ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಗೋವುಗಳ ನಿರ್ವಹಣೆಗೆ ಸಾಲುತ್ತಿಲ್ಲ ಅನುದಾನ

Last Updated 6 ಮಾರ್ಚ್ 2021, 19:45 IST
ಅಕ್ಷರ ಗಾತ್ರ

ಶಿವಮೊಗ್ಗ/ಚಿತ್ರದುರ್ಗ: ರಾಜ್ಯದಲ್ಲಿ 188 ಖಾಸಗಿ ಗೋಶಾಲೆಗಳಿವೆ. ಇವುಗಳಲ್ಲಿ 50 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ಆಶ್ರಯ ಕಲ್ಪಿಸಲಾಗಿದೆ. 78 ಗೋಶಾಲೆಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ. ಉಳಿದವು ಸಮುದಾಯ, ದಾನಿಗಳ ನೆರವಿನಲ್ಲಿ ನಡೆಯುತ್ತಿವೆ. ಪ್ರಸ್ತುತ ಪ್ರತಿ ತಾಲ್ಲೂಕಿನಲ್ಲಿ ಎರಡು ಸರ್ಕಾರಿ ಗೋಶಾಲೆ ಸ್ಥಾಪಿಸಲು ಸಿದ್ಧತೆ ನಡೆದಿದೆ.

ಗೋಶಾಲೆಗೆ ಸರ್ಕಾರ ನೀಡುತ್ತಿರುವ ಅನುದಾನ ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಯಂತಾಗಿದೆ. ಮೇವು, ನೀರು ಹಾಗೂ ವೈದ್ಯಕೀಯ ಸೌಲಭ್ಯಕ್ಕೆ ದಾನಿಗಳ ನೆರವು ಪಡೆಯುವುದು ಅನಿವಾರ್ಯವಾಗಿದೆ. ಗೋಶಾಲೆಯ ಜಾನುವಾರು ಒಂದಕ್ಕೆ ನಿತ್ಯ ₹ 17.50 ಅನುದಾನ ನಿಗದಿ ಮಾಡ ಲಾಗಿದೆ. ಅನುದಾನದ ಮಾನದಂಡ ದಶಕದಿಂದ ಬದಲಾಗಿಲ್ಲ. ಬೆಲೆ ಏರಿಕೆಯ ಈ ದಿನಗಳಲ್ಲಿ ಅನುದಾನ ಸಾಕಾಗುತ್ತಿಲ್ಲ. ಇದರಿಂದ ಹಲವು ಗೋಶಾಲೆಗಳ ನಿರ್ವಹಣೆಗೆ ಟ್ರಸ್ಟಿಗಳು ಪರದಾಡುತ್ತಿದ್ದಾರೆ.

ಒಂದು ಜಾನುವಾರಿಗೆ ನಿತ್ಯ ಸರಾಸರಿ ಐದು ಕೆ.ಜಿ. ಮೇವಿನ ಅಗತ್ಯವಿದೆ. ಮಾರುಕಟ್ಟೆ ಬೆಲೆಯಲ್ಲಿ ಮೇವು ಖರೀದಿಸಿ ಗೋಶಾಲೆಗೆ ತರುವಷ್ಟರಲ್ಲಿ ಪ್ರತಿ ಕೆ.ಜಿ. ಮೇವಿಗೆ ₹4 ತಗುಲುತ್ತಿದೆ. ನೀರು, ವೈದ್ಯಕೀಯ ವೆಚ್ಚ ಸೇರಿ ಇತರ ಸೌಲಭ್ಯಕ್ಕೆ ಪರ್ಯಾಯ ಮಾರ್ಗದಲ್ಲಿ ಹಣ ಹೊಂದಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಮೇವಿಗೆ ಕೊರತೆ ಉಂಟಾದರೆ ಸಮಸ್ಯೆ ಬಿಗಡಾಯಿಸುತ್ತದೆ.

‘ಗೋಶಾಲೆಯ ರಾಸುಗಳಿಗೆ ರಾಗಿ, ಭತ್ತದ ಹುಲ್ಲು, ಮೆಕ್ಕೆಜೋಳ, ಬಿಳಿಜೋಳದ ಸೊಪ್ಪೆ ಅಗತ್ಯವಿದೆ. ಶೇಂಗಾ, ಹತ್ತಿ ಹಿಂಡಿ, ಬೂಸಾ ಕೂಡ ನೀಡುತ್ತೇವೆ. ಒಂದು ಕೆ.ಜಿ. ಶೇಂಗಾ ಹಿಂಡಿ ಬೆಲೆ ₹40 ಆಗಿದೆ. ಸರ್ಕಾರ ನೀಡುವ ಅನುದಾನ ಮೇವಿಗೂ ಸಾಲುತ್ತಿಲ್ಲ’ ಎನ್ನುತ್ತಾರೆ ಚಳ್ಳಕೆರೆ ತಾಲ್ಲೂಕಿನ ಬೊಮ್ಮದೇವರಹಟ್ಟಿಯ ಮುತ್ತೈಗಳ ಸ್ವಾಮಿ ಗೋಶಾಲೆಯ ಮುಖ್ಯಸ್ಥ ಡಿ.ಸಿ.ಪ್ರಹ್ಲಾದ್‌ ಅವರು.

ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಅನುಷ್ಠಾನಗೊಂಡ ಬಳಿಕ ಖಾಸಗಿ ಗೋಶಾಲೆಗಳಿಗೆ ಬರುವ ಜಾನುವಾರುಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ‘ನಮ್ಮ ಗೋಶಾಲೆಯಲ್ಲಿ 360 ಜಾನುವಾರುಗಳಿವೆ. ಹೊಸ ಕಾನೂನು ಜಾರಿಗೆ ಬಂದ ನಂತರ ಐದಾರು ರಾಸುಗಳು ಹೆಚ್ಚುವರಿಯಾಗಿ ಸೇರಿವೆ. ಮೂಲಸೌಲಭ್ಯಕ್ಕೆ ಅನುಗುಣವಾಗಿ ರಾಸುಗಳಿಗೆ ಆಶ್ರಯ ಕಲ್ಪಿಸಲಾಗುತ್ತಿದೆ.ಅದಕ್ಕಿಂತ ಹೆಚ್ಚಾದರೆ ನಿರ್ವಹಣೆ ಕಷ್ಟ’ ಎನ್ನುತ್ತಾರೆ 16 ವರ್ಷಗಳ ಹಿಂದೆ ಆರಂಭವಾದ ಶಿವಮೊಗ್ಗದ ಮಹಾವೀರ ಗೋಶಾಲೆಯ ಮುಖ್ಯಸ್ಥ ಹೀರಾಚಂದ್‌ ಜೈನ್‌.

ಸರ್ಕಾರಿ ಗೋಶಾಲೆಗೆ ಸಿದ್ಧತೆ: ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಎಲ್ಲೆಡೆ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆ ಸ್ಥಾಪಿಸಲು ಸ್ಥಳ ಗುರುತಿಸುವಂತೆ ಸರ್ಕಾರ ಸೂಚಿಸಿದೆ. ಕಂದಾಯ ಭೂಮಿ, ಗೋಮಾಳ, ಖರಾಬು ಜಮೀನು ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರಿ ಗೋಶಾಲೆಯ ರೂಪುರೇಷೆ ಇನ್ನಷ್ಟೇ ಸಿದ್ಧವಾಗಬೇಕಿದೆ. ಸರ್ಕಾರದ ಅನುದಾನ ಪಡೆಯದೆ, ಕೇವಲ ಸಮುದಾಯ, ದಾನಿಗಳ ನೆರವು ಪಡೆದು ನಡೆಸುತ್ತಿರುವ ಗೋಶಾಲೆಗಳಿಗೆ ಸ್ಥಳೀಯ ಶಾಸಕರು, ಸಂಸದರು ಮತ್ತಿತರ ಜನಪ್ರತಿನಿಧಿಗಳು ಕೆಲವು ಬಾರಿ ಅನುದಾನ ನೀಡಿದ್ದಾರೆ. ಹೀಗೆ ವರ್ಷಕ್ಕೆ ಬರುವ 3– 4 ಲಕ್ಷ ರೂಪಾಯಿ ಅನುದಾನ ಯಾವುದಕ್ಕೂ ಸಾಲದು ಎನ್ನುವುದು ನಿರ್ವಾಹಕರ ಅಳಲು.

ರಾಗಿ, ಭತ್ತದ ಹುಲ್ಲಿನ ಬೆಲೆ ಏರಿಕೆಯಾಗಿದೆ. ಸಾರಿಗೆ ವೆಚ್ಚವೂ ಅಧಿಕವಾಗುತ್ತಿದೆ. ಪ್ರತಿ ರಾಸುವಿನ ನಿರ್ವಹಣೆಗೆ ನೀಡುವ ಅನುದಾನ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದೇವೆ.

- ಡಿ.ಸಿ.ಪ್ರಹ್ಲಾದ್‌. ಮುಖ್ಯಸ್ಥ, ಮುತ್ತೈಗಳ ಸ್ವಾಮಿ ಗೋಶಾಲೆ

***

300ಕ್ಕೂ ಹೆಚ್ಚು ಜಾನುವಾರು ಸಾಕಲು ವರ್ಷಕ್ಕೆ ₹ 50 ಲಕ್ಷಕ್ಕೂ ಹೆಚ್ಚು ಖರ್ಚು ಬರುತ್ತದೆ. ದಿಢೀರ್ ಸಂಖ್ಯೆ ಹೆಚ್ಚಾದಾಗ ನಿರ್ವಹಣೆ ಸವಾಲಿನ ಕೆಲಸ. ಅದಕ್ಕೆ ತಕ್ಕಂತೆ ಸರ್ಕಾರವೂ ನೆರವಾಗಬೇಕು.

- ಹೀರಾಚಂದ್‌ ಜೈನ್‌, ಮುಖ್ಯಸ್ಥ, ಮಹಾವೀರ ಗೋಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT