ಮರವೊಂದು ಸಿಡಿಲಿನ ಹೊಡೆತಕ್ಕೆ ಸಿಕ್ಕು ನೆಲಕ್ಕುರುಳಿತ್ತು. ಅದು ಜನ ಓಡಾಡುವ ದಾರಿಯೇ ಆದರೂ ಕಾಡಿನ ಮಧ್ಯೆ ಇತ್ತು. ಉದ್ದಕ್ಕೆ ವಾಹನಗಳು ನಿಂತಿದ್ದವು. ಒಬ್ಬ, ‘ಈ ಅಕಾಲದಲ್ಲಿ ಯಾಕೆ ಮಳೆ ಬಂತು?’ ಎಂದು ಚರ್ಚಿಸುತ್ತಿದ್ದ, ಇನ್ನೊಬ್ಬ ತನ್ನ ವಿಧಿಯನ್ನು ಹಳಿಯುತ್ತಿದ್ದ. ಮತೊಬ್ಬ ತನಗೆ ಕೆಲಸಕ್ಕೆ ಹೊತ್ತಾಗುತ್ತಿದೆ ಎಂದು ಚಡಪಡಿಸುತ್ತಿದ್ದ. ಮತ್ತೊಬ್ಬ ಸಿಗದ ಫೋನ್ ಲೈನನ್ನು ಹಳಿಯುತ್ತಿದ್ದರೆ, ಮಗದೊಬ್ಬ ರಸ್ತೆಯ ಬದಿ ಮರವನ್ನು ಹಾಕುವಾಗ ಸ್ವಲ್ಪ ಹಿಂದೆ ಹಾಕದೆ ಈ ಸ್ಥಿತಿಯನ್ನು ತಂದಿಟ್ಟವನನ್ನು ಬಯ್ಯುತ್ತಿದ್ದ. ಮರ ಮಾತ್ರ ರಸ್ತೆಯ ಮಧ್ಯದಲ್ಲೆ ಬಿದ್ದಿತ್ತು. ವಾಹನಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಇತ್ತು.