ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ವಾಸ್ತವ ಒಪ್ಪಿಕೊಳ್ಳದ ಸಮಸ್ಯೆ

Last Updated 27 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಹಸಿವಿನ ಸೂಚ್ಯಂಕದಲ್ಲಿ ಕುಸಿತವಾಗಿದೆ ಎಂದು ಒಪ್ಪಿಕೊಂಡರೆ, ಎಲ್ಲಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುವುದೋ ಎನ್ನುವ ಆತಂಕ ಆಳುವವರನ್ನು ಆವರಿಸಿದಂತೆ ತೋರುತ್ತಿದೆ.

ಯಾವುದೇ ಸಮಸ್ಯೆ ಪರಿಹರಿಸಲು ಮೊದಲು ಮಾಡಬೇಕಿರುವುದು ಏನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲವೇ? ಸಮಸ್ಯೆ ಪರಿಹರಿಸಲು ಅನುಸರಿಸಬೇಕಾದ ಕ್ರಮಗಳ ಯಾದಿ ಯಲ್ಲಿ ಮೊದಲು ಇರುವುದು, ಆ ಸಮಸ್ಯೆ ಇದೆ ಎಂದು ಗುರುತಿಸುವುದು ಅಥವಾ ಒಪ್ಪಿಕೊಳ್ಳುವುದು. ಇದನ್ನು ಹಲವರು ತಮ್ಮ ಶೈಕ್ಷಣಿಕ ಕಲಿಕೆಯ ಭಾಗವಾಗಿಯೇ ತಿಳಿದುಕೊಂಡಿರುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ, ದೇಶ ಆಳುವವರಲ್ಲಿ ಈ ತಿಳಿವಳಿಕೆ ಇರದಿರಲು ಸಾಧ್ಯವೇ? ‘ಸಾಧ್ಯ’ ಎಂದು ಸಾಬೀತು ಮಾಡಲು ಒಕ್ಕೂಟ ಸರ್ಕಾರ ತುದಿಗಾಲಿನಲ್ಲಿ ನಿಂತಿರುವಂತೆ ಭಾಸವಾಗುತ್ತಿದೆ.

ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಕಾರ್ಯೋನ್ಮುಖ ಆಗಬೇಕಿದ್ದವರು, ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಳ್ಳಲೇ ಹಿಂಜರಿಯುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ದೇಶದ ಸ್ಥಾನ ಮತ್ತಷ್ಟು ಕುಸಿತ ಕಂಡಿರುವುದು ಒಕ್ಕೂಟ ಸರ್ಕಾರವನ್ನು ಚಿಂತೆಗೀಡುಮಾಡಬೇಕಿತ್ತು. ಜನ ಅಪೌಷ್ಟಿಕತೆಯಿಂದ ಬಳಲುವುದನ್ನು ತಡೆಗಟ್ಟಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಅವುಗಳ ಅನುಷ್ಠಾನಕ್ಕೆ ರೂಪುರೇಷೆ ಸಿದ್ಧಪಡಿಸಬೇಕಿತ್ತು. ಆದರೆ, ಒಕ್ಕೂಟ ಸರ್ಕಾರ ಮಾಡಿದ್ದೇನು? ಈ ವರದಿಯನ್ನು ತಾನು ಒಪ್ಪಿಕೊಳ್ಳುವುದಿಲ್ಲವೆಂದು ತಿಳಿಸಿತು. ಈ ಮೂಲಕ ಹಸಿವು ಈ ದೇಶದ ಬಡವರನ್ನು ಬಾಧಿಸುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸಿತು.

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಜಾಗತಿಕ ಮಾರುಕಟ್ಟೆಯಲ್ಲಿನ ವಿದ್ಯಮಾನಗಳು ಕಾರಣವೇ ವಿನಾ ಇದಕ್ಕೂ ಸರ್ಕಾರದ ನೀತಿಗಳಿಗೂ ಯಾವುದೇ ಸಂಬಂಧ ಇಲ್ಲವೆಂಬ ಧೋರಣೆ ಆಳುವವರದ್ದು. ಇವೆಲ್ಲಾ ತನ್ನ ನಿಯಂತ್ರಣದಲ್ಲಿಲ್ಲ ಎನ್ನುವ ಮೂಲಕ ಒಕ್ಕೂಟ ಸರ್ಕಾರವು ಯಾವ ಸಂದೇಶ ರವಾನಿಸಲು ಹೊರಟಿದೆ? ಸಮಸ್ಯೆಯೇ ಇಲ್ಲವೆನ್ನುವುದು ಅಥವಾ ಈ ಸಮಸ್ಯೆಗೆ ‘ನಾವು ಕಾರಣರಲ್ಲ’ ಎನ್ನುವುದು ಪಲಾಯನವಾದವಲ್ಲವೇ? ಸಮಸ್ಯೆ ಇದೆ ಎನ್ನುವುದನ್ನೇ ಒಪ್ಪಿ ಕೊಳ್ಳದವರು, ಸಮಸ್ಯೆಯನ್ನು ಪರಿಹರಿಸುವುದಿರಲಿ, ಅದು ಮತ್ತಷ್ಟು ಉಲ್ಬಣಗೊಳ್ಳದಂತೆ ಮುತುವರ್ಜಿ ತೋರುತ್ತಾರೆ ಎಂಬ ನಿರೀಕ್ಷೆ ಹೊಂದಬಹುದೇ?

ಒಕ್ಕೂಟ ಸರ್ಕಾರದ ಪಲಾಯನವಾದಿ ಧೋರಣೆ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕೂಡ ಢಾಳಾಗಿಯೇ ಗೋಚರಿಸಿತು. ಮೊದಲ ಅಲೆ ವೇಳೆ ದೇಶದಲ್ಲಿ ಹೆಚ್ಚಿನ ಸಾವು-ನೋವುಗಳು ವರದಿಯಾಗದೆ ಹೋದಾಗ ತನ್ನ ಬೆನ್ನು ತಟ್ಟಿಕೊಂಡ ಒಕ್ಕೂಟ ಸರ್ಕಾರವು ಎರಡನೇ ಅಲೆ ವೇಳೆ ಆಮ್ಲಜನಕ ಹಾಗೂ ಸಮರ್ಪಕ ಚಿಕಿತ್ಸೆ ದೊರಕದೆ ಜನ ಸಾವನ್ನಪ್ಪತೊಡಗಿದಾಗ ತನಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವ ಹಾಗೆ ಮೌನಕ್ಕೆ ಶರಣಾಯಿತು. ಅವಕಾಶ ಸಿಕ್ಕಾಗ ಬಿಜೆಪಿಯೇತರ ಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರಗಳ ಕಾರ್ಯವೈಖರಿಯತ್ತ ಬೊಟ್ಟು ಮಾಡಿತು.

ದೇಶವನ್ನು ಬಾಧಿಸುತ್ತಲೇ ಇರುವ ಬಡತನ, ನಿರುದ್ಯೋಗ, ಬೆಲೆ ಏರಿಕೆಯಂತಹ ಬಹುಮುಖ್ಯ ಸಮಸ್ಯೆಗಳಿಗೆ ಒಕ್ಕೂಟ ಸರ್ಕಾರವು ಪರಿಹಾರ ಕಂಡುಹಿಡಿಯುವ ದಿಸೆಯಲ್ಲಿ ಕಾರ್ಯೋನ್ಮುಖ ವಾಗಿದೆ ಎನ್ನುವ ವಿಶ್ವಾಸ ಮೂಡಲು, ಮೊದಲಿಗೆ ಅದು ಈ ಸಮಸ್ಯೆಗಳು ಬಿಗಡಾಯಿಸುತ್ತಿರುವುದನ್ನುಬಹಿರಂಗವಾಗಿ ಒಪ್ಪಿಕೊಳ್ಳಬೇಕಿದೆ. ಆನಂತರ ಸಮಸ್ಯೆ ಗಳಿಗೆ ಪರಿಹಾರ ಕಂಡುಹಿಡಿಯುವ ಸಲುವಾಗಿ ಅನುಸರಿಸಬೇಕಾದ ಕ್ರಮಗಳ ಜಾರಿಗೆ ಮುತುವರ್ಜಿ ತೋರಬೇಕಿದೆ. ಈ ದಿಸೆಯಲ್ಲಿ ಸಮಸ್ಯೆಯನ್ನು ವಿಶಾಲ ನೆಲೆಗಟ್ಟಿನಲ್ಲಿ ಅರ್ಥೈಸಿಕೊಂಡು, ತಜ್ಞರೊಂದಿಗೆ ಸಮಾಲೋಚಿಸಿ ಸಲಹೆಗಳನ್ನು ಪಡೆದು, ಅರ್ಹ ವೆನಿಸಿದ ಪರಿಹಾರ ಆಯ್ದುಕೊಂಡು, ಅನುಷ್ಠಾನ ಗೊಳಿಸಿ, ಆನಂತರ ಅದರ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ, ಅಗತ್ಯವಿದ್ದರೆ ಸೂಕ್ತ ಮಾರ್ಪಾಡು ಗಳನ್ನು ಮಾಡಿಕೊಳ್ಳುವ ಮನಸ್ಸು ಮಾಡಬೇಕಿದೆ.

ಅಧಿಕಾರದಲ್ಲಿ ಇರುವವರು ಚುನಾವಣೆ ಸಂದರ್ಭದಲ್ಲಿ ಮಾಡುವ ಘೋಷಣೆಗಳು, ನೀಡುವ ಭರವಸೆಗಳು ಸರ್ಕಾರವೊಂದು ಸಮಸ್ಯೆಯ ಪರಿಹಾರಕ್ಕೆ ಗಂಭೀರ ಪ್ರಯತ್ನ ಮಾಡುತ್ತಿದೆ ಎನ್ನುವ ವಿಶ್ವಾಸ ಮೂಡಿಸಲಾರವು. ನಮ್ಮನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸಲೆಂದೇ ಆಳುವವರು ಮತ್ತು ಅವರ ಹಿಂಬಾಲಕರು ಧರ್ಮ-ದೇವರು, ಮಂದಿರ-ಮಸೀದಿಯಂಥ ವಿಷಯಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ಆಗ ‘ನಿಜವಾದ ಸಮಸ್ಯೆ ಕುರಿತು ಮೊದಲು ಮಾತನಾಡಿ’ ಎಂದು ಆಗ್ರಹಿಸುವ ವಿವೇಕ ನಮ್ಮಲ್ಲಿ ಜಾಗೃತಗೊಳ್ಳಬೇಕಲ್ಲವೇ?

ಸಂಪನ್ಮೂಲಗಳ ನಿರ್ವಹಣೆಯ ಸವಾಲು ಹೊತ್ತ ಯಾರಿಗೇ ಆದರೂ ಸಮಸ್ಯೆಗಳನ್ನು ಪರಿಹರಿಸುವ ಕೌಶಲ ಇರಬೇಕಾದುದು ಅತ್ಯಗತ್ಯ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಹಿಡಿಯುವ ತಿಳಿವಳಿಕೆ ಮತ್ತು ಕೌಶಲ ಒಬ್ಬ ವ್ಯಕ್ತಿಯಲ್ಲಿರುವುದು ಅಸಾಧ್ಯ. ಆಯಾ ವಿಷಯ ತಜ್ಞರೊಂದಿಗೆ ಸಮಾಲೋಚಿಸಿ, ಸಮಸ್ಯೆ ನಿವಾರಣೆ ಅಥವಾ ಅದರ ತೀವ್ರತೆ ತಗ್ಗಿಸಲು ಇರುವ ದಾರಿಗಳ ಕುರಿತು ಅರಿತುಕೊಳ್ಳುವ ವಿವೇಕವು ಸಂಪನ್ಮೂಲಗಳ ನಿರ್ವಾಹಕರಲ್ಲಿ ಇರಬೇಕಾದುದು ಅತ್ಯಗತ್ಯ. ದೇಶದ ಸಂಪನ್ಮೂಲಗಳನ್ನು ನಿರ್ವಹಿಸುವವರಿಗೂ ಇದುಅನ್ವಯವಾಗಲಿದೆ.

ಸವಾಲುಗಳಿಗೆ ಬೆನ್ನು ತೋರಿ, ವೈಫಲ್ಯಗಳ ಹೊಣೆ ಹೊರದೆ, ಗೆಲುವಿನಲ್ಲಿ ಮಾತ್ರ ಸಿಂಹಪಾಲು ಪಡೆಯಲು ತವಕಿಸುವವರಿಂದ ಸಮಸ್ಯೆಗಳ ಪರಿಹಾರಕ್ಕೆ ಬೇಕಿರುವ ಸಮರ್ಥ ನಾಯಕತ್ವ ನಿರೀಕ್ಷಿಸಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT