ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ಮೀಸಲಾತಿ ವಿರುದ್ಧ ಪ್ರಬಲರ ಪ್ರತಿಕ್ರಾಂತಿ

Last Updated 2 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಭಾರತದ ಸಂಘಟಿತ ಕೈಗಾರಿಕಾ ಮತ್ತು ಸೇವಾವಲಯದಲ್ಲಿನ ಉದ್ಯೋಗಗಳ ಸಂಖ್ಯೆಯು 8.56 ಕೋಟಿ ಎಂದು‘ನ್ಯಾಷನಲ್ ಸ್ಯಾಂಪಲ್ ಸರ್ವೆ-2012’ರ ವರದಿಯಲ್ಲಿ ಇದೆ. ಅದರಲ್ಲಿ ಶೇ 70ರಷ್ಟು (6 ಕೋಟಿ) ಉದ್ಯೋಗಗಳು ಖಾಸಗಿ ಕ್ಷೇತ್ರದಲ್ಲಿದ್ದವು. ಕೇವಲ ಶೇ 30ರಷ್ಟು ಉದ್ಯೋಗಗಳು (2.56 ಕೋಟಿ) ಸಾರ್ವಜನಿಕ ಕ್ಷೇತ್ರದಲ್ಲಿದ್ದವು. ಇದರಲ್ಲಿ ಶೇ 40ರಷ್ಟು ತಾತ್ಕಾಲಿಕ ಉದ್ಯೋಗ. ಆದ್ದರಿಂದ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಉದ್ಯೋಗಗಳ ಸಂಖ್ಯೆ 1.54 ಕೋಟಿ ಮಾತ್ರ. ಅಂದರೆ ಒಟ್ಟು 100 ಉದ್ಯೋಗಗಳಲ್ಲಿ ಮೀಸಲಾತಿ ನೀತಿಗೆ ಒಳಪಡುವುದು 18 ಉದ್ಯೋಗಗಳು ಮಾತ್ರ. ಈ 18ರಲ್ಲಿ ಶೇ 50ರಷ್ಟು (ಮೇಲ್ಜಾತಿ ಬಡವರ ಮೀಸಲಾತಿ ಶೇ 10ರಷ್ಟು ಸೇರಿಸಿಲ್ಲ) ಎಸ್ಸಿ/ಎಸ್ಟಿ/ಒಬಿಸಿಗಳಿಗೆ ಮೀಸಲಾತಿ ನೀಡಲಾಗಿದೆ. ಹಾಗಾಗಿ ಭಾರತದಲ್ಲಿ ಸೃಷ್ಟಿಯಾಗುವ 100 ಉದ್ಯೋಗಗಳಲ್ಲಿ 9ಕ್ಕೆ ಮಾತ್ರ ಮೀಸಲಾತಿ ನಿಯಮ ಅನ್ವಯವಾಗುತ್ತದೆ. ಈಗ, ನೋಟು ರದ್ದತಿ, ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಎಷ್ಟು ಉದ್ಯೋಗಗಳು ನಷ್ಟವಾಗಿವೆ ಎಂಬುದನ್ನು ಊಹಿಸುವುದೂ ಕಷ್ಟ.

ಮೀಸಲಾತಿಗಾಗಿ ಬೀದಿಗಿಳಿದಿರುವ ಜಾತಿಗಳುಈ ಮೇಲಿನ ಸಂಘಟಿತ ಕೈಗಾರಿಕಾ ಮತ್ತು ಸೇವಾವಲಯದಲ್ಲಿನ ಮೀಸಲಾತಿಯ ಹಣೆಬರಹವನ್ನು ಅರ್ಥ ಮಾಡಿಕೊಂಡೇ ಮುಂದುವರಿಯಬೇಕಿದೆ. 1990ರ ದಶಕದ ನಂತರ ಭಾರತವು ಅಪ್ಪಿಕೊಂಡ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳು ಮೀಸಲಾತಿಯ ವ್ಯಾಪ್ತಿಯನ್ನೇ ನುಂಗಿ ನೀರು ಕುಡಿದಿವೆ. ಆದಾಗ್ಯೂ ಕೃಷಿ, ಕಿರು ಮತ್ತು ಮಧ್ಯಮ ಕೈಗಾರಿಕೆ, ನರೇಗಾ ಉದ್ಯೋಗಗಳಲ್ಲಿ ಸಾರ್ವಜನಿಕ ಕ್ಷೇತ್ರದ ಪಾಲು ಹೆಚ್ಚಿದೆ. ಇದನ್ನು ಉಳಿಸಿಕೊಳ್ಳಬೇಕೆಂದರೆ ಖಾಸಗೀಕರಣವನ್ನು ತಡೆಯಬೇಕಿದೆ.

ಈ ದೇಶದ ತಳಜಾತಿಯ ಶೋಷಿತರು ಒಳಮೀಸಲು ಮತ್ತು ಖಾಸಗಿ ಕ್ಷೇತ್ರದಲ್ಲಿ ಮೀಸಲು ಬೇಕು ಎಂದುಕಳೆದ ಮೂರು ದಶಕಗಳಿಂದ ಸತತವಾಗಿ ಹೋರಾಡುತ್ತಲೇ ಬಂದಿದ್ದಾರೆ. ಅದಕ್ಕಾಗಿ ಹಲವು ಸರ್ಕಾರಗಳು ಆಯೋಗಗಳನ್ನು ನೇಮಿಸಿ ವರದಿಯನ್ನು ಪಡೆದಿವೆ; ಅಂಕಿಅಂಶಗಳನ್ನು ಸಂಗ್ರಹಿಸಿವೆ; ಮೀಸಲಾತಿ ವರ್ಗೀಕರಣಕ್ಕಾಗಿ - ಹೆಚ್ಚಳಕ್ಕಾಗಿ ಶಿಫಾರಸು ಮಾಡಿವೆ. ಹಾಗಿದ್ದಾಗಲೂ ಶೋಷಿತರಿಗೆ ಮೀಸಲಾತಿಯನ್ನು ಖಾತ್ರಿ ಗೊಳಿಸಲು ಆಳುವ ಸರ್ಕಾರಗಳು ಮನಸ್ಸು ಮಾಡಿಯೇ ಇಲ್ಲ. ಆದರೆ, ಕೇಂದ್ರ ಸರ್ಕಾರವು ಬ್ರಾಹ್ಮಣರು,ಆರ್ಯವೈಶ್ಯರಂತಹಮೇಲ್ಜಾತಿಯಲ್ಲಿರುವಬಡವರಿಗೆಏಕಾಏಕಿಶೇ10ರಷ್ಟುಮೀಸಲಾತಿಯನ್ನು ಜಾರಿಗೊಳಿಸಿಬಿಟ್ಟಿದೆ. ಆಶ್ಚರ್ಯವೆಂದರೆ ಈ ಮೇಲ್ಜಾತಿ ಬಡವರ ಜನಸಂಖ್ಯೆ ಎಷ್ಟಿದೆ, ಅವರ ಶೈಕ್ಷಣಿಕ ಮತ್ತು ಔದ್ಯೋಗಿಕ ಪ್ರಾತಿನಿಧ್ಯ ಎಷ್ಟಿದೆ, ಅವರ ಸಾಮಾಜಿಕ ಸ್ಥಾನಮಾನವೇನು ಎಂಬುದರ ಬಗ್ಗೆ ಯಾವುದೇ ಆಯೋಗವನ್ನು ರಚಿಸಲಿಲ್ಲ. ಯಾವುದೇ ಜನಗಣತಿ ಆಗಲಿಲ್ಲ. ಯಾವುದೇ ಬ್ರಾಹ್ಮಣ-ವೈಶ್ಯ ಸಂಘಟನೆಯು ಮೀಸಲಾತಿಗಾಗಿ ಬೀದಿಗಿಳಿದು ಗಮನಾರ್ಹವಾದ ಹೋರಾಟ ಮಾಡಿರಲಿಲ್ಲ. ಆದರೂ ಅವರಿಗೆ ಆರ್ಥಿಕ ಮಟ್ಟದ ಆಧಾರದಲ್ಲಿ ಮೀಸಲಾತಿ ದಕ್ಕಿಬಿಟ್ಟಿತು. ಸಾರ್ವಜನಿಕ ಕ್ಷೇತ್ರದ ನ್ಯಾಯಾಂಗ, ಉನ್ನತ ಶಿಕ್ಷಣ, ಸೆಕ್ರೆಟೇರಿಯಟ್ ಉದ್ಯೋಗಗಳಲ್ಲಿ, ಶಾಸಕಾಂಗ-ಮಂತ್ರಿಮಂಡಲಗಳಲ್ಲಿ ತಮ್ಮ ಜನಸಂಖ್ಯೆಗಿಂತಲೂ ಹೆಚ್ಚು ಪ್ರಾತಿನಿಧ್ಯ ಹೊಂದಿರುವ ಈ ಮೇಲ್ಜಾತಿಗಳ ಜನರು ₹8 ಲಕ್ಷ ವಾರ್ಷಿಕ ಆದಾಯವಿದ್ದರೂ ಬಡವರು ಎಂದು ಪರಿಗಣಿತರಾಗಿ ಮೀಸಲಾತಿಗೆ ಅರ್ಹರಾಗಿಬಿಟ್ಟರು. ಅಂದರೆ ತಿಂಗಳಿಗೆ ₹66 ಸಾವಿರ ಸಂಪಾದಿಸುವ ಕುಟುಂಬ ಬಡ ಕುಟುಂಬ! ಈ ಹಿಂದೆ ಕೇವಲ ಆರ್ಥಿಕ ಮಾನದಂಡವೊಂದೇ ಮೀಸಲಾತಿಗೆ ಪ್ರಮಾಣವಾಗಲಾರದು ಎಂದು ತೀರ್ಪಿತ್ತಿದ್ದ ಸುಪ್ರೀಂ ಕೋರ್ಟ್, ಮೇಲ್ಜಾತಿ ಬಡವರಿಗೆ ನೀಡಿರುವ ಮೀಸಲಾತಿ ಸಂವಿಧಾನಬದ್ಧವೋ ಅಲ್ಲವೋ ಎಂಬುದನ್ನು ತೀರ್ಮಾ ನಿಸಲುವರ್ಷವಾದರೂ ಮನಸ್ಸು ಮಾಡಿಲ್ಲ.

ಹೀಗೆ ಮನುಸ್ಮೃತಿ ಪ್ರೇರಿತ ಮೀಸಲಾತಿಯು ಭಾರತದ ಸಂವಿಧಾನ ಪ್ರೇರಿತ ಮೀಸಲಾತಿಗೆ ಪ್ರತಿಕ್ರಾಂತಿ ಒಡ್ಡುತ್ತಿರುವಾಗ ಶೋಷಿತ ಹಾಗೂ ಮೇಲ್ಮಧ್ಯಮ ಜಾತಿಗಳು ತಮ್ಮ ತಮ್ಮೊಳಗಿನ ಭಿನ್ನತೆಗಳನ್ನು ಬದಿಗಿಡಬೇಕಾದದ್ದು ಅನಿವಾರ್ಯವಾಗಿದೆ.

ಇನ್ನು ಜನಸಂಖ್ಯಾವಾರು ಮೀಸಲಾತಿಯ ಬಗ್ಗೆಯೂ ಮಾತು ಕೇಳಿಬರುತ್ತಿದೆ. ಆದರೆ, ಕಳೆದ ಸರ್ಕಾರ ಸುಮಾರು ₹162 ಕೋಟಿ ಖರ್ಚಿನಲ್ಲಿ ಸಿದ್ಧಪಡಿಸಿದ್ದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯು ‘ಜಾತಿಗಣತಿ’ ಎಂದು ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರ ಮಾಡಿದವು. ಈಗ ವರದಿ ಸರ್ಕಾರದ ಕೈಲಿದೆ. ಅದನ್ನು ಬಹಿರಂಗಗೊಳಿಸುವ ಬಗ್ಗೆಯೂ ಹೋರಾಟಗಾರರು ಮಾತನಾಡಬೇಕಿದೆ.

ನ್ಯಾಯಯುತ ಮೀಸಲಾತಿ ದಕ್ಕಿದ ನಂತರ ಶೋಷಿತ ಜನರ ಬದುಕುವ ಮಟ್ಟ ಉತ್ತಮವಾಗಿದೆಯೇ ಎಂಬ ಇನ್ನೊಂದು ಗಂಭೀರ ಪ್ರಶ್ನೆಯೂ ಇದೆ. ಇದಕ್ಕೆ ಉತ್ತರ ಇಲ್ಲ ಎಂಬುದಾಗಿದೆ. ಏಕೆಂದರೆ ಮೀಸಲಾತಿ ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ. ಅದು ದೇಶದ ಆಡಳಿತದಲ್ಲಿ ದುರ್ಬಲ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ಸಾಮಾಜಿಕ ನ್ಯಾಯವೇ ವಿನಹ ಸಾಮಾಜಿಕ-ಆರ್ಥಿಕ ಸಮಾನತೆ ಅಲ್ಲ. ಹಾಗಾಗಿ ಶೋಷಿತರ ಬದುಕು ಉತ್ತಮವಾಗಬೇಕೆಂದರೆ ದೇಶದ ಸಂಪತ್ತಿನಲ್ಲಿ ಜನಸಂಖ್ಯಾವಾರು ಪಾಲು ಬೇಕಾಗುತ್ತದೆ. ದೇಶದ ಜಿಡಿಪಿ ಮಾತ್ರವಲ್ಲ ದೇಶವಾಸಿಗಳ ‘ತಲಾದಾಯ’ ಹೆಚ್ಚಾಗಬೇಕಿದೆ. ಆದರೆ ಭಾರತವನ್ನು ಆಳುವ ಸರ್ಕಾರವೇ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ತುದಿಗಾಲಲ್ಲಿ ನಿಂತಿದೆ. ಜನರ ತೆರಿಗೆಯ ಹಣವನ್ನೂ ಕೋಟ್ಯಧಿಪತಿಗಳ ಜೇಬಿಗೆ ತುಂಬುತ್ತಿದೆ. ಆದ್ದರಿಂದಲೇ ಕೋವಿಡ್ ನಂತರದಲ್ಲಿ ಭಾರತದ ಆರ್ಥಿಕತೆಯು ಪಾತಾಳಕ್ಕೆ ಇಳಿದಿದ್ದರೂ ದೇಶದ 7 ಶತ ಕೋಟಿಪತಿಗಳು ಕೋವಿಡ್ ಸಂದರ್ಭದಲ್ಲಿ ತಮ್ಮ ಸಂಪತ್ತಿಗೆ ಹೆಚ್ಚುವರಿಯಾಗಿ ₹4.6 ಲಕ್ಷ ಕೋಟಿಯನ್ನು ಸೇರಿಸಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ? ಇಡೀ ದೇಶವಾಸಿಗಳು ಕೋವಿಡ್ ಮತ್ತು ಲಾಕ್‍ಡೌನ್‍ಗೆ ತತ್ತರಿಸಿ ದೇಶದ ಜಿಡಿಪಿಯೊಂದಿಗೇ ಪಾತಾಳಕ್ಕಿಳಿದಿರುವಾಗ ಕೆಲವು ಉದ್ಯಮಿಗಳ ಸಂಪತ್ತು ಆಕಾಶಕ್ಕೇರುವುದರ ಅರ್ಥವೇನು? ಇದಕ್ಕೆ ಅಂಬೇಡ್ಕರರ ಮಾತಿನಲ್ಲಿಯೇ ಉತ್ತರ ಕೊಡುವುದಾದರೆ ‘ಸಿರಿವಂತರ ಸಿರಿತನ ಬಡವರ ಬಡತನದಲ್ಲಿದೆ’.

ಬಡವರೊಂದಿಗೆ ದೇಶವೂ ಬಡವಾಗಿರು ವಾಗ, ಸರ್ವಜನ ಸುಖಾಯ ಎಂಬುದು ಸುಳ್ಳಾಗಿರುವಾಗ, ‘ಬಹುಜನ ಹಿತಾಯ ಬಹುಜನ ಸುಖಾಯ’ ಎಂಬ ಮಂತ್ರ ಶೋಷಿತರದ್ದಾಗಬೇಕಿದೆ. ಭಾರತದ ಸಂಪತ್ತು ಇಡೀ 137 ಕೋಟಿ ಭಾರತೀಯರದ್ದಾಗಿದೆ. ಇದನ್ನು ಕೆಲವರು ಮಾತ್ರ ಲೂಟಿ ಮಾಡಿ ಮೆರೆಯುತ್ತಿದ್ದಾರೆ. ಹಾಗಾಗಿ ಭಾರತದ ಸಂಪತ್ತಿನಲ್ಲಿಯೂ ಶೋಷಿತರಿಗೆ ಸಮಪಾಲು ಬೇಕಾಗಿದೆ. ಆದ್ದರಿಂದ ಅಂಬೇಡ್ಕರ್ ಪ್ರತಿಪಾದಿಸಿದ ‘ಪ್ರಭುತ್ವ ಸಮಾಜವಾದ’ ನಮ್ಮ ಗುರಿಯಾಗಬೇಕಿದೆ. ಈ ಗುರಿ ಮುಟ್ಟಲು ಯಾವುದೇ ಒಂದು ಶೋಷಿತ ಜಾತಿಯಿಂದ ಅಸಾಧ್ಯ. ಇದಕ್ಕೆ ಶೋಷಿತ ಜಾತಿಗಳ ಒಗ್ಗಟ್ಟಿನ ಹೋರಾಟ ಬೇಕು.

ಕೊನೆಯದಾಗಿ ಹೇಳಲೇಬೇಕಾದ ಮಾತೊಂದಿದೆ. ಮೀಸಲಾತಿಯು ಶೋಷಿತ ರಿಗೆಸಂವಿಧಾನ ಬದ್ಧವಾಗಿ ಸಿಗಲೇಬೇಕಾದ ಸೌಲಭ್ಯ. ಆದರೆ ಮೀಸಲಾತಿ ಒಂದೇ ಶೋಷಿತರ ಬದುಕನ್ನು ಹಸನಾಗಿಸಲಾರದು ಎಂಬ ಎಚ್ಚರ ನಮ್ಮಲ್ಲಿರಬೇಕಿದೆ.

(ಲೇಖಕ:ದಲಿತ ಸಂಘರ್ಷ ಸಮಿತಿ ಕಾರ್ಯಕರ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT