ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಭೌತಿಕ ಶುಚಿತ್ವ ಮತ್ತು ಬೌದ್ಧಿಕ ವಿಕಸನ

ಭೌತಿಕ ಶುಚಿತ್ವಕ್ಕೆ ಆದ್ಯತೆ ನೀಡುವ ಶೌಚಾಲಯ ಮತ್ತು ಬೌದ್ಧಿಕ ವಿಕಸನಕ್ಕೆ ದಾರಿ ಮಾಡಿಕೊಡುವ ಗ್ರಂಥಾಲಯಗಳ ಸ್ಥಾಪನೆ ಮತ್ತು ನಿರ್ವಹಣೆ ಕೊರತೆಯು ಬಹುದೊಡ್ಡ ಸಮಸ್ಯೆಯಾಗಿದೆ
Published 9 ಜುಲೈ 2023, 19:45 IST
Last Updated 9 ಜುಲೈ 2023, 19:45 IST
ಅಕ್ಷರ ಗಾತ್ರ

–ರಾಜಕುಮಾರ ಕುಲಕರ್ಣಿ

ಮಿತ್ರರೊಬ್ಬರ ಊರಿನಲ್ಲಿ ಇತ್ತೀಚೆಗೆ ಮುಖ್ಯ ಬಸ್ ನಿಲ್ದಾಣಕ್ಕಿಂತ ಹಿಂದಿನ ನಿಲ್ದಾಣದಲ್ಲಿ ಇಳಿದು, ಮೂತ್ರವಿಸರ್ಜನೆಗಾಗಿ ಸುತ್ತಲೂ ದೃಷ್ಟಿ ಬೀರಿದವನಿಗೆ ಅಲ್ಲೆಲ್ಲೂ ಸಾರ್ವಜನಿಕ ಶೌಚಾಲಯ ಗೋಚರಿಸಲಿಲ್ಲ. ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳಿಂದ ದಟ್ಟವಾದ ಆ ಪ್ರದೇಶದಲ್ಲಿ ಬಯಲುಭೂಮಿಯನ್ನು ಹುಡುಕಿಕೊಂಡು ಹೋಗುವುದು ಅಸಾಧ್ಯವಾದ ಕೆಲಸವಾಗಿತ್ತು. ಕೊನೆಗೆ ಈ ಸಮಸ್ಯೆಗೆ ಪರಿಹಾರ ಸ್ನೇಹಿತರ ಮನೆ ತಲುಪಿದ ನಂತರವೇ ಪ್ರಾಪ್ತವಾಯಿತು. ಮನೆ ತಲುಪುವವರೆಗೂ ನನಗಾದ ಸಂಕಟ ವರ್ಣಿಸಲಸಾಧ್ಯವಾಗಿತ್ತು. ‘ಸಾರ್ವಜನಿಕರ ಅನುಕೂಲಕ್ಕೆಂದು ಈ ಊರಿನಲ್ಲಿ ರಸ್ತೆಬದಿ ಶೌಚಾಲಯಗಳಿಲ್ಲ ನೋಡಿ’ ಎಂದ ಸ್ನೇಹಿತರ ಮಾತಿನಲ್ಲಿ ಸ್ಥಳೀಯ ಆಡಳಿತದ ವೈಫಲ್ಯ ಢಾಳಾಗಿ ಎದ್ದು ಕಾಣುತ್ತಿತ್ತು.

ಇದೇ ಸಮಯದಲ್ಲಿ ನನ್ನ ಸ್ನೇಹಿತರ ಮನೆಗೆ ಅತಿಥಿಯಾಗಿ ಬಂದಿದ್ದ ಹಿರಿಯರೊಬ್ಬರು ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು. ಮನೆಯಿಂದ ಸಾರ್ವಜನಿಕ ಗ್ರಂಥಾಲಯ ಬಹಳ ದೂರದಲ್ಲಿ ಇರುವುದರಿಂದ ಸ್ನೇಹಿತರು ತಮ್ಮ ಅಸಹಾಯಕತೆ ತೋಡಿಕೊಂಡರು. ಹಿರಿಯರು ಸಮೀಪದಲ್ಲಿ ಶಾಖಾ ಗ್ರಂಥಾಲಯ ಇದೆಯೇ ಎಂದು ಕೇಳಿದರು. ಆಗ ಸ್ನೇಹಿತರ ಉತ್ತರ ನಕಾರಾತ್ಮಕವಾಗಿತ್ತು. ಕೊನೆಗೆ ಖಾಸಗಿ ಗ್ರಂಥಾಲಯದ ಬಗ್ಗೆ ಪ್ರಶ್ನಿಸಿದರು. ಈ ಖಾಸಗಿ ಗ್ರಂಥಾಲಯ ಎನ್ನುವ ವ್ಯವಸ್ಥೆ ಮರೆಯಾಗಿ ಹಲವು ದಶಕಗಳೇ ಸಂದಿರುವಾಗ, ಉತ್ತರಿಸಲು ಸ್ನೇಹಿತರಿಗೆ ತುಂಬ ಇರಿಸುಮುರಿಸಾಯಿತು. ಪುಸ್ತಕಗಳ ಓದಿನ ಸಂಸ್ಕೃತಿಯೇ ನಾಶವಾಗುತ್ತಿದೆಯಲ್ಲ ಎಂದು ಹಿರಿಯರು ಬಹಳ ವೇದನೆಪಟ್ಟುಕೊಂಡರು.

ಶೌಚಾಲಯ ಮತ್ತು ಗ್ರಂಥಾಲಯವು ನಾಗರಿಕ ಸಮಾಜದ ಎರಡು ಬಹುಮುಖ್ಯ ಅಗತ್ಯಗಳಾಗಿವೆ. ಒಂದು ಭೌತಿಕ ಶುಚಿತ್ವಕ್ಕೆ ಆದ್ಯತೆ ನೀಡಿದರೆ ಇನ್ನೊಂದು ಬೌದ್ಧಿಕ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ಮನುಷ್ಯನು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಎರಡೂ ಸ್ತರಗಳಲ್ಲಿ ಪ್ರಗತಿ ಸಾಧಿಸಬೇಕಿರುವುದರಿಂದ ಇವೆರಡೂ ಅತಿ ಅಗತ್ಯದ ಬೇಡಿಕೆಗಳಾಗಿವೆ. ಈ ದಿಸೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರವು ಸಾರ್ವಜನಿಕ ಶೌಚಾಲಯಗಳನ್ನು ಮತ್ತು ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಆದರೆ ಸ್ಥಾಪನೆಯಲ್ಲಿರುವ ಆಸಕ್ತಿ ನಂತರದ ದಿನಗಳಲ್ಲಿ ಅವುಗಳ ನಿರ್ವಹಣೆಯಲ್ಲಿ ಕಾಣಿಸುತ್ತಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಗ್ರಂಥಾಲಯಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳು ಮತ್ತು ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿನ ಶೌಚಾಲಯಗಳು ಅವ್ಯವಸ್ಥೆಯ ಆಗರಗಳಾಗಿವೆ. ಶೌಚಾಲಯಗಳನ್ನು ಪ್ರವೇಶಿಸಿ ಅಲ್ಲಿನ ದುರ್ಗಂಧವನ್ನು ಸಹಿಸಿಕೊಳ್ಳುವುದಕ್ಕಿಂತ ದೈಹಿಕ ಒತ್ತಡವನ್ನು ಸಹಿಸಿಕೊಳ್ಳುವುದು ಎಷ್ಟೋ ಪಾಲು ಉತ್ತಮ ಎನಿಸುತ್ತದೆ. ‘ಶುಚಿತ್ವವಿದ್ದಲ್ಲಿ ದೈವತ್ವವಿದೆ’ ಎಂದ ಮಹಾತ್ಮ ಗಾಂಧಿಯವರ ಮಾತನ್ನು ಸರ್ಕಾರ ಮತ್ತು ಸಾರ್ವಜನಿಕರು ಅರ್ಥಮಾಡಿಕೊಂಡಿಲ್ಲ.

ಇನ್ನು ಸಾರ್ವಜನಿಕ ಗ್ರಂಥಾಲಯಗಳಲ್ಲಿಯೂ ಅನೇಕ ಸಮಸ್ಯೆಗಳಿವೆ. ಪುಸ್ತಕ, ಪೀಠೋಪಕರಣ ಮತ್ತು ಸಿಬ್ಬಂದಿಯ ಕೊರತೆಯಿಂದ ಅವು ಓದುಗರನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿವೆ. ಅಗತ್ಯದ ಪುಸ್ತಕಗಳಿಗಿಂತ ಅನಗತ್ಯದ ಪುಸ್ತಕಗಳ ಸಂಖ್ಯೆಯೇ ಅಲ್ಲಿ ಹೆಚ್ಚು. ಗುಣಾತ್ಮಕ ಪುಸ್ತಕಗಳ ಕೊರತೆಯಿಂದಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ಭೇಟಿ ನೀಡುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯದ ಪರಿಕಲ್ಪನೆ ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಅದೆಷ್ಟೋ ಹಳ್ಳಿಗಳಲ್ಲಿ ಸರ್ಕಾರದ ಅನುದಾನದಲ್ಲಿ ಕಟ್ಟಿದ ಶೌಚಾಲಯಗಳನ್ನು ಮನೆಯ ಅನುಪಯುಕ್ತ ವಸ್ತುಗಳನ್ನು ಶೇಖರಿಸಿಡಲು ಜನರು ಉಪಯೋಗಿಸುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಪರಿಣಾಮವಾಗಿ, ‘ಬಯಲುಶೌಚ ಮುಕ್ತ’ ಎನ್ನುವುದು ಸರ್ಕಾರದ ದಸ್ತಾವೇಜುಗಳಲ್ಲಿ ಮಾತ್ರ ದಾಖಲಾಗುತ್ತಿದೆ ವಿನಾ ಪ್ರಾಯೋಗಿಕವಾಗಿ ಸಾಕಾರಗೊಂಡಿಲ್ಲ.

ಇದೇ ಮಾತು ಗ್ರಾಮೀಣ ಗ್ರಂಥಾಲಯಗಳಿಗೂ ಅನ್ವಯಿಸುತ್ತದೆ. ಕಾಟಾಚಾರಕ್ಕೆ ಎನ್ನುವಂತೆ ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆಯೇ ವಿನಾ ಅವುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಸ್ಥಳೀಯರನ್ನೇ ಗ್ರಂಥಾಲಯಗಳ ಮೇಲ್ವಿಚಾರಕರನ್ನಾಗಿ ನೇಮಿಸುತ್ತಿರುವುದರಿಂದ ಅವರ ಕಾರ್ಯನಿರ್ವಹಣೆ ಕುರಿತು ಪ್ರಶ್ನಿಸುವಂತಿಲ್ಲ. ಕೆಲವು ಗ್ರಾಮಗಳಲ್ಲಿ ಗ್ರಂಥಾಲಯಗಳು ಜೂಜು ಮತ್ತು ಇಸ್ಪೀಟ್ ಆಟದ ಅಡ್ಡಾಗಳಾಗಿ ಪರಿವರ್ತನೆಗೊಂಡಿವೆ.

ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಮತ್ತು ಶೌಚಾಲಯದ ಕೊರತೆ ಬಹುಮುಖ್ಯ ಸಮಸ್ಯೆಯಾಗಿದೆ. ನಗರ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿಯೂ ಗ್ರಂಥಾಲಯ ಮತ್ತು ಶೌಚಾಲಯಗಳಿಲ್ಲ. ಶೌಚಾಲಯದ ಕೊರತೆಯಿಂದಾಗಿ ಮಕ್ಕಳು ದೈಹಿಕ ಒತ್ತಡವನ್ನು ಸಹಿಸಿಕೊಂಡು ಪಾಠದತ್ತ ಗಮನವನ್ನು ಕೇಂದ್ರೀಕರಿಸುವುದು ಕಷ್ಟಸಾಧ್ಯ. ವಿಶೇಷವಾಗಿ ವಿದ್ಯಾರ್ಥಿನಿಯರು ಈ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಎದುರಿಸುತ್ತಿದ್ದಾರೆ. ಇದರಿಂದ, ಪ್ರತಿ ತಿಂಗಳ ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಶಾಲೆಗೆ ಗೈರುಹಾಜರಾಗುವುದು ಕಡ್ಡಾಯ ಎನ್ನುವಂತಾಗಿದೆ.

ಜ್ಞಾನ ಕಲಿಕೆಯ ಕೇಂದ್ರವಾದ ಶಾಲೆಗಳಲ್ಲಿ ಅತ್ಯುತ್ತಮ ಗ್ರಂಥಾಲಯಗಳನ್ನು ಸ್ಥಾಪಿಸಲು ಸರ್ಕಾರ ನಿರಾಸಕ್ತಿ ತೋರಿಸುತ್ತಿದೆ. ಮುಖ್ಯೋಪಾಧ್ಯಾಯರ ಕೋಣೆಯಲ್ಲಿ ಕಾಟಾಚಾರಕ್ಕೆ ಎನ್ನುವಂತೆ ಕೆಲವು ಪುಸ್ತಕಗಳನ್ನು ಅಲ್ಮೆರಾದಲ್ಲಿ ಜೋಡಿಸಿಟ್ಟು, ಗ್ರಂಥಾಲಯವೆಂದು ಮಕ್ಕಳಿಗೆ ತೋರಿಸಲಾಗುತ್ತಿದೆ. ಪಠ್ಯಪುಸ್ತಕಗಳ ಪೂರೈಕೆಯಲ್ಲೇ ಅನೇಕ ಸಮಸ್ಯೆಗಳಿರುವಾಗ ಇನ್ನು ಶಾಲಾ ಗ್ರಂಥಾಲಯಗಳಿಗೆ ಸಾಹಿತ್ಯದಂತಹ ಪಠ್ಯೇತರ ಪುಸ್ತಕಗಳನ್ನು ಪೂರೈಸುವುದು ದೂರದ ಮಾತು. ಶಿಕ್ಷಕರಲ್ಲಿನ ಓದಿನ ಅಭಿರುಚಿಯ ಕೊರತೆ ಕೂಡ ಶಾಲೆಗಳಲ್ಲಿ ಗ್ರಂಥಾಲಯ ಸ್ಥಾಪನೆಯ ಹಿನ್ನಡೆಗೆ ಕಾರಣವಾಗುತ್ತಿದೆ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಓದಿನ ಹವ್ಯಾಸವನ್ನು ಬೆಳೆಸುವಲ್ಲಿ ವಿಫಲವಾಗುತ್ತಿರುವುದರಿಂದ ಸಹಜವಾಗಿಯೇ ಪುಸ್ತಕಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ.

ನಾಗರಿಕ ಸಮಾಜದ ಈ ಎರಡು ಅಗತ್ಯದ ಬೇಡಿಕೆಗಳನ್ನು ಅನುಷ್ಠಾನಕ್ಕೆ ತಂದು, ಅವುಗಳನ್ನು ನಿರ್ವಹಿಸಬೇಕಾದ ಹೊಣೆಗಾರಿಕೆ ಸರ್ಕಾರದ್ದಾಗಿದೆ. ಜೊತೆಗೆ ಅವುಗಳನ್ನು ಸಮರ್ಪಕವಾಗಿ ಉಪಯೋಗಿಸುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ ಎನ್ನುವುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT