ಮುಂಬೈ, ಆ. 3 (ಪಿಟಿಐ, ಯುಎನ್ಐ)– ವಿವಾದಾತ್ಮಕ ಧಾಬೋಲ್ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಅಮೆರಿಕದ ಬಹುರಾಷ್ಟ್ರೀಯ ಸಂಸ್ಥೆ ಎನ್ರಾನ್ ಪವರ್ ಕಾರ್ಪೊರೇಷನ್ಗೆ ನೀಡಿದ್ದ ಅನುಮತಿಯನ್ನು ಮಹಾರಾಷ್ಟ್ರ ಸರ್ಕಾರ ಇಂದು ರದ್ದುಗೊಳಿಸಿತು.
‘ಹಿಂದಿನ ಕಾಂಗೈ ಸರ್ಕಾರ ಎನ್ರಾನ್ ಜತೆ ಮಾಡಿಕೊಂಡ ಒಪ್ಪಂದದಲ್ಲಿ ಆತ್ಮಗೌರವದ ಲವಲೇಶವೂ ಇರಲಿಲ್ಲ. ಬೌದ್ಧಿಕ ದಿವಾಳಿತನ ಪ್ರದರ್ಶಿಸುವ ಈ ಒಪ್ಪಂದ ಜನತೆಗೆ ಮಾಡಿದ ಮೋಸ. ಒಂದು ರೀತಿಯಲ್ಲಿ ಇದು ಒಪ್ಪಂದವೇ ಅಲ್ಲ’ ಎಂದು ಮುಖ್ಯಮಂತ್ರಿ ಮನೋಹರ ಜೋಷಿ ಅವರು ಇಂದು ರಾಜ್ಯ ವಿಧಾನಸಭೆಯಲ್ಲಿ ಪ್ರಕಟಿಸಿದರು.
ಲಂಕಾ ತಮಿಳರಿಗೆ ಸ್ವಾಯತ್ತತೆ
ಕೊಲೊಂಬೊ, ಆ. 3 (ಯುಎನ್ಐ, ಪಿಟಿಐ)– ಶ್ರೀಲಂಕಾ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗಾ ಅವರು ಅಲ್ಪಸಂಖ್ಯಾತ ತಮಿಳರಿಗೆ ಅಭೂತಪೂರ್ವ ಸ್ವಾಯತ್ತಾಧಿಕಾರ ನೀಡುವ ಶಾಂತಿ ಯೋಜನೆಯನ್ನು ತೀವ್ರ ಪ್ರತಿಭಟನೆ ಮಧ್ಯೆ ಪ್ರಕಟಿಸಿದರು.
ಅವರು ರಾತ್ರಿ ಟಿ.ವಿ, ಆಕಾಶವಾಣಿಯಲ್ಲಿ ದೇಶವನ್ನು ಉದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ, ತಮಿಳರ ಕೆಲ ಮೂಲಭೂತ ಬೇಡಿಕೆಗಳನ್ನು ಒಪ್ಪಿಕೊಂಡು, ಸಂಯುಕ್ತ ದೇಶವಾಗಿದ್ದ ಶ್ರೀಲಂಕಾವನ್ನು ಒಕ್ಕೂಟ ದೇಶವಾಗಿ ಬದಲಾಯಿಸುವ ವ್ಯಾಪಕ ಸುಧಾರಣೆ ಒಳಗೊಂಡ ಸಂವಿಧಾನ ಬದಲಾವಣೆ ಪ್ರಸ್ತಾವ ಮುಂದಿಟ್ಟರು.