* ತೋಟಗಾರಿಕೆ ಕ್ಷೇತ್ರದಲ್ಲಿ ಮಹಾನ್ ಸಂಶೋಧನೆ ನಡೆಸಿದ್ದಕ್ಕಾಗಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ರಫಿ ಅಹ್ಮದ್ ಕಿದ್ವಾಯಿ ಪ್ರಶಸ್ತಿ (₹ 5 ಲಕ್ಷ ಮೊತ್ತ) ಪಡೆದಿದ್ದೀರಿ. ಹೇಗನಿಸುತ್ತದೆ?
ಇಂತಹ ಪ್ರಶಸ್ತಿ ಪಡೆದ ರಾಜ್ಯದ ಮೂರನೇ ವಿಜ್ಞಾನಿ ಹಾಗೂ ತೋಟಗಾರಿಕಾ ವಿಭಾಗದ ಮೊದಲಿಗ ಎಂಬ ಹೆಮ್ಮೆ ಇದೆ.
* ನಿಮ್ಮ ಯಾವ ಸಾಧನೆ ಗುರುತಿಸಿ ಈ ಪ್ರಶಸ್ತಿ ಹುಡುಕಿ ಬಂದಿದೆ?
ಟೊಮ್ಯಾಟೊ ಕೃಷಿಯಲ್ಲಿ ಅಧಿಕ ಇಳುವರಿ ನೀಡುವ ‘ಅರ್ಕಾ ರಕ್ಷಕ್’, ‘ಅರ್ಕಾ ಸಾಮ್ರಾಟ್’ ಮತ್ತು ‘ಅರ್ಕಾ ಅಭೇದ್’ ಎಂಬ ಮೂರು ಬಗೆಯ ತಳಿಗಳ ಸಂಶೋಧನೆಗೆ ಈ ಪ್ರಶಸ್ತಿ ಲಭಿಸಿದೆ. ಟೊಮ್ಯಾಟೊ ಸಂಸ್ಕರಣೆಗೆ ಅನುಕೂಲವಾಗುವ ‘ಅರ್ಕಾ ಅಪೇಕ್ಷಾ’ ಎಂಬ ತಳಿಯನ್ನೂ ನಮ್ಮ ತಂಡ ಸಂಶೋಧಿಸಿದೆ. ನಮ್ಮ ಸಂಸ್ಥೆಯಲ್ಲಿ 25ಕ್ಕೂ ಅಧಿಕ ಬಗೆಯ ಹಣ್ಣು, ತರಕಾರಿ, ಹೂ, ಅಣಬೆ ತಳಿಗಳ ಸಂಶೋಧನೆ ನಡೆಯುತ್ತಿದೆ.
* ಈ ಸಂಶೋಧನೆ ದೇಶಕ್ಕೆ, ಕೃಷಿಕರಿಗೆ ಹೇಗೆ ನೆರವಾಗಿದೆ?
ನಮ್ಮ ಸಂಶೋಧನೆಯ ಟೊಮ್ಯಾಟೊ ಗಿಡ ಸರಾಸರಿ 19 ಕೆ.ಜಿಯಷ್ಟು ಹಣ್ಣು ಬೆಳೆಯುತ್ತದೆ. ದೇಶದ ಉದ್ದಗಲಕ್ಕೆ 50 ಸಾವಿರ ಎಕರೆ ಜಮೀನಿನಲ್ಲಿ ಕೃಷಿಕರು ಈ ತಳಿಯ ಟೊಮ್ಯಾಟೊ ಬೆಳೆದಿದ್ದು, ಕೃಷಿಕರಿಗೆ ಬಹಳ ಲಾಭವಾಗಿದೆ.
* ಸಂಶೋಧಿತ ತಳಿಯ ಮೊದಲಿಗೆ ಬರುವ ‘ಅರ್ಕಾ’ ಎಂದರೆ ಏನು?
ಅರ್ಕಾವತಿ ನದಿಯ ತಟದಲ್ಲಿ ನಡೆದ ಸಂಶೋಧನೆಯನ್ನು ಸೂಚಿಸುವ ಸಲುವಾಗಿ ಈ ಹೆಸರು ಇಡಲಾಗಿದೆ. ದೇಶದ ಇತರೆಡೆ ಸಹ ಬಹುತೇಕ ನದಿಗಳ ಹೆಸರನ್ನೇ ಇಂತಹ ಸಂಶೋಧನೆಗಳಿಗೆ ಇಡುವುದು ರೂಢಿ.
* ಈ ಕ್ಷೇತ್ರದಲ್ಲಿ ಯುವಜನರಿಗೆ ಅವಕಾಶಗಳು ಇವೆಯೇ?
ಯಾಕಿಲ್ಲ? ಇಲ್ಲಿ ಯಾರಿಗೂ ನಿರುದ್ಯೋಗ ಇಲ್ಲ, ಸಂಪಾದನೆಗೂ ತೊಂದರೆ ಇಲ್ಲ. ಅಲ್ಪಾವಧಿಯ ತರಕಾರಿ ಬೆಳೆಯನ್ನು ಶ್ರದ್ಧೆಯಿಂದ ಮಾಡಿದರೆ ಅಪಾರ ಗಳಿಕೆ ಸಾಧ್ಯ. ಕೋಲಾರದಲ್ಲಿ ಅಂತರ್ಜಲಮಟ್ಟ ಕುಸಿದಿದೆ. ಟ್ಯಾಂಕರ್ ನೀರು ತಂದು ಹಾಕಿ ತರಕಾರಿ, ತೋಟದ ಬೆಳೆಯಿಂದ ಲಾಭ ಗಳಿಸಿದವರ ಸಾಹಸಗಾಥೆ ಕಣ್ಣ ಮುಂದಿದೆ. ಒಂದಿಷ್ಟು ಕಣ್ಣು ತೆರೆದು ನೋಡಿ, ಅವಕಾಶದ ಹೆದ್ದಾರಿಯೇ ಈ ಕ್ಷೇತ್ರದಲ್ಲಿ ಇದೆ.
-ಡಾ. ಎ.ಟಿ.ಸದಾಶಿವ ವಿಜ್ಞಾನಿ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್), ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.