ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನೇಶ್‌ ಗುಂಡೂರಾವ್ ಬರಹ: ಅಸ್ತಿತ್ವದ ಪ್ರಶ್ನೆ ಮತ್ತು ಅನಿವಾರ್ಯ

ಸರ್ವಾಧಿಕಾರಿ ನೀತಿ ಎದುರಿಸಲು ಗಾಂಧಿ ಪರಿವಾರದ ಸಶಕ್ತ ನಾಯಕತ್ವವೇ ಸೂಕ್ತ
Last Updated 27 ಆಗಸ್ಟ್ 2020, 21:24 IST
ಅಕ್ಷರ ಗಾತ್ರ

ಕಾಂಗ್ರೆಸ್‌ ಪಕ್ಷದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಾವೀಗ ಹೊಸ ಮನ್ವಂತರವೊಂದಕ್ಕೆ ಎದೆಯೊಡ್ಡಬೇಕಾಗಿದೆ. ಪಕ್ಷದ ಅಸ್ತಿತ್ವದ ದೃಷ್ಟಿಯಿಂದ ಅದು ಅನಿವಾರ್ಯ ಕೂಡ. ವಂಶಪಾರಂಪರ್ಯ ರಾಜಕಾರಣಕ್ಕೆ ಕಾಂಗ್ರೆಸ್‌ ಜೋತುಬಿದ್ದಿದೆ ಎಂಬರ್ಥದಲ್ಲಿ ಬಿಜೆಪಿ ನಾಯಕರು ಮೊದಲಿನಿಂದಲೂ ಪುಕಾರು ಎಬ್ಬಿಸುತ್ತಲೇ ಬಂದಿದ್ದಾರೆ. ಸದ್ಯ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಎಂದೂ ಬಲವಂತದಿಂದಾಗಲೀ ನೆಹರೂ–ಗಾಂಧಿ ಕುಟುಂಬದ ಹೆಸರು ಹೇಳಿಕೊಂಡಾಗಲೀ ಅಧ್ಯಕ್ಷ ಪದವಿ ಪಡೆದವರಲ್ಲ.

ಬಹುತೇಕರಿಗೆ ತಿಳಿಯದ ಸಂಗತಿಯೆಂದರೆ, ಇಂದಿರಾ ಗಾಂಧಿ ಹತ್ಯೆಯ ನಂತರ ರಾಜೀವ್‌ ಗಾಂಧಿ ರಾಜಕೀಯಕ್ಕೆ ಬರುವುದನ್ನು ವಿರೋಧಿಸಿದ ಏಕೈಕ ವ್ಯಕ್ತಿ ಸೋನಿಯಾ. ಬಹುಶಃ ಇಂದಿರಾ ಅವರ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ಸೋನಿಯಾ ಅವರಿಗೆ ಆಗಲೇ ತಮ್ಮ ಪತಿಯ ಸಾವಿನ ಅಪಶಕುನದ ಸೂಚನೆ ಸಿಕ್ಕಿತ್ತೇನೋ? ಆದರೆ, ಆಗಿನ ಸ್ಥಿತಿಯಲ್ಲಿ ರಾಜೀವ್‌ ಅನಿವಾರ್ಯವಾಗಿ ರಾಜಕೀಯ ಪ್ರವೇಶಿಸಿದ್ದನ್ನು ನಿಸ್ಸಹಾಯಕ ಕಣ್ಣುಗಳಿಂದ ನೋಡಿದ್ದರು ಅವರು. ದುರದೃಷ್ಟವಶಾತ್, ಅತ್ತೆಯಂತೆಯೇ ಮುಂದೆ ಪತಿ ಕೂಡ ಜೀವ ಕಳೆದುಕೊಂಡದ್ದು ವಿಧಿಯಾಟ.

1990ರ ದಶಕದಲ್ಲಿ ರಾಷ್ಟ್ರ ರಾಜಕಾರಣ ಹಲವು ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿತ್ತು. ಅದು, ವಾಜಪೇಯಿ ಮತ್ತು ಅಡ್ವಾಣಿ ಅವರು ರಾಜಕೀಯವಾಗಿ ಉತ್ತುಂಗಕ್ಕೇರುತ್ತಿದ್ದ ಕಾಲಘಟ್ಟ. ಮತ್ತೊಂದು ಕಡೆ, ಅಸ್ಮಿತೆಯ ವಿಚಾರ ಇಟ್ಟುಕೊಂಡು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಎದುರು ಕಾಲರ್ ಏರಿಸುತ್ತಿದ್ದವು. ಆ ಸಮಯದಲ್ಲಿ ಕಾಂಗ್ರೆಸ್ಸಿ‌ನ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿ ಅವರ ಅವಧಿಯಲ್ಲಿ ಪಕ್ಷದ ಸಾಧನೆ ಹೇಳಿಕೊಳ್ಳುವಂತೇನೂ ಇರಲಿಲ್ಲ. ಪಕ್ಷದೊಳಗೆ ಅನೇಕ ಶಕ್ತಿಕೇಂದ್ರಗಳು ಉದ್ಭವವಾಗಿದ್ದವು. ಇಂತಹ ಸ್ಥಿತಿಯಲ್ಲಿ ಸೋನಿಯಾ ಅವರಿಗೆ ಪಕ್ಷದ ಸಾರಥ್ಯ ವಹಿಸಬೇಕೆಂಬ ನಿರ್ಧಾರಕ್ಕೆ ಬರಲಾಯಿತು. ಇದಕ್ಕೆ ಬಿಜೆಪಿಯ ಟೀಕೆಯ ಜೊತೆಗೆ ಪಕ್ಷದ ಕೆಲ ಹಿರಿಯ ನಾಯಕರಿಂದ ಅಪಸ್ವರದ ಕೂಗೂ ಕೇಳಿಬಂದಿತ್ತು. ಶರದ್ ಪವಾರ್, ಪಿ.ಎ.ಸಂಗ್ಮಾರಂತಹ ಹಿರಿಯ ನಾಯಕರು ಸೋನಿಯಾ ಆಯ್ಕೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಈ ಎಲ್ಲ ವಿರೋಧಗಳನ್ನೂ ಮೆಟ್ಟಿನಿಂತು, ಕಾರ್ಯಕರ್ತರು ಹಾಗೂ ನಿಷ್ಠಾವಂತ ಕಾಂಗ್ರೆಸ್ಸಿಗರ ಒತ್ತಡಕ್ಕೆ ಮಣಿದ ಸೋನಿಯಾ, 1998ರ ಆ ಸಂದಿಗ್ಧ ಕಾಲದಲ್ಲೇ ಕಾಂಗ್ರೆಸ್ ಎಂಬ ಹಡಗಿನ ಚುಕ್ಕಾಣಿ ಹಿಡಿದರು.

2004ರ ಚುನಾವಣೆಯಲ್ಲಿ ಸೋನಿಯಾ ನಾಯಕತ್ವದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿತು. ಯುಪಿಎ ಮೈತ್ರಿಕೂಟ ಸ್ಥಾಪಿಸಿ, ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಸೋನಿಯಾ ಸಮರ್ಥವಾಗಿ ನಿಭಾಯಿಸಿದರು. ಅನಾಯಾಸವಾಗಿ ಒಲಿದು ಬಂದಿದ್ದ ಪ್ರಧಾನಿ ಹುದ್ದೆಯನ್ನು ತಿರಸ್ಕರಿಸಿದ ಅವರು, ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗುವಂತೆ ನೋಡಿಕೊಂಡರು. 2009ರಲ್ಲೂ ಸೋನಿಯಾ ಪ್ರಧಾನಿಯಾಗಬಹುದಿತ್ತಾದರೂ ಆ ಹುದ್ದೆಯನ್ನು ಅವರು ಸ್ವೀಕರಿಸಲಿಲ್ಲ.

ನೆಹರೂ–ಗಾಂಧಿ ಕುಟುಂಬದ ಹೊರತಾಗಿಯೂ ಅನೇಕರು ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್‌ನಲ್ಲಿ ಜೆ.ಬಿ.ಕೃಪಲಾನಿ, ನೀಲಂ ಸಂಜೀವ ರೆಡ್ಡಿ, ಕಾಮರಾಜ್, ಶಂಕರ್ ದಯಾಳ್ ಶರ್ಮಾ, ನರಸಿಂಹರಾವ್ ಅವರಂತಹ ಘಟಾನುಘಟಿ ನಾಯಕರು ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ. ಕರ್ನಾಟಕದ ಮೇರು ರಾಜಕಾರಣಿ ಎಸ್.ನಿಜಲಿಂಗಪ್ಪ ಕೂಡ ಈ ಸ್ಥಾನವನ್ನು ಅಲಂಕರಿಸಿದ್ದರು. ಬಿಜೆಪಿ ನಾಯಕರು ಇದರ ಬಗ್ಗೆ ಬಾಯಿ ಬಿಡುವುದೇ ಇಲ್ಲ.

ಈಗ ಪಕ್ಷಕ್ಕೆ ನೆಹರೂ–ಗಾಂಧಿ ಕುಟುಂಬದ ಹೊರಗಿನವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಮಾತಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸರ್ವಾಧಿಕಾರಿ ನೀತಿಯನ್ನು ಎದುರಿಸಿ ನಿಲ್ಲಲು ಪಕ್ಷಕ್ಕೆ ಗಾಂಧಿ ಪರಿವಾರದ ನಾಯಕತ್ವವೇ ಸೂಕ್ತ. ಹಾಗಾಗಿ ಪಕ್ಷದ ಅಧ್ಯಕ್ಷರಾಗಲು ರಾಹುಲ್ ಗಾಂಧಿಯವರೇ ಅರ್ಹ ಅಭ್ಯರ್ಥಿ. 2019ರ ಲೋಕಸಭಾ ಚುನಾವಣೆಯ ಬಳಿಕ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಪದವಿಗೆ ರಾಹುಲ್ ರಾಜೀನಾಮೆ ನೀಡಿದರು. ಪುಲ್ವಾಮ ಘಟನೆಯ ನಂತರ ಬಿಜೆಪಿ ನಡೆಸಿದ ಭಾವನಾತ್ಮಕ ಪ್ರಚಾರ ಹಾಗೂ ಬದಲಾದ ರಾಜಕೀಯ ಸನ್ನಿವೇಶವು 2019ರಲ್ಲಿ ಕಾಂಗ್ರೆಸ್‌ನ ಸೋಲಿಗೆ ಕಾರಣವೇ ವಿನಾ ಬೇರೇನೂ ಅಲ್ಲ.

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಎತ್ತಿ ತೋರಿಸುವಲ್ಲಿ ರಾಹುಲ್ ಈಗಲೂ ಮುಂಚೂಣಿಯಲ್ಲಿದ್ದಾರೆ. ಇದನ್ನು ಸಹಿಸಲಾಗದ ಬಿಜೆಪಿ ನಾಯಕರು ರಾಹುಲ್‌ರನ್ನು ವಿನಾಕಾರಣ ಟೀಕಿಸಿ, ಅವರ ಮನೋಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ರಾಹುಲ್ ಅವಕಾಶವಾದಿ ರಾಜಕಾರಣಿಯಲ್ಲ. 2013ರ ಅಂತ್ಯದಲ್ಲಿ, ಯುಪಿಎ ಅವಧಿಯಲ್ಲಿ ಪ್ರಧಾನಿಯಾಗುವ ಅವಕಾಶವಿದ್ದರೂ ಮಂತ್ರಿ ಹುದ್ದೆಯನ್ನು ಸಹ ಅವರು ಸ್ವೀಕರಿಸಲಿಲ್ಲ. ಆದರೆ, ನರೇಗಾ, ಆಹಾರ ಭದ್ರತಾ ಕಾಯ್ದೆ, ಭೂಸ್ವಾಧೀನ ಕಾಯ್ದೆಯಂಥ ಪ್ರಗತಿಪರ ಕಾನೂನುಗಳನ್ನು ಜಾರಿಗೆ ತರುವಲ್ಲಿ ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶದ ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ರಾಹುಲ್ ಅವರೇ ಮತ್ತೆ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಅರ್ಹರು.

ಲೇಖಕ: ಶಾಸಕ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT