ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪರಂಪರೆಯ ಭಂಡಾರಕ್ಕೆ ಕೀಲಿಕೈ

ಸಂಸ್ಕೃತದ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಖಂಡಿತ ಆತ್ಮವಂಚನೆಯಾಗುತ್ತದೆ
Last Updated 23 ಆಗಸ್ಟ್ 2021, 21:15 IST
ಅಕ್ಷರ ಗಾತ್ರ

ಸಂಸ್ಕೃತವು ಗಣಕೀಕರಣಕ್ಕೆ, ಕೃತಕ ಬುದ್ಧಿಮತ್ತೆಗೆ ಹೇಳಿಮಾಡಿಸಿದ ಭಾಷೆ ಎಂದು ಅಮೆರಿಕದ ನಾಸಾ ಸಂಸ್ಥೆ ಒಕ್ಕೊರಲಿನಿಂದ ಅಭಿಪ್ರಾಯಪಟ್ಟಿದೆ. ಸಂಸ್ಕೃತ ಎಂದರೇನೆ ಸಂಸ್ಕರಿಸಿದ್ದು, ಮಾಗಿದ್ದು ಎಂದರ್ಥ. ಸಂಸ್ಕೃತ ವ್ಯಾಕರಣವು ಸಂದರ್ಭ, ಪರಿಕಲ್ಪನೆ, ಅರ್ಥ, ಭಾವಗಳಿಗೆ ತಕ್ಕಂತೆ ಅಸಂಖ್ಯ ಪದಗಳನ್ನು ಸೃಷ್ಟಿಸಬಹುದಾದಷ್ಟು ಸಮರ್ಥವಾಗಿದೆ. ಸಂಸ್ಕೃತದಲ್ಲಿ ಶಬ್ದಾರ್ಥ ಸಂಬಂಧಗಳ ರಚನೆ ವೈಜ್ಞಾನಿಕ. ನೀರಿಗೆ ಸಂಸ್ಕೃತದಲ್ಲಿ 62 ಪದಗಳಿವೆ. ಮಳೆಗೆ 250, ಭೂಮಿಗೆ 65.

ಒಂದು ವಾಕ್ಯ ಹೇಳುವುದನ್ನು ಒಂದು ಪದ ಹೇಳುತ್ತದೆ. ಬರೆದಂತೆ ಮಾತು, ನಿಯಮದಂತೆ ನಾಜೂಕಿನ ಪದ ವಿಭಜನೆ ಸಂಸ್ಕೃತದಲ್ಲಿ ಮಾತ್ರ ಸಾಧ್ಯ. ಹಾಗಾಗಿಯೇ ಸಹಸ್ರಾರು ವರ್ಷಗಳಿಂದ ಸಂಸ್ಕೃತ ಭಾಷೆ ಬದಲಾಗದೆ ಉಳಿದಿದೆ. ಅಮೆರಿಕ, ಜರ್ಮನಿ, ಬ್ರಿಟನ್, ಆಸ್ಟ್ರೇಲಿಯಾ, ಥಾಯ್ಲೆಂಡ್‌ ಮುಂತಾದ ದೇಶಗಳಲ್ಲಿ ಸಂಸ್ಕೃತ ವಿಜೃಂಭಿಸಿದೆ. ವಿದೇಶಿ ಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಕಲಿಕೆ, ಅಧ್ಯಾಪನ, ಸಂಶೋಧನೆಗಳು ನಿರಾತಂಕ. ಆದರೆ ಅದರ ಜನ್ಮಸ್ಥಾನ ವಾದ ಭಾರತದಲ್ಲಿ ಸಂಸ್ಕೃತಕ್ಕೆ ‘ಮೃತ ಭಾಷೆ’ ಎಂಬ ವಿಶೇಷಣ!

ಬ್ಯಾಂಕಾಕ್‍ನಲ್ಲಿ2015ರಲ್ಲಿ ‘ವಿಶ್ವ ಸಂಸ್ಕೃತ ಸಮ್ಮೇಳನ’ ನೆರವೇರಿತು. ಉತ್ತರ ಸಿರಿಯಾದ ಮಿಟ್ಟಾನಿ ಎಂಬ ರಾಜವಂಶಸ್ಥರು ಕ್ರಿ.ಪೂ. 1500- 1350ರ ಅವಧಿಯಲ್ಲಿ ಋಗ್ವೇದದ ಭಾಷೆ ಹೋಲುವ ಶ್ಲೋಕಗಳನ್ನು ಶಾಸನಗಳಲ್ಲಿ ದಾಖಲಿಸಿದ್ದಾರೆ. ಇಂಥ ಅನುರಣಿಸುವ ಭಾಷೆಗೆ ಮಾರುಹೋದ ವಿದೇಶಿ ವಿದ್ವಾಂಸರ ಸಾಲು ಸಾಲೇ ಇದೆ. ಜೆ.ಗೋಥೆ, ಆರ್ಥರ್ ವಿಲಿಯಂ ರೈಡರ್, ಮ್ಯಾಕ್ಸ್‌ಮುಲ್ಲರ್, ಜಾಕೊಬಿ ಸಂಸ್ಕೃತ ಸಾಹಿತ್ಯವನ್ನು ಮನನ ಮಾಡಿಕೊಂಡಿದ್ದಲ್ಲದೆ ಅನುವಾದ, ವ್ಯಾಖ್ಯಾನ, ವಿಮರ್ಶೆಯ ಕೈಂಕರ್ಯದಲ್ಲಿ ತನ್ಮಯರಾದರೆಂದರೆ ಇನ್ನು ಹೇಳುವುದೇನಿದೆ?

ಸುಮಾರು 2600 ವರ್ಷಗಳ ಹಿಂದೆ ಮಹರ್ಷಿ ಕಣಾದ ತನ್ನ ‘ವೈಶೇಷಿಕ ಸೂತ್ರ’ ಕೃತಿಯಲ್ಲಿ ಗುರುತ್ವ ಸಿದ್ಧಾಂತವನ್ನು ಸಾದರಪಡಿಸಿದ್ದಾನೆ. ‘ಗುರುತ್ವ ಪ್ರಯತ್ನ ಸಂಯೋಗನಾಮ್ ಉತ್ಪ್ರೇಕ್ಷಣಾಮ್’- ವಸ್ತು ಮೇಲಕ್ಕೆ ಎಸೆದಾಗ ಗುರುತ್ವ ಬಲ ಮತ್ತು ಎಸೆತದ ಬಲದ ಫಲಿತಾಂಶವೆ ಅದರ ಮೇಲ್ಮುಖ ಬಲ. ಅಂದರೆ ನ್ಯೂಟನ್‍ಗೆ ಸುಮಾರು 3000 ವರ್ಷಗಳ ಮೊದಲೇ ಭಾರತದಲ್ಲಿ ಗುರುತ್ವಾಕರ್ಷಣ ಸಿದ್ಧಾಂತ ಮನುಷ್ಯನ ಪ್ರತಿಭೆಗೆ ಒಲಿದಿತ್ತೇ? ಇಂತಹ ನಿದರ್ಶನಗಳು ಹಲವು. ಯಾರೇ ಸಂಸ್ಕೃತ ಬಹು ಕಠಿಣ, ಕಷ್ಟ ಎಂದರೆ ಅವರಾಗಲೇ ಮೂರು ಸಂಸ್ಕೃತ ಪದಗಳನ್ನು ಬಳಸಿ ಬಿಟ್ಟಿರುತ್ತಾರೆ! ಸಂಸ್ಕೃತ ಪದಗಳಿಲ್ಲದ ಭಾಷೆಗಳಿಲ್ಲ.

ಪಶ್ಚಿಮದಿಂದ ಬರುವ ಜ್ಞಾನದ್ರವ್ಯ ಇಂಗ್ಲಿಷಿನಲ್ಲಿರುತ್ತದೆ ಎನ್ನುವ ಕಾರಣಕ್ಕೆ ನಮ್ಮ ಮಕ್ಕಳಿಗೆ ಇಂಗ್ಲಿಷ್ ಭರದಿಂದ ಕಲಿಸುತ್ತೇವೆ. ಸಂಸ್ಕೃತದಲ್ಲಿ ಸಮಾಜ ವಿಜ್ಞಾನ, ಇತಿಹಾಸ, ಭೂಗೋಳ, ಗಣಿತ, ವೈದ್ಯಕೀಯ, ವಾಸ್ತು, ತರ್ಕ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ, ಖಗೋಳ ವಿಜ್ಞಾನ, ಲೋಹವಿಜ್ಞಾನ, ಕೃಷಿ- ಹೀಗೆ ಎಲ್ಲ ಅರಿವಿನ ಶಾಖೆಗಳೂ ಶತಮಾನಗಳಿಂದಲೂ ಇವೆ.

ನಮ್ಮ ಪ್ರಾಚೀನರ ಜ್ಞಾನ ಭಂಡಾರದ ಕೀಲಿಕೈ ಸಂಸ್ಕೃತ. ಅದು ಒಂದು ವರ್ಗದ, ಮತದ ಅಥವಾ ಒಂದು ಧರ್ಮದ ಭಾಷೆಯಲ್ಲ. ತಂತ್ರ ಮಂತ್ರೋಚ್ಚಾರಗಳಿಗೆ ರೂಪಿಸಿಕೊಂಡ ಭಾಷೆಯಾಗಲಿ ಅಲ್ಲ. ಸಂಸ್ಕೃತ ಯಾವುದೇ ಆಹಾರ ಪದ್ಧತಿಯನ್ನು ನಿರ್ದೇಶಿಸುವುದಿಲ್ಲ. ‘ಭಾರತದಲ್ಲಿ ನಿಧಿಯುಂಟೆ ಅಂತ ಯಾರಾದರೂ ಪ್ರಶ್ನಿಸಿದರೆ ನಾನಂತೂ ಇದೆ, ಅದು ಸಂಸ್ಕೃತ ಭಾಷೆಯೆಂದು ಉತ್ತರಿಸುವೆ’ ಎನ್ನುತ್ತಿದ್ದರು ಪ್ರಧಾನಿಯಾಗಿದ್ದ ನೆಹರೂ.

ಭಾಷೆಗಳು ಸಮಾಜವನ್ನು ಒಗ್ಗೂಡಿಸುತ್ತವೆಯೆ ವಿನಾ ವಿಭಜಿಸುವುದಿಲ್ಲ. ಸಂಸ್ಕೃತದ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಖಂಡಿತ ಆತ್ಮವಂಚನೆಯಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಶೇಕಡಾವಾರು ಅಂಕ ಲಭಿಸುವುದೆಂದು ಸಂಸ್ಕೃತವನ್ನು ಐಚ್ಛಿಕ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬಾರದು. ಶೈಕ್ಷಣಿಕ ವಲಯದಲ್ಲಿ ಅಭ್ಯಾಸ ದೃಷ್ಟಿ ಯಿಂದ ಸಂಸ್ಕೃತವನ್ನು ನೋಡದಿದ್ದರೆ ಸಂಸ್ಕೃತದಲ್ಲಿ ಲೋಕಾಭಿರಾಮ, ಸಂವಾದ ನಿರೀಕ್ಷಿಸುವುದಾದರೂ ಹೇಗೆ?

ನಮ್ಮ ಶಾಲಾ ಕಾಲೇಜುಗಳಲ್ಲಿ ಸಂಸ್ಕೃತದ ಬೋಧನೆ ಸಂಸ್ಕೃತದಲ್ಲೇ ಆಗಬೇಕು. ಮೊದಮೊದಲು ಮಕ್ಕಳಿಗೆ ತ್ರಾಸವಾದರೂ ಕ್ರಮೇಣ ಹೊಂದಿಕೊಳ್ಳುತ್ತಾರೆ. ಕರ್ನಾಟಕದ ಮತ್ತೂರು, ಮಧ್ಯ ಪ್ರದೇಶದ ಜಿಹಿರಿ, ಬಾಗುವರ್, ಒಡಿಶಾದ ಸಸಾನ ಮತ್ತು ರಾಜಸ್ಥಾನದ ಗನೋರ- ಇವು ಜನ ಸಂಸ್ಕೃತದಲ್ಲಿ ಮಾತನಾಡುವ ಗ್ರಾಮಗಳು.

ಭಾರತದಲ್ಲಿ ಸಂಸ್ಕೃತ ಮಾತನಾಡುವವರ ಸಂಖ್ಯೆ ಶೇಕಡ 0.05ಕ್ಕೂ ಕಡಿಮೆ. ಸಂಕಲ್ಪಿಸಿದರೆ ಎರಡೇ ವರ್ಷಗಳಲ್ಲಿ ಸಂಸ್ಕೃತ ಕಲಿತು ನಿರರ್ಗಳವಾಗಿ ಮಾತನಾಡಬಹುದು. ಅದೇ ಇಂಗ್ಲಿಷ್‍ಗೆ 8-10 ವರ್ಷಗಳೇ ಬೇಕು. ಪೋಷಕರು ತಮ್ಮ ಮಕ್ಕಳನ್ನು ಸಂಸ್ಕೃತ ಕಲಿಯಲು ಉತ್ತೇಜಿಸಬೇಕು. ಇದರಿಂದ ಏಕಾಗ್ರತೆ, ಧ್ವನಿ ಶುದ್ಧಿ, ಸಹನಶೀಲತೆ ಮಕ್ಕಳಲ್ಲಿ ಪ್ರಾಪ್ತವಾಗುತ್ತದೆ. ದೆಹಲಿ ದೂರದರ್ಶನದಿಂದ ‘ವಾರ್ತಾ ವಳಿ’ ಸಂಸ್ಕೃತ ಸಾಪ್ತಾಹಿಕ ವಾರ್ತೆ ಪ್ರಸಾರವಾಗುತ್ತದೆ, ‘ಸುಧರ್ಮಾ’ ಸಂಸ್ಕೃತ ದೈನಿಕ ಪತ್ರಿಕೆ ಮೈಸೂರಿನಿಂದ ಪ್ರಕಟವಾಗುತ್ತದೆ. ‘ಸಂಸ್ಕೃತ ಭಾರತಿ’ ಎಂಬ ಅಂತರರಾಷ್ಟ್ರೀಯ ಸಂಸ್ಥೆಯಂತೂ ಅವಿರತವಾಗಿ ಸಂಸ್ಕೃತವನ್ನು ಜನಪ್ರಿಯಗೊಳಿಸಲು ಬಹುಮುಖವಾಗಿ ಶ್ರಮಿಸುತ್ತಿದೆ. ವಿಶ್ವ ಸಂಸ್ಕೃತ ದಿನವನ್ನು ಭಾನುವಾರವಷ್ಟೇ ಆಚರಿಸಿದ್ದೇವೆ. ಇದೇನೆ ಇರಲಿ ಅತ್ಯುತ್ಸಾಹದಿಂದ ನಾವು ಸಂಸ್ಕೃತ ಭಾಷೆಯನ್ನು ಆಪ್ತವಾಗಿಸಿಕೊಳ್ಳಬಹುದು.

ಹೌದು, ಕಣ್ತೆರೆಸುವ ಅರಿವುಗಳ ಆಗರವಾದ ಒಂದು ಭಾಷೆ ಪ್ರಾಚೀನವೋ ಅರ್ವಾಚೀನವೋ ಅದರ ಶ್ರೇಷ್ಠತೆಯೇ ನಮಗೆ ಲಾಭ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT