ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ಕನ್ನಡ’ ಅಸ್ಮಿತೆ ಮತ್ತು ಕನ್ನಡಿಗ

ಕನ್ನಡದ ಬಗೆಗಿನ ಸದಾಶಯದ ಮಾತುಗಳು ಕನ್ನಡ ವಾತಾವರಣವನ್ನು ಜೀವಂತವಾಗಿಡಲು ನೆರವಾಗುತ್ತವೆ. ಆದರೆ...
Last Updated 4 ನವೆಂಬರ್ 2021, 22:15 IST
ಅಕ್ಷರ ಗಾತ್ರ

ಎರಡು ಸಾವಿರ ವರ್ಷಗಳಿಗಿಂತಲೂ ಹಿಂದಿನಿಂದ ಬೆಳೆದುಳಿದುಕೊಂಡು ಬಂದಿರುವ ಕನ್ನಡ, ಜಗತ್ತಿನ 15 ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ ಎಂಬುದು ಬಹುಪಾಲು ಭಾಷಾಶಾಸ್ತ್ರಜ್ಞರ ಒಪ್ಪಿತ ಅಭಿಪ್ರಾಯ. ದ್ರಾವಿಡ ಮೂಲದ ಈ ಭಾಷೆ ಮೊದಲು ‘ಕಣ್ಣರು’ (ಕನ್ನಡಿಗರ ಮೂಲದವರು ‘ಹಟ್ಟಿಕಾರರು’ ‘ವೀರಕ್ಷತ್ರಿಯರು’- ಶಂ.ಬಾ.ಜೋಶಿ) ಜನರಾಡುವ ನುಡಿಯಾ ಗಿದ್ದು, ಕ್ರಮೇಣ ‘ಚಾಕ್ಷುಷ’ (ಲಿಪಿ) ರೂಪ ಪಡೆಯಿತು. ಸದ್ಯಕ್ಕೆ, ವಿದ್ವಾಂಸರು ಒಪ್ಪಿಕೊಂಡಿರುವ ಪ್ರಕಾರ, ಲಭ್ಯವಿರುವ ಕ್ರಿ.ಶ. 5ನೆಯ ಶತಮಾನದ ‘ಪಲ್ಮಿಡಿ’ ಶಾಸನ ಕನ್ನಡದ ಮೊದಲ ಗ್ರಾಂಥಿಕ (ಅರ್ಥಾತ್ ಚಾಕ್ಷುಷ) ಸ್ವರೂಪವುಳ್ಳದ್ದು. ಆ ದಿನಗಳಲ್ಲಿ, ಅಂದರೆ ಕನ್ನಡ ಅಕ್ಷರ ರೂಪದಲ್ಲಿ ಆವಿರ್ಭವಿಸಿದಾಗ ಅದನ್ನು ಎಷ್ಟು ಜನ ಓದಬಲ್ಲವರಾಗಿದ್ದರು ಎಂಬ ಕುತೂಹಲ ತಣಿಸಲು ದಾಖಲೆಗಳು ಲಭ್ಯವಿಲ್ಲ.

ಅದಕ್ಕೂ ಮುನ್ನ ಪ್ರೊ. ಇ.ಹುಲ್ಸ್‌ರವರು ಕ್ರಿ.ಪೂ.ದ ಗ್ರೀಕ್ ಭಾಷೆಯ ಒಂದು ದಾಖಲೆಯಲ್ಲಿ ಕನ್ನಡ ಪದಗಳಿರುವುದನ್ನು ಸಂಶೋಧಿಸಿದ್ದಾರೆ. ಕ್ರಿ.ಶ. 2ನೆಯ ಶತಮಾನದ ಗ್ರೀಕ್ ನಾಟಕವೊಂದರಲ್ಲಿ ಕನ್ನಡದ ಸಾಲುಗಳಿರುವುದನ್ನು ಗೋವಿಂದ ಪೈ ಹೆಕ್ಕಿ ತೋರಿಸಿರುವರಾದರೂ ಅವು ಕನ್ನಡ ಲಿಪಿಯಲ್ಲಿಲ್ಲ; ಆದರೆ, ಕನ್ನಡ ಭಾಷೆಯಲ್ಲಿವೆ ಎಂಬುದನ್ನು ಗಮನಿಸಬೇಕು.

ಇದರಿಂದ ನಮಗೆ ಅರ್ಥವಾಗುವುದೆಂದರೆ, ಕನ್ನಡ ಮೊದಲು ಆಡುಭಾಷೆಯಾಗಿದ್ದು ಕ್ರಮೇಣ ಅದನ್ನು ಬಳಸುವವರ ಅಗತ್ಯಕ್ಕನುಗುಣವಾಗಿ ಗ್ರಾಂಥಿಕ ಸ್ವರೂಪವನ್ನೂ ಪಡೆಯಿತು ಎಂಬುದು. ಇದನ್ನೇ ಭಾಷಾ ಬೆಳವಣಿಗೆ ಎನ್ನುವುದು. ಮನುಷ್ಯನನ್ನು ಹೊರತುಪಡಿಸಿ ಭಾಷೆಗೆ ಅಸ್ತಿತ್ವವೇ ಇಲ್ಲ. ಅದರ ಸರ್ವಾಂಗೀಣ ಅಭಿವೃದ್ಧಿ ಎಂಬುದೂ ಈ ಹಿನ್ನೆಲೆಯಲ್ಲೇ ಆಗುವಂಥದ್ದು. ಈ ಸಾಮಾನ್ಯ ತಿಳಿವಳಿಕೆಯಿಂದಲೇ ನಾವು ‘ಕನ್ನಡ ಬಳಕೆ’, ‘ಕನ್ನಡದ ಅಭಿವೃದ್ಧಿ’ ಇತ್ಯಾದಿಗಳನ್ನು ಅರ್ಥೈಸಿಕೊಳ್ಳಬೇಕಿದೆ.

‘ಕನ್ನಡ’ ಶಬ್ದ ದೇಶವಾಚಕವೂ ಹೌದು, ಭಾಷಾವಾಚಕವೂ ಹೌದು. ‘ಕಣ್ಣರ ನಾಡು’ ಕನ್ನಡ. ಕಣ್ಣರ ಭಾಷೆ ಕನ್ನಡ. ಈ ಎರಡನ್ನೂ ಕುರಿತು ಇತಿಹಾಸ ಕಾಲದಿಂದಲೂ ಬರಹಗಾರರು, ಚಿಂತಕರು, ಚಳವಳಿಗಾರರು, ರಾಜಕೀಯ ವ್ಯಕ್ತಿಗಳು ಕಳಕಳಿಯ ಮತ್ತು ಭಾವುಕವಾದ ಅನೇಕ ಬಗೆಯ ಮಾತುಗಳನ್ನು ಹೇಳಿರುವುದುಂಟು. ಕವಿರಾಜಮಾರ್ಗಕಾರನ ‘ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’, ಆಂಡಯ್ಯನ ‘ಕನ್ನಡಮೆನಿಪ್ಪಾ ನಾಡು ಚೆಲ್ವಾಯ್ತು’ ಎಂಬಂಥ ವಾಸ್ತವಿಕ ಮತ್ತು ಗುಣವಾಚಕ ನುಡಿಗಳಲ್ಲಿ ಕನ್ನಡವು ದೇಶವಾಚಕವಾಗಿ ಬಳಕೆಯಾಗಿರುವು
ದನ್ನು ಕಾಣಬಹುದು. ಅದೇ ರೀತಿ ‘ಕನ್ನಡಕ್ಕಾಗಿ ಕಂಕಣ ತೊಟ್ಟವರು’, ‘ಕನ್ನಡ ಕಟ್ಟಿದವರು’, ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’, ‘ಕನ್ನಡ ಮಾತೆ ಭುವನೇಶ್ವರಿ’... ಇಂಥ ಹೇಳಿಕೆಗಳು ಮತ್ತು ಘೋಷಣೆಗಳು ಕನ್ನಡದ ಬಗ್ಗೆ ಇರುವ ಅಖಂಡ ಪ್ರೇಮವನ್ನು ವ್ಯಕ್ತಪಡಿಸುತ್ತವೆ.

ಇಂಥ ಸದಾಶಯದ ಮಾತುಗಳು ಕನ್ನಡ ವಾತಾವರಣವನ್ನು ಜೀವಂತವಾಗಿಡಲು ನೆರವಾಗುತ್ತವೆ ಎಂಬುದು ಸುಳ್ಳೇನಲ್ಲ. ಆದರೆ, ಕನ್ನಡ ಒಂದು ಭಾಷೆಯಾಗಿ ಇಷ್ಟೇ ಸತ್ಯವೋ? ಕನ್ನಡದ ಕುರಿತು ಹಳಹಳಿಕೆಯ ಮಾತುಗಳ ನಡುವೆ ಅದನ್ನಾಡುವ ಜನರ ಬದುಕನ್ನು ಕಡೆಗಣಿಸಲಾದೀತೆ?

1981ರ ಮಾರ್ಚ್ 9ರ ರಾತ್ರಿ, ನಾನು ಹಾವೇರಿಯ ರೈಲು ನಿಲ್ದಾಣದಲ್ಲಿ ತಂಗಿದ್ದೆ. ಅಲ್ಲಿಯೇ, ಗೋವಾದಲ್ಲಿ ಆಗತಾನೆ ತೀವ್ರ ಹಲ್ಲೆಗೊಳಗಾಗಿ ಓಡಿಬಂದಿದ್ದ ಉತ್ತರ ಕರ್ನಾಟಕದ ಒಂದೆರಡು ಕೂಲಿಕಾರ್ಮಿಕ ಕುಟುಂಬಗಳಿದ್ದವು. ನಾವು ಕ್ರಮೇಣ ಮಾತಿಗಿಳಿದೆವು. ಆ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಗೋವಾಕ್ಕೆ ಹೋಗಿದ್ದಾಗ, ಅಲ್ಲಿ ತಮಗಾದ ಹಲ್ಲೆಯ ವಿವರಗಳನ್ನು ಹಂಚಿಕೊಳ್ಳುತ್ತಾ ‘ನಾವೂ ಕನ್ನಡ ಮಂದಿ ನೋಡ್ರಿ, ಆದರ, ನಮಗ್ಯಾರೂ ಸಹಾಯ ಮಾಡೋಣಿಲ್ರಿ, ಬರೀ ಕನ್ನಡ ಅಂತಾರ‍್ರಿ...’ ಅಂತ ಹೇಳುತ್ತಲೇ ಹೋದರು. ಈ ನಿದರ್ಶನದ ಉದ್ದೇಶವೆಂದರೆ, ಭಾವನಾತ್ಮಕವಾಗಿ ಕನ್ನಡವನ್ನು ಅವಲೋಕಿಸುವುದಕ್ಕೂ ವಾಸ್ತವಿಕ ಬದುಕಿಗೂ ಇರುವ ಭಿನ್ನತೆಯನ್ನು ಗುರುತಿಸುವುದೇ ಆಗಿದೆ.

ಈ ಕೂಲಿಕಾರ್ಮಿಕರಿಗೆ ಕನ್ನಡಪರ ಹೇಳಿಕೆಗಳು, ಘೋಷಣೆಗಳು ಯಾವುವೂ ಪ್ರಸ್ತುತವಾಗುವುದಿಲ್ಲ. ಕನ್ನಡ ನೈಜವಾಗಿ ಬಳಕೆಯಾಗಿ, ಬೆಳೆಯುವುದು ಅವರ ಭೌತಿಕ ಬದುಕು ಸಮಾಧಾನಕರವಾಗಿದ್ದಾಗ ಮಾತ್ರ. ಅಲ್ಲದಿದ್ದರೆ, ಭಾವನಾತ್ಮಕ ಸಂಬಂಧಗಳಿಂದ ಕನ್ನಡ ಭಾಷೆ ನಿಲ್ಲಲಾರದು, ನಳನಳಿಸಿ ಬೆಳೆಯಲಾರದು.

ವ್ಯಕ್ತಿಯನ್ನು ಹೊರತುಪಡಿಸಿ ಭಾಷೆಯ ಇರು ವಿಕೆಯಿಲ್ಲ. ಹೀಗಾಗಿ ಕನ್ನಡಪರ ಹೇಳಿಕೆಗಳು, ಘೋಷಣೆಗಳು, ಉದ್ಘೋಷಣೆಗಳು ತಾತ್ಕಾಲಿಕವಾಗಿ ಸಮಾಧಾನ, ಖುಷಿ ತರಬಹುದೇ ಹೊರತು ಶಾಶ್ವತವಾಗಿಯಲ್ಲ. ಹಾಗಾಗಿ, ಕನ್ನಡಿಗರ ಅದರಲ್ಲೂ ಮುಖ್ಯವಾಗಿ ಕೆಳವರ್ಗದವರ ಬದುಕನ್ನು ಉತ್ತಮಗೊಳಿಸುವತ್ತ ಅರ್ಥಾತ್ ಸಾಮಾಜಿಕ ಮತ್ತು ಆರ್ಥಿಕ ವಲಯಗಳಲ್ಲಿ ಪ್ರಯತ್ನಗಳು ಆಗಬೇಕಾದ ಅಗತ್ಯ ಮತ್ತು ಅನಿವಾರ್ಯ ಇದ್ದೇ ಇದೆ. ಆಗಮಾತ್ರ ಕನ್ನಡ ಹುಟ್ಟುವುದು, ಕಟ್ಟುವುದು, ಜಗದಗಲಕ್ಕೂ ಮುಟ್ಟುವುದು ಸಾಧ್ಯವಾಗುತ್ತದೆ ಎಂಬ ಅರಿವು ನಮಗಿರಬೇಕು.

ವ್ಯಕ್ತಿಯ ಭೌತಿಕ ಬದುಕು ಸಂಪನ್ನವಾಗಿದ್ದಾಗ ಸಹಜವಾಗಿಯೇ ಬೌದ್ಧಿಕ ಬದುಕಿನ ಸಾಮರ್ಥ್ಯ ವಿಸ್ತರಿಸುತ್ತದೆ. ಅದರೊಂದಿಗೆ ಅವರ ಎಲ್ಲ ಸಾಮಾಜಿಕ, ಸಾಂಸ್ಕೃತಿಕವೇ ಮೊದಲಾದ ಕ್ಷೇತ್ರಗಳು ಅರಳುತ್ತವೆ. ಅಂಥ ವ್ಯಕ್ತಿಸಮೂಹದಿಂದ ಕೂಡಿದ ಸಮಾಜವು ಬದುಕಿನ ನೈಜ ಕೊಡುಗೆಯನ್ನು ನೀಡಬಲ್ಲುದು. ಅಂಥ ಸಮಾಜ ನಮ್ಮ ಕನ್ನಡಿಗರದ್ದಾಗಲಿ ಎಂದು ನಾವಾದರೂ ಹಾರೈಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT