ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹಲ್ಲಿರುವ ಹಾವಾಗಿರಲಿ ಆಯೋಗ

ಚುನಾವಣಾ ಆಯೋಗವು ಸಂಪೂರ್ಣ ಸ್ವಾಯತ್ತವಾಗಿ ಇರಬೇಕಾಗುತ್ತದೆ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಲೋಕತಂತ್ರ ಉಳಿಯಬೇಕೆಂದರೆ, ಸರ್ಕಾರವನ್ನು ಆಯ್ಕೆ ಮಾಡುವ ಮತದಾರರು ಜಾಗೃತರಾಗಬೇಕು ಮತ್ತು ಚುನಾವಣೆಗಳು ನ್ಯಾಯಯುತವಾಗಿ ನಡೆಯಬೇಕು. ಸಂವಿಧಾನವನ್ನು ಗೌರವಿಸುವ ಹಲವಾರು ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಇದು ಸ್ಪಷ್ಟವಾಗಿ ಮನವರಿಕೆಯಾಗಿದೆ. ಹೀಗಾಗಿ, ಮತದಾರರ ಅದರಲ್ಲೂ ಮುಖ್ಯವಾಗಿ ಮೊದಲ ಬಾರಿ ಮತ ಚಲಾಯಿಸಲಿರುವ ಲಕ್ಷಾಂತರ ಯುವಜನರಿಗೆ ತಮ್ಮ ಹೊಣೆಗಾರಿಕೆ ಕುರಿತು ಎಚ್ಚರಿಸುವ ದಿಸೆಯಲ್ಲಿ ಆಂದೋಲನಗಳು ಸಕ್ರಿಯವಾಗಿವೆ.

ಇನ್ನು, ಎಲ್ಲ ಬಗೆಯ ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ಮತ್ತು ನ್ಯಾಯಯುತವಾಗಿ ನಡೆಸುವ ಹೊಣೆಗಾರಿಕೆ ಇರುವ ಚುನಾವಣಾ ಆಯೋಗವು ಸಂಪೂರ್ಣ ಸ್ವಾಯತ್ತವಾಗಿ ಇರಬೇಕಾಗುತ್ತದೆ. ಎಷ್ಟರಮಟ್ಟಿಗೆ ಎಂದರೆ, ಚುನಾವಣೆಯಲ್ಲಿ ಪ್ರಧಾನಿಯಿಂದ ಏನಾದರೂ ಅಕ್ರಮ ನಡೆದರೆ ಅವರನ್ನೂ ಕಟಕಟೆಯಲ್ಲಿ ನಿಲ್ಲಿಸುವಷ್ಟು ಸಾಮರ್ಥ್ಯ ಮತ್ತು ಕರ್ತವ್ಯನಿಷ್ಠೆ ಅದಕ್ಕೆ ಇರಬೇಕಾಗುತ್ತದೆ.

1949ರ ಜೂನ್ 1ರಂದು ಸಂವಿಧಾನ ರಚನಾ ಸಭೆಯಲ್ಲಿ ಈ ಕುರಿತು ನಡೆದ ಚರ್ಚೆಯಲ್ಲಿ ಅಂಬೇಡ್ಕರ್ ಅವರು, ‘ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ಇರಬೇಕು ಎಂದರೆ, ಚುನಾವಣಾ ಆಯೋಗವನ್ನು ಸರ್ಕಾರದ ನಿಯಂತ್ರಣದಿಂದ ಹೊರಗಿಡಬೇಕು’ ಎಂದಿದ್ದರು. ಆದರೆ, ಈಗಿನ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಚುನಾವಣಾ ಆಯೋಗವು ಅಭ್ಯರ್ಥಿಗಳಿಂದ ಆಗುವ ನೀತಿ ಸಂಹಿತೆಯ ಉಲ್ಲಂಘನೆಗಳ ವಿರುದ್ಧ ಕ್ರಮ ತೆಗೆದು ಕೊಳ್ಳುವುದೇ ಅಪರೂಪ, ತೆಗೆದುಕೊಂಡರೂ ವಿರೋಧ ಪಕ್ಷದ ಅಭ್ಯರ್ಥಿಗಳ ವಿರುದ್ಧ ಮಾತ್ರ ಎಂಬಂತಾಗಿದೆ. ಮತಯಂತ್ರಗಳಲ್ಲಿನ ದೋಷ, ಎಣಿಕೆಯಲ್ಲಿನ ಅಕ್ರಮಗಳ ಕುರಿತು ಸಾವಿರಾರು ದೂರುಗಳು ದಾಖಲಾಗಿದ್ದರೂ ಅವುಗಳಲ್ಲಿ ಒಂದನ್ನೂ ಇತ್ಯರ್ಥಪಡಿಸದೆ, ಇಂತಹ ದೂರು ಕೇಳಿಬಂದಿದ್ದ ಚುನಾವಣೆಗಳ ಫಲಿತಾಂಶ ಘೋಷಣೆಯಾಗಿ, ಸರ್ಕಾರಗಳೂ ರಚನೆಯಾಗಿವೆ. ಇದಕ್ಕೆಲ್ಲಾ ಮುಖ್ಯ ಕಾರಣ, ಮುಖ್ಯ ಚುನಾವಣಾ ಆಯುಕ್ತರು (ಸಿ.ಇ.ಸಿ.) ಕೇಂದ್ರ ಸರ್ಕಾರದ ಹಿಡಿತದಲ್ಲಿದ್ದಾರೆ ಎನ್ನುವುದಾಗಿದೆ.

ಸಿ.ಇ.ಸಿ. ಸೇರಿದಂತೆ ಚುನಾವಣಾ ಆಯುಕ್ತರನ್ನು (ಇ.ಸಿ.) ಮಂತ್ರಿಮಂಡಲದ ಸಲಹೆಯಂತೆ ರಾಷ್ಟ್ರಪತಿ ನೇಮಿಸುವ ಪರಿಪಾಟ ಇತ್ತು. ಈ ದಿಸೆಯಲ್ಲಿ, ಸರ್ಕಾರದ ಪರವಾಗಿ ನಡೆಯಬಹುದಾದ ತಾರತಮ್ಯ ವನ್ನು ಹೋಗಲಾಡಿಸಿ, ಚುನಾವಣೆಗಳಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರಲು ಸಂಸದರು, ಶಾಸಕರಿಂದ ಹಲವು ಸಲಹೆಗಳು ಈ ಹಿಂದೆ ಕೇಳಿಬಂದಿದ್ದವು. 2012ರ ಜೂನ್‍ನಲ್ಲಿ, ಆಗ ವಿರೋಧ ಪಕ್ಷದ ನಾಯಕರಾಗಿದ್ದ ಲಾಲ್‌ಕೃಷ್ಣ ಅಡ್ವಾಣಿ ಅವರು, ಆಯುಕ್ತರ ನೇಮಕಾತಿಯ ಶಿಫಾರಸಿಗೆ ಪ್ರಧಾನಿ, ಹೈಕೋರ್ಟ್‌ ನ್ಯಾಯಮೂರ್ತಿ, ಕೇಂದ್ರ ಕಾನೂನು ಸಚಿವ, ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ರಚನೆಯಾಗಬೇಕು ಎಂದು ಹೇಳಿದ್ದರು. ಆದರೆ ಆ ಕುರಿತು ನಿರ್ದಿಷ್ಟ ಕ್ರಮಗಳು ಜಾರಿಯಾಗಲಿಲ್ಲ.

ಸಿ.ಇ.ಸಿ., ಇ.ಸಿ. ನೇಮಕಕ್ಕೆ ಕಾನೂನಿನಲ್ಲಿ ನಿರ್ದಿಷ್ಟ ಪ್ರಕ್ರಿಯೆಯ ವಿವರ ಇಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ನಿರ್ದೇಶನವೊಂದನ್ನು ನೀಡಿದೆ. ಅದರ ಅನುಸಾರ, ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರು ಸಿ.ಇ.ಸಿ., ಇ.ಸಿ. ಹುದ್ದೆಗಳಿಗೆ ಯಾರನ್ನು ನೇಮಕ ಮಾಡಬೇಕು ಎಂಬುದನ್ನು ತೀರ್ಮಾನಿಸಬೇಕು ಎಂದು ಸೂಚಿಸಿತ್ತು. ಸುಪ್ರೀಂ ಕೋರ್ಟ್‌ ಸೂಚನೆಯ ಅನುಸಾರವಾಗಿ ಸರ್ಕಾರವು ಈ ಸಂಬಂಧ ಮಸೂದೆಯನ್ನೇನೋ ರೂಪಿಸಿದೆ. ಆದರೆ, ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇರುವುದು ಆಡಳಿತಾರೂಢ ಪಕ್ಷಕ್ಕೆ ತನ್ನ ಸ್ವೇಚ್ಛೆಗೆ ಬಹುದೊಡ್ಡ ಅಡಚಣೆಯಂತೆ ತೋರಿರಬೇಕು. ಹಾಗಾಗಿ ಅವರಿಗೆ ಅವಕಾಶ ಕಲ್ಪಿಸಿಲ್ಲ. ಈಗಿನ ಮಸೂದೆ ಪ್ರಕಾರ, ಸಮಿತಿಯಲ್ಲಿ ಪ್ರಧಾನಿಯ ಜೊತೆ ಅವರದೇ ಮಂತ್ರಿಮಂಡಲದ ಒಬ್ಬ ಸದಸ್ಯ ಮತ್ತು ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕ ಇರುತ್ತಾರೆ. ಈ ಮಸೂದೆಗೆ ಈಚೆಗೆ ರಾಜ್ಯಸಭೆ ಯಲ್ಲಿ ಅನುಮೋದನೆಯನ್ನೂ ಪಡೆಯಲಾಗಿದೆ. ಇನ್ನು ಅದು ಲೋಕಸಭೆಯಲ್ಲಿ ಅನುಮೋದನೆಗೊಂಡರೆ ಕಾಯ್ದೆಯಾಗುತ್ತದೆ.

ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಯೂ ಇದ್ದಿದ್ದರೆ ಮೂವರೂ ವ್ಯಕ್ತಿಗಳು ಮೂರು ವಿಭಿನ್ನ ನೆಲೆಗಳನ್ನು ಪ್ರತಿನಿಧಿಸುವವರಾಗಿರುತ್ತಿದ್ದರು. ಸರ್ವಾನುಮತವಿಲ್ಲದ ಯಾವುದೇ ನಿರ್ಣಯವು 2/1ರ ಬಹುಮತ ಪಡೆದು ಹೆಚ್ಚು ನ್ಯಾಯಸಮ್ಮತವಾಗಲು ಅವಕಾಶವಿತ್ತು. ಆದರೆ, ಈಗ ಸರ್ಕಾರದ ವತಿಯಿಂದಲೇ ಇಬ್ಬರು ಇರುವುದರಿಂದ ಅತಿದೊಡ್ಡ ವಿರೋಧ ಪಕ್ಷದ ನಾಯಕ ಇದ್ದರೂ ಅಷ್ಟೆ ಬಿಟ್ಟರೂ ಅಷ್ಟೆ, ಸರ್ಕಾರವು ತನಗೆ ಬೇಕಾದವರನ್ನು ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಬಹುದಾಗಿದೆ. ಆಗ ಆಯೋಗದ ಸ್ವಾಯತ್ತತೆ ಬರೀ ಭ್ರಮೆಯಾಗುತ್ತದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ಎಫ್‌. ನರಿಮನ್‍, ಮುಂಬೈನಲ್ಲಿ ಇದೇ ತಿಂಗಳ 15ರಂದು ‘ಭಾರತದ ಲೋಕತಂತ್ರ: ನಿಯಂತ್ರಣ ಮತ್ತು ಸಂತುಲನ’ ಎಂಬ ವಿಷಯದ ಕುರಿತು ನೀಡಿದ ಉಪನ್ಯಾಸದಲ್ಲಿ ಈ ಮಸೂದೆಯ ವಿಷಯ ಪ್ರಸ್ತಾಪಿಸಿ, ‘ಇದರಿಂದ ಚುನಾವಣಾ ಆಯುಕ್ತರು ಪಕ್ಷಪಾತಿ
ಗಳಾಗುವ ಸಾಧ್ಯತೆ ಇರುತ್ತದೆ. ಹೀಗಾದಾಗ, ನಿಷ್ಪಕ್ಷಪಾತವಾದ ಚುನಾವಣೆ ಇರುವುದಿಲ್ಲ, ಲೋಕತಂತ್ರವೂ ಇರುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.

ಪ್ರಜ್ಞಾವಂತರು ಇದರ ವಿರುದ್ಧ ಹೋರಾಡಿ ಗೆಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಚುನಾವಣೆಗಳು ಬರೀ ನಾಟಕಗಳಾಗುತ್ತವೆ, ಜಗತ್ತಿನ ಅತ್ಯಂತ ದೊಡ್ಡ ಲೋಕತಂತ್ರದಲ್ಲಿ ಸಂವಿಧಾನ ನಗಣ್ಯವಾಗುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT