆ. ಭಾರತವು 36 ರಫೇಲ್ ಯುದ್ಧ ವಿಮಾನಗಳ ಖರೀದಿಗಾಗಿ ಡಸ್ಸಾಲ್ಟ್ ಕಂಪನಿಗೆ ನೀಡುವಷ್ಟೇ ಹಣದಲ್ಲಿ ಎಚ್ಎಎಲ್‌ನಿಂದ ಅದೆಷ್ಟೋ ಹೆಚ್ಚು ಸುಖೋಯ್ ಯುದ್ಧ ವಿಮಾನಗಳನ್ನು ಕೊಳ್ಳಬಹುದು ಎಂಬ ಅವರ ಸಲಹೆಯು ನನ್ನನ್ನು ಕುತೂಹಲಭರಿತ ಸ್ತಬ್ಧತೆಯಲ್ಲಿ ಮುಳುಗಿಸಿದೆ.

ಹಾಗಾದರೆ, ಎಚ್ಎಎಲ್ ನಿರ್ಮಿತ ಅಗ್ಗದ ಬೆಲೆಯ ಸುಖೋಯ್‌ಗಳೇ ಉತ್ತರ ಎಂಬುದಾದರೆ ರಫೇಲ್‌ಗಳನ್ನು ಯಾಕಾದರೂ ಖರೀದಿಸಬೇಕು? ಫರ್ನಾಂಡಿಸ್ ಅವರಾಗಿದ್ದರೆ, ‘ಹಾಗಾದರೆ, ಒಂದು ಸುಖೋಯ್ ವಿಮಾನಕ್ಕಾಗಿ ಎಚ್ಎಎಲ್ ಕೊಡುವ ಹಣದಲ್ಲಿ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮಿಗ್ -21 ವಿಮಾನಗಳನ್ನೂ ಖರೀದಿಸಬಹುದಲ್ಲವೇ’ ಎಂದು ಆ ಅಧಿಕಾರಿ ಮಹಾಶಯನನ್ನು ಕೇಳುತ್ತಿದ್ದರು. ಜೊತೆಗೆ, ಆ ಅಧಿಕಾರಿಯನ್ನು ಮಿಗ್ ತರಬೇತಿ ಘಟಕಕ್ಕೆ ನಿಯೋಜನೆಗೊಳಿಸಿ, ಪೈಲಟ್ ಹಿಂದಿನ ಆಸನದಲ್ಲಿ ಕುಳಿತು ಪ್ರತಿದಿನ ಬೆಳಿಗ್ಗೆ ಹಾರಾಟ ನಡೆಸುವಂತೆ ಆದೇಶಿಸುತ್ತಿದ್ದರು. ಫರ್ನಾಂಡಿಸ್ ಅವರ ಪ್ರಕಾರ, ರಫೇಲ್‌ಗೆ ನೀಡುವಷ್ಟೇ ಹಣದಲ್ಲಿ ಹೆಚ್ಚು ಸಂಖ್ಯೆಯ ಸುಖೋಯ್ ವಿಮಾನಗಳನ್ನು ಕೊಳ್ಳಬಹುದು ಎಂದು ಯೋಚಿಸುವ ಅಧಿಕಾರಿಗೆ ‘ಸಿಯಾಚಿನ್ ತರಹದ ಶಿಕ್ಷೆ’ಯೇ ಸೂಕ್ತ.

ನಮ್ಮಲ್ಲಿ ಯಾವುದೇ ಗಾತ್ರದ ರಕ್ಷಣಾ ಹಗರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ಶಿಕ್ಷೆ ವಿಧಿಸಿರುವ ನಿದರ್ಶನವನ್ನು ನಾನು ಈವರೆಗೂ ಕಂಡಿಲ್ಲ. ಕೆಲವರು ಬೊಫೋರ್ಸ್ ಹಗರಣವನ್ನು ಪ್ರಸ್ತಾಪಿಸಿ ನನ್ನ ಈ ಹೇಳಿಕೆಯನ್ನು ಖಂಡಿಸಬಹುದು. ಆದರೆ ವಾಸ್ತವವೇನೆಂದರೆ, ಈ ಹಗರಣದಲ್ಲಿ ಕೂಡ ಭಾರತದಲ್ಲಿ ಲಂಚ ಪಡೆದವರು ಯಾರು ಎಂಬುದನ್ನು ಯಾರೂ ಪತ್ತೆಹಚ್ಚಲಿಲ್ಲ. ವಿ.ಪಿ. ಸಿಂಗ್ ನೇತೃತ್ವದ ಸರ್ಕಾರವಾಗಲೀ, ವಾಜಪೇಯಿ ನೇತೃತ್ವದ ಸರ್ಕಾರವಾಗಲೀ ಲಂಚ ಪಡೆದವರ ಹೆಸರನ್ನು ಬಹಿರಂಗಗೊಳಿಸುವಂತೆ ಒತ್ತಡ ಹೇರಲಿಲ್ಲ. ಹಾಗೆಂದ ಮಾತ್ರಕ್ಕೆ, ಅದು ಹಗರಣವೇ ಅಲ್ಲ ಎಂದರ್ಥವಲ್ಲ. ಆದರೆ, ಲಂಚವಾಗಿ ಪಡೆದ ಹಣವನ್ನು ವಾಪಸ್‌ ಪಡೆದು ಕೆಲವರನ್ನು ಜೈಲಿಗೆ ಕಳುಹಿಸುವುದಕ್ಕಿಂತ, ಹಗರಣದ ಕಳಂಕವನ್ನು ನಿರಂತರವಾಗಿ ಜೀವಂತವಾಗಿಟ್ಟು ಅದನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳುವುದಕ್ಕೇ ಹೆಚ್ಚು ಬೆಲೆ ಎಂಬ ದೂ(ದು)ರಾಲೋಚನೆ ಇದಕ್ಕೆ ಕಾರಣವಿರಬಹುದು.

ರಷ್ಯಾ ಹೊರತುಪಡಿಸಿ ಬೇರೆ ರಾಷ್ಟ್ರದಿಂದ ನಡೆಸಿದ ರಕ್ಷಣಾ ಸಾಮಗ್ರಿಗಳ ಖರೀದಿಯನ್ನು ಸಮಾಧಿ ಮಾಡಿದ್ದೇ ಬೊಫೋರ್ಸ್ ಸಾಧನೆಯಾಗಿದೆ. ಇಂದಿರಾ ಗಾಂಧಿ ಅವರು 1982ರಲ್ಲಿ ಮಿರೇಜ್- 2000 ಯುದ್ಧವಿಮಾನಗಳ ಖರೀದಿಗೆ ಮುಂದಾದ 36 ವರ್ಷಗಳ ನಂತರ ‘ರಫೇಲ್’ ವಿಮಾನವು ಭಾರತ ಖರೀದಿಸಲಿರುವ ರಷ್ಯಾಯೇತರ ಮೊದಲ ಯುದ್ಧವಿಮಾನವಾಗಲಿದೆ.

ಆದರೆ, ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಈ ಹಿಂದೆ ಆಗಿರುವಂತಹ ಕಥೆಗಳೇ ಈಗ ರಫೇಲ್ ವಿಷಯದಲ್ಲೂ ಮರುಕಳಿಸಿದರೆ ಅದೊಂದು ದುರಂತವಾಗುತ್ತದೆ. ಅತ್ಯಂತ ಜರೂರಾಗಿ ಬೇಕಾದ ವ್ಯವಸ್ಥೆಯನ್ನು 20 ವರ್ಷಗಳಷ್ಟು ತಡವಾಗಿ ಅದೂ ಮನಸ್ಸಿಲ್ಲದೆ ಕೊಂಡು
ಕೊಳ್ಳುವುದು, ನಂತರ ಕೆಲವು ವದಂತಿಗಳು ಹಬ್ಬುವುದು, ಪ್ರತಿಯೊಬ್ಬನೂ ಬೇರೆಯವನನ್ನು ‘ಕಳ್ಳ’ ಎಂದು ಜರಿಯುವುದು, ಚುನಾವಣಾ ಪ್ರಚಾರ ಸಭೆಗಳಲ್ಲಿ ಶಸ್ತ್ರಾಸ್ತ್ರ ವ್ಯವಸ್ಥೆಯ ಪ್ಲಾಸ್ಟಿಕ್ ಪ್ರತಿಕೃತಿಗಳನ್ನು ಪ್ರದರ್ಶಿಸುವುದು, ಹಗರಣ ಎಸಗಿದವರನ್ನು ಹಿಡಿಯದಿರುವುದು, ಮೊದಲ ರಷ್ಯಾಯೇತರ ‘ಖರೀದಿ’ ನಂತರ ಯಾರೂ ಮತ್ತೆ ಖರೀದಿಸುವ ಧೈರ್ಯ ತೋರದಿರುವುದು, ಇಲ್ಲೊಂದಿಷ್ಟು ಅಲ್ಲೊಂದಿಷ್ಟು ಖರೀದಿ ನಡೆಸುವುದು- ಇದು ನಮ್ಮ ಇದುವರೆಗಿನ ರಕ್ಷಣಾ ಇಲಾಖೆಯ ಖರೀದಿ ಚರಿತ್ರೆಯಾಗಿದೆ. ಈಗ ರಫೇಲ್ ಕೂಡ ಅದೇ ಹಾದಿಯಲ್ಲಿ ಸಾಗಿದೆ. ಹೀಗಾಗಿ, ನಮ್ಮ ಪ್ರತಿಯೊಂದು ಶಸ್ತ್ರಾಸ್ತ್ರ ವ್ಯವಸ್ಥೆ ಕೂಡ ಸಂಖ್ಯಾಬಲ ಮತ್ತು ಪರಿಣಾಮದ ಕೊರತೆಯನ್ನು ಎದುರಿಸುತ್ತಿದೆ.

ಇವೆಲ್ಲದರ ಪರಿಣಾಮವಾಗಿ, ಇದೀಗ ಚುನಾವಣೆ ಹತ್ತಿರವಿರುವ ಭಾರತದಲ್ಲಿ ಹೊಸ ‘ಶಕ್ತಿದೇವತೆ’ಯೊಂದು ಆವಿರ್ಭವಿಸಿರುವುದು ಅತ್ಯಂತ ಕುತೂಹಲಕರವಾಗಿದೆ. ‘ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್’ (ಎಚ್ಎಎಲ್) ಈ ಶಕ್ತಿದೇವತೆ. ರಿಲಯನ್ಸ್- ಎಡಿಎಜಿಗೆ ಹೋಲಿಸಿದರೆ ಇದು ಶಕ್ತಿಯುತವಾಗಿ ತೋರುತ್ತದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ರಾಷ್ಟ್ರದ ಅತಿ ದೊಡ್ಡ, ಸಾರ್ವಜನಿಕ ವಲಯದ ರಕ್ಷಣಾ ಕಂಪನಿಯ ಬಗ್ಗೆ ‘ಸತ್ಯಶೋಧನೆ’ (ರಿಯಾಲಿಟಿ ಚೆಕ್) ನಡೆಸುವುದು ಅಗತ್ಯವಾಗಿದೆ.

ಭಾರತವು ಸೇನಾ ಬಲದಲ್ಲಿ ಜಗತ್ತಿನಲ್ಲಿ 4ನೇ ಸ್ಥಾನದಲ್ಲಿದೆ. ಅದರ ವಾಯುಪಡೆಯ ಶೇ 75ರಷ್ಟನ್ನು, ಭೂಸೇನೆಯ ಶೇ 100ರಷ್ಟನ್ನು, ನೌಕಾಪಡೆಯ ಶೇ 66ರಷ್ಟನ್ನು ಹಾಗೂ ಶೇ 100ರಷ್ಟು ಕರಾವಳಿ ರಕ್ಷಣಾ ವೈಮಾನಿಕ ಅಗತ್ಯಗಳನ್ನು ಎಚ್ಎಎಲ್ ಪೂರೈಸುತ್ತಿದೆ. ಬೇಕೆಂದರೆ ಅಂಕಿಅಂಶಗಳನ್ನು ತೆಗೆದು ನೋಡಿ.

ಆದರೆ, ಇಂತಹ ಮೇರು ಕಂಪನಿಯ ವಹಿವಾಟು ಸುಮಾರು 18,000 ಕೋಟಿ ರೂಪಾಯಿ ಮಾತ್ರ. ಇದು ಟ್ರಕ್ ತಯಾರಿಕೆಯಲ್ಲಿ ತೊಡಗಿರುವ ನಮ್ಮ ಅಶೋಕ್ ಲೇಲ್ಯಾಂಡ್, ಇಂಡಿಗೊ ಏರ್‌ಲೈನ್ಸ್, ಹಿಂದೂಜಾದವರ ಅಷ್ಟೇನೂ ದೊಡ್ಡದಲ್ಲದ ‘ಇಂಡಸ್ಇಂಡ್’ ಖಾಸಗಿ ಬ್ಯಾಂಕ್ ನಡೆಸುವ ವಹಿವಾಟಿಗಿಂತ ಕಡಿಮೆ ಮೊತ್ತವಾಗಿದೆ. ಜಗತ್ತಿನ ಮುಂಚೂಣಿ 500 ಕಂಪನಿಗಳ ಪಟ್ಟಿಯಲ್ಲಿ ಎಚ್ಎಎಲ್ ಕೂಡ ಇತ್ತು ಎಂಬುದು 1980ರ ದಶಕಗಳಿಗೆ ಸಂದುಹೋದ ಕತೆಯಷ್ಟೆ. ಆದರೆ ಈಗ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವ್ಯಯಿಸುತ್ತಿರುವ ಹಣ ಅತ್ಯಲ್ಪ ಎನ್ನುವಷ್ಟು ನಗಣ್ಯ. ಅದರ ರಫ್ತು ವ್ಯವಹಾರ ವಾರ್ಷಿಕ 300 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿದೆ. ಮಿರ್ಜಾಪುರ ಅಥವಾ ಪಾಣಿಪತ್‌ನ ಕೆಲವು ನೇಯ್ಗೆ ರಫ್ತುದಾರರ ವ್ಯವಹಾರ ಸಹ ಈ ಮೊತ್ತವನ್ನು ಮೀರುತ್ತದೆ.

ಎಚ್ಎಎಲ್ ಇದುವರೆಗೆ 4,000ಕ್ಕೂ ಹೆಚ್ಚು ವಿಮಾನಗಳನ್ನು ತಯಾರಿಸಿದೆ. ಇವುಗಳಲ್ಲಿ ಬಹುಪಾಲು ವಿಮಾನಗಳು ಪರವಾನಗಿ ಪಡೆದು ತಯಾರಾದ ನಕಲುಗಳಾಗಿವೆ. ರಾಷ್ಟ್ರದಲ್ಲಿ ನಿರ್ಮಾಣಗೊಂಡು ವೈಫಲ್ಯ ಕಂಡ ಏಕೈಕ ಯುದ್ಧವಿಮಾನವಾದ ‘ಎಚ್ಎಫ್- 24 ಮಾರುತ್’ ಹೆಸರಿನ 150 ವಿಮಾನಗಳೂ ಇದರಲ್ಲಿ ಸೇರಿವೆ. ನಮ್ಮ ಶಾಲಾ ಪಠ್ಯಪುಸ್ತಕಗಳು ಮತ್ತು ಸಾಕ್ಷ್ಯಚಿತ್ರಗಳು ನಾವು ಎಚ್ಎಎಲ್ ಬಗ್ಗೆ ಹೆಮ್ಮೆ ಪಡಬೇಕೆಂಬುದನ್ನು ಕಲಿಸಿವೆ. ಆದರೆ, ಆಗ ನಾವು ಅದರ ವ್ಯವಹಾರದ ಮಾದರಿ ಅರ್ಥವಾಗದಷ್ಟು ಮುಗ್ಧರಾಗಿದ್ದೆವು: ಸರ್ಕಾರವು ವಿದೇಶಿ ವಿಮಾನವನ್ನು ಖರೀದಿಸುತ್ತದೆ; ಸಹಉತ್ಪಾದನೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ; ನಂತರ, ಅದನ್ನು ಎಚ್ಎಎಲ್‌ಗೆ ಉಡುಗೊರೆಯಾಗಿ ನೀಡುತ್ತದೆ.

ಇಸ್ರೊ ಮತ್ತು ವಿಮಾನ ಅಭಿವೃದ್ಧಿ ಸಂಸ್ಥೆಯ (ಏರ್ ಕ್ರ್ಯಾಫ್ಟ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್- ಎಡಿಇ) ಸಹವರ್ತಿಯಾಗಿ ಅದು ಅತ್ತುತ್ಯಮ ಕಾರ್ಯಗಳನ್ನು ಮಾಡಿರುವುದೇನೋ ಸರಿಯೆ. ಆದರೆ ಅದರ ಸ್ವಾವಲಂಬನೆ ಮಾತ್ರ ದೊಡ್ಡ ‘ಸೊನ್ನೆ’ಯಾಗಿದೆ. ಅದು ಸಾರ್ವಜನಿಕ ಸ್ವಾಮ್ಯದ ಅಧಿಕಾರಶಾಹಿಯಲ್ಲದೆ ಬೇರೇನೂ ಅಲ್ಲ. ನಮ್ಮ ವಾಯುಪಡೆಗೆ ತನ್ನ ಶಕ್ತಿ ಸಾಮರ್ಥ್ಯದ ಬಗ್ಗೆ ಆರೋಗ್ಯಕರ ಅನುಮಾನಗಳು ಇವೆ. ಈಗಿನ ಅದರ ಮುಖ್ಯಸ್ಥರು, ‘ತೇಜಸ್ ವಿಮಾನದ 12 ತುಕಡಿಗಳನ್ನು ಖರೀದಿಸಲಾಗುವುದು’ ಎಂದು ಹೇಳಿಕೆ ನೀಡಿರುವುದನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಇವುಗಳಲ್ಲಿ ಅರ್ಧದಷ್ಟು ವಿಮಾನಗಳನ್ನು ಎಚ್ಎಎಲ್ ತಯಾರಿಸಿ ಪೂರೈಸುವ ವೇಳೆಗೆ, ಮಾನವಸಹಿತ ಯುದ್ಧವಿಮಾನಗಳೇ ಅಪ್ರಸ್ತುತವಾಗಿರುತ್ತವೆ ಎಂಬುದನ್ನು ಅವರು ಬಾಯಿಬಿಟ್ಟು ಹೇಳುತ್ತಿಲ್ಲ ಅಷ್ಟೆ.

ಯಾರು ಹಣ ಲೂಟಿ ಮಾಡುತ್ತಿದ್ದಾರೋ ಅಥವಾ ಇಲ್ಲವೋ ನಮ್ಮ ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ದೊಡ್ಡ ಹಗರಣ ನಡೆಯುವುದಂತೂ ನಿಶ್ಚಿತ. ಯಾವುದನ್ನೂ ಖರೀದಿಸಲಾಗದ ನಮ್ಮ ಅಸಾಮರ್ಥ್ಯದಿಂದಾಗಿ ರಾಷ್ಟ್ರದ ಸಶಸ್ತ್ರ ಪಡೆಗಳು ದುರ್ಬಲವಾಗುತ್ತಿವೆ. ಈಗ ರಷ್ಯಾದ ಪುಟಿನ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು, ಎಚ್ಎಎಲ್ ಭಾರತದಲ್ಲಿ ತಯಾರಿಸಿದ ಮಿಗ್-21ನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಆದರೆ, ಈ ವಿಮಾನಗಳನ್ನು ಬಳಸುತ್ತಿರುವ ಜಗತ್ತಿನ ಅತಿದೊಡ್ಡ ವಾಯುಪಡೆಯೆಂದರೆ ಅದು ನಮ್ಮ ಐಎಎಫ್ ಮಾತ್ರ ಎಂಬುದು ತಮಾಷೆಯ ಸಂಗತಿಯಾಗಿದೆ.

ಭಾರತವು ಜಾಗತಿಕವಾಗಿ ಗಮನಸೆಳೆದಿರುವ ತನ್ನ ಖಾಸಗಿ ತಯಾರಕರನ್ನು ರಕ್ಷಣಾ ಕ್ಷೇತ್ರಕ್ಕೆ ತರುವಲ್ಲಿ ವಿಫಲವಾಗಿ ಉಸಿರುಗಟ್ಟುತ್ತಿದೆ. ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರು ‘ನಮ್ಮದು ಮೂರ್ಖರಿಂದ ತುಂಬಿದ ರಾಷ್ಟ್ರ’ ಎನ್ನುವುದು ಕೆಲವೊಮ್ಮೆ ನಿಜ ಅನ್ನಿಸುತ್ತದೆ. ನಾವು ಭಾರತದಲ್ಲಿ ಖಾಸಗಿ ಕಂಪನಿಗಳು ರಕ್ಷಣಾ ಸಾಮಗ್ರಿಗಳನ್ನು ತಯಾರಿಸಲು ಅವಕಾಶ ಕೊಡುವುದಿಲ್ಲ; ಆದರೆ, ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಖಾಸಗಿ ಕಂಪನಿಗಳು ತಯಾರಿಸಿದ್ದನ್ನು ಖರೀದಿಸುತ್ತೇವೆ. ಅಂದಹಾಗೆ, ಡಸ್ಸಾಲ್ಟ್ ಕೂಡ ಖಾಸಗಿ ಕಂಪನಿಯೇ.

ರಕ್ಷಣಾ ಉದ್ಯಮದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವ ಬಗ್ಗೆ ಯುಪಿಎ ಸದ್ದು ಮಾಡಿದ್ದೇನೋ ನಿಜ. ಆದರೆ, ಆಗ ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟನಿ ಅವರು ಈ ದಿಕ್ಕಿನಲ್ಲಿ ಒಂದು ಹೆಜ್ಜೆ ಇಡಲು ಕೂಡ ಭಯಗೊಂಡರು. ಅನಾಮಧೇಯ ಪತ್ರಗಳನ್ನು ನಂಬಿ, ಜಗತ್ತಿನ ಮುಂಚೂಣಿ ರಕ್ಷಣಾ ಶಸ್ತ್ರಾಸ್ತ್ರ ಕಂಪನಿಗಳ ಮೇಲೆ ನಿಷೇಧ ಹೇರುವುದರಲ್ಲೇ ಅವರು ಕಾಲ ಕಳೆದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹೊಸ ಆರಂಭವನ್ನು ಮಾಡಿ ‘ಭಾರತದಲ್ಲೇ ತಯಾರಿಸಿ’ (ಮೇಕ್ ಇನ್ ಇಂಡಿಯಾ) ಎಂದು ಕರೆ ನೀಡಿತು. ರಕ್ಷಣಾ ಉದ್ಯಮಕ್ಕೆ ಖಾಸಗಿ ವಲಯವನ್ನು ತರಲು ಅದು ಹಿಂಜರಿಯಲಿಲ್ಲ. ಆದರೆ, ಪಾರದರ್ಶಕತೆ ಮತ್ತು ಸಾಚಾತನಕ್ಕೆ ಬದಲಾಗಿ ಅಹಂಕಾರ ಹಾಗೂ ಮುಚ್ಚುಮರೆತನ ಮಾಡಿ, ರಿಲಯನ್ಸ್-ಎಡಿಎಜಿ ಮೂಲಕ ತನ್ನ ಇನಿಂಗ್ಸ್ ಶುರು ಮಾಡಿ ಎಲ್ಲವನ್ನೂ ಗೊಂದಲಮಯಗೊಳಿಸಲು ಅದಕ್ಕೆ ಯಾರು ಉಪದೇಶಿಸಿದರೋ?

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT