ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮತದಾರರ ಪಟ್ಟಿಯಲ್ಲಿ ನೋಂದಣಿ, ಯುವಜನರ ನಿರುತ್ಸಾಹ ಸರಿಯಲ್ಲ

Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ಮತದಾನವು ಕೆಲವೇ ವಾರಗಳಲ್ಲಿ ನಡೆಯಲಿದೆ. ಆದರೆ, ದೊಡ್ಡ ಸಂಖ್ಯೆಯ ಯುವಜನರು ಮತದಾನ ಮಾಡಲು ಆಸಕ್ತಿ ತೋರುತ್ತಿಲ್ಲ ಎಂಬುದು ಕಳವಳಕಾರಿ ಅಂಶ. ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, 18 ಮತ್ತು 19 ವರ್ಷ ವಯಸ್ಸಿನವರಲ್ಲಿ ಮತದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡವರ ಪ್ರಮಾಣವು ತೀರಾ ಕಡಿಮೆ. ಈ ಯುವ ಅರ್ಹ ಮತದಾರರು ಮೊದಲ ಬಾರಿ ಮತದಾನ ಮಾಡುವುದಕ್ಕೆ ಉತ್ಸಾಹ ಮತ್ತು ಹುಮ್ಮಸ್ಸು ತೋರಬೇಕಿತ್ತು. ಆಯೋಗದ ದತ್ತಾಂಶವು ಹೇಳುವ ಪ್ರಕಾರ, 1.8 ಕೋಟಿ ಯುವಜನರು ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಮತದಾನಕ್ಕೆ ಅರ್ಹತೆ ಇರುವ ಯುವ ಮತದಾರರ ಸಂಖ್ಯೆ
4.9 ಕೋಟಿ. ಅರ್ಹ ಯುವ ಮತದಾರರ ‍ಪೈಕಿ ಶೇ 38ರಷ್ಟು ಮಂದಿ ಮಾತ್ರ ಹೆಸರು ನೋಂದಾಯಿಸಿದ್ದಾರೆ. ಹೆಸರು ನೋಂದಣಿ ಮಾಡಿಕೊಂಡವರಲ್ಲಿ ಯುವತಿಯರು ಎಷ್ಟು ಮತ್ತು ಯುವಕರು ಎಷ್ಟು ಎಂಬ ದತ್ತಾಂಶ ಲಭ್ಯವಿಲ್ಲ. 

ನೋಂದಣಿ ಪ್ರಮಾಣದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಾರಿ ವ್ಯತ್ಯಾಸ ಇದೆ ಎಂಬುದು ಗಮನಾರ್ಹ. ಆದರೆ, ಇದನ್ನು ವಿಶ್ಲೇಷಣೆಗೆ ಒಳಪಡಿಸಿ, ತೀರ್ಮಾನವೊಂದಕ್ಕೆ ಬರುವುದು ಅಷ್ಟು ಸುಲಭದ ಕೆಲಸವಲ್ಲ. ತೆಲಂಗಾಣದ ಅರ್ಹ ಯುವ ಮತದಾರರ ಪೈಕಿ ಶೇ 66ರಷ್ಟು ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಬಿಹಾರದಲ್ಲಿ ಯುವಜನರ ಸಂಖ್ಯೆ ಹೆಚ್ಚು. ಆದರೆ, ಅಲ್ಲಿ ನೋಂದಣಿ ಮಾಡಿಸಿಕೊಂಡ ಯುವ ಮತದಾರರ ಪ್ರಮಾಣ ಶೇ 17ರಷ್ಟು ಮಾತ್ರ. ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ನೋಂದಣಿ ಕಡಿಮೆಯೇ ಇದೆ. ಇಲ್ಲಿ ಕ್ರಮವಾಗಿ ಶೇ 21 ಮತ್ತು ಶೇ 23ರಷ್ಟು ನೋಂದಣಿ ಆಗಿದೆ. ಬಿಹಾರ ಮತ್ತು ಉತ್ತರಪ್ರದೇಶದ ಯುವಜನರಲ್ಲಿ ಹಲವರು ಬೇರೆಡೆಗೆ ವಲಸೆ ಹೋಗಿರುವುದು ನೋಂದಣಿ ಪ್ರಮಾಣ ಕಡಿಮೆಯಾಗಲು ಕಾರಣವಾಗಿರಬಹುದು. ಆದರೆ, ವಲಸೆಯ ಪ್ರಮಾಣವು ಹೆಚ್ಚಾಗಿರುವ ಛತ್ತೀಸಗಢದಲ್ಲಿ ಶೇ 54ರಷ್ಟು ನೋಂದಣಿ ಆಗಿದೆ. ರಾಜಕೀಯ ‍‍ಪ್ರಜ್ಞೆ ಗಾಢವಾಗಿರುವ ಕೇರಳದಲ್ಲಿ ಆಗಿರುವ ನೋಂದಣಿ ಪ್ರಮಾಣವು ಶೇ 38ರಷ್ಟು ಎಂಬುದು ಆಶ್ಚರ್ಯಕರ. ಅತಿ ದೊಡ್ಡ ಐದು ರಾಜ್ಯಗಳಾದ ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಯುವ ಮತದಾರರ ನೋಂದಣಿ ಪ್ರಮಾಣವು ಶೇ 50ಕ್ಕೂ ಕಡಿಮೆ ಇದೆ. ಸಾಂಸ್ಕೃತಿಕ ಅಂಶಗಳು ಮತ್ತು ಆಯಾ ರಾಜ್ಯಕ್ಕೆ ನಿರ್ದಿಷ್ಟವಾದ ವಿಚಾರಗಳು ನೋಂದಣಿಯ ಮೇಲೆ ಪರಿಣಾಮ ಬೀರಿರಬಹುದು. ಈ ಎಲ್ಲವನ್ನೂ ಗುರುತಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. 

ಈಗ ನೋಂದಣಿ ಮಾಡಿಕೊಂಡಿರುವವರಲ್ಲಿಯೂ ಬಹಳ ಮಂದಿ ಮತಗಟ್ಟೆಗೆ ಹೋಗಿ ಮತ ಹಾಕದಿರುವ ಸಾಧ್ಯತೆ ಇದೆ. ಹಾಗಾಗಿಯೇ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು. ಮತದಾನದ ಹಕ್ಕು ಬಹಳ ಮಹತ್ವದ ಹಕ್ಕು. ಅಷ್ಟು ಮಾತ್ರವಲ್ಲ, ಇದು ಪ್ರಜಾಪ್ರಭುತ್ವದಲ್ಲಿ ಪೌರರ ಅಧಿಕಾರವೂ ಹೌದು. ಈ ಕುರಿತು ನಮ್ಮಲ್ಲಿ ಇರುವ ಅಸಡ್ಡೆ ಮತ್ತು ಸಿನಿಕತೆಯು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಬಹುದು. ಮತದಾರರ ಜಾಗೃತಿ ಮತ್ತು ಮತದಾನದಲ್ಲಿ ಭಾಗವಹಿಸುವಿಕೆಯ ವ್ಯವಸ್ಥಿತ ಕಾರ್ಯಕ್ರಮ (ಸ್ವೀಪ್‌) ಹಾಗೂ ಇಂತಹ ಇತರ ಕಾರ್ಯ
ಕ್ರಮಗಳ ಮೂಲಕ ಚುನಾವಣಾ ಆಯೋಗವು ಯುವಜನರನ್ನು ಆಕರ್ಷಿಸಲು ಯತ್ನಿಸುತ್ತಿದೆ. ಕ್ರಿಕೆಟ್‌ ತಾರೆ ಸಚಿನ್‌ ತೆಂಡೂಲ್ಕರ್‌ ಅವರಂತಹ ಖ್ಯಾತನಾಮರ ಮೂಲಕ ಯುವಜನರಿಗೆ ಸಂದೇಶ ನೀಡಲು
ಪ್ರಯತ್ನಿಸಲಾಗಿದೆ. ಸ್ವಯಂಸೇವಾ ಸಂಸ್ಥೆಗಳು, ಸಮುದಾಯ ಸಂಘಟನೆಗಳನ್ನು ಬಳಸಿಕೊಂಡು ಮತದಾನ ಯಾಕೆ ಮುಖ್ಯ ಎಂಬ ಕುರಿತು ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ. ತಳಮಟ್ಟದಲ್ಲಿ
ವ್ಯವಸ್ಥಿತವಾದ ಜಾಲವನ್ನು ಹೊಂದಿರುವ ರಾಜಕೀಯ ಪಕ್ಷಗಳ ಮೂಲಕ ಯುವಜನರನ್ನು
ಆಕರ್ಷಿಸುವುದು ಸುಲಭ. ಯುವಜನರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಮತ್ತು
ಅವರು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಮಾಡಲು ರಾಜಕೀಯ ಪಕ್ಷಗಳು ಸಹ
ಪ್ರಯತ್ನಿಸಬೇಕು. ಪಕ್ಷಗಳ ಹಿತದೃಷ್ಟಿಯಿಂದಲೂ ಇದು ಮುಖ್ಯವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT