ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ಮೂಲ ನಿವಾಸಿ ಯಾರು?

ಮೊನ್ನೆ ಮೊನ್ನೆ ಸಂಭವಿಸಿದ ಜಲಪ್ರಳಯ ಮನುಷ್ಯ ಕಟ್ಟಿಕೊಂಡ ಎಲ್ಲಾ ನಂಬಿಕೆಗಳನ್ನು ಸುಳ್ಳು ಎಂದು ತೋರಿಸಿತು. ಆ ಜಲಪ್ರಳಯದ ಬೆನ್ನಲ್ಲೇ ನಿರ್ಜಲ ಪ್ರಳಯ ಉಂಟಾಗಿದೆ
Last Updated 20 ಸೆಪ್ಟೆಂಬರ್ 2018, 20:21 IST
ಅಕ್ಷರ ಗಾತ್ರ

ಭೂಮಿಯ ಮೂಲ ನಿವಾಸಿ ಮನುಷ್ಯ ಅಲ್ಲ; ಮೃಗಪಕ್ಷಿ, ಕ್ರಿಮಿ–ಕೀಟಗಳು ಸಹ ಅಲ್ಲ; ಭೂಮಿಯ ಮೂಲನಿವಾಸಿಗಳು ಮರಗಿಡ, ಬಳ್ಳಿ, ಬಿಳಲುಗಳು. ಮರಗಿಡ, ಬಳ್ಳಿಗಳು ಬಂದ ನಂತರವೇ ಆಮ್ಲಜನಕ ಎಂಬ ಗಾಳಿಯನ್ನು ಉಸಿರಾಗಿಸಿಕೊಂಡು ಬದುಕುವ ಜೀವಿಗಳ ಸೃಷ್ಟಿಯಾದದ್ದು. ಈ ಅರಿವು ಇಲ್ಲದ ಮನುಷ್ಯ ಕಾಡು ನಾಶ ಮಾಡಿ ನಗರ ನಿರ್ಮಾಣ ಮಾಡಿ, ರಸ್ತೆ, ವಿದ್ಯುತ್, ಪೆಟ್ರೋಲು ಮತ್ತು ನೂರಾರು ಬಗೆ ವಾಹನಗಳನ್ನು ನಿರ್ಮಿಸಿಕೊಂಡು ತಾನು ಭೂಮಿಯ ಚಕ್ರವರ್ತಿ ಎಂದು ಭಾವಿಸಿದ ಮತ್ತು ಭೂಮಿ ಶಾಶ್ವತವಾಗಿ ಹೀಗೆಯೇ ಇರುತ್ತದೆ ಎಂದು ನಂಬಿ ಆ ನಂಬಿಕೆಗಳಿಗೆ ಇಂಬಾಗಿ ನೂರಾರು ದೇವರು ದೇವತೆಗಳನ್ನು ಸೃಷ್ಟಿಸಿಕೊಂಡ.

ಭೂಮಿಯ ಬೇರೆ ಬೇರೆ ಭಾಗಗಳಲ್ಲಿ ಮೊನ್ನೆ ಮೊನ್ನೆ ಸಂಭವಿಸಿದ ಜಲಪ್ರಳಯ ಮನುಷ್ಯ ಕಟ್ಟಿಕೊಂಡ ಎಲ್ಲಾ ನಂಬಿಕೆಗಳನ್ನು ಸುಳ್ಳು ಎಂದು ತೋರಿಸಿತು. ಈಗ ಆ ಜಲಪ್ರಳಯದ ಬೆನ್ನಲ್ಲೇ ನಿರ್ಜಲ ಪ್ರಳಯ ಉಂಟಾಗಿದೆ. ಅಂದರೆ, ಇನ್ನೂ ಮಳೆಗಾಲ ಇದೆ ಎಂಬಂಥ ಸೆಪ್ಟೆಂಬರ್‌ನಲ್ಲೇ ಭೂಮಿಯಲ್ಲಿ ಬಹಳ ಕಡೆ ನದಿಗಳು ಬತ್ತುತ್ತಿವೆ, ಕೆರೆ ಬಾವಿಗಳು ಬರಡಾಗುತ್ತಿವೆ ಎಂಬ ಕೂಗು ಕೇಳಿಬರುತ್ತಿದೆ. ಎಲ್ಲಿ ಎಂದು ಹೇಳಬೇಕಾದ್ದೇ ಇಲ್ಲ. ಎಲ್ಲಿ ಎಂಬುದು ಎಲ್ಲರಿಗೂ ತಿಳಿದಿದೆ. ಎಲ್ಲೆಲ್ಲ ಆಕಾಶದಿಂದ ಜಲಪಾತವಾಯಿತೊ ಸುರಿಯಿತೊ ಅಲ್ಲೆಲ್ಲ ಈಗ ನೀರು ಮಾಯವಾಗುತ್ತಿದೆ. ಅದನ್ನು ವಿವರಿಸಿ ಆಗಬೇಕಾದ್ದೇನೂ ಇಲ್ಲ. ಈಗ ಯೋಚಿಸಬೇಕಾದ್ದು ಭೂಮಿಯ ಮೂಲ ನಿವಾಸಿಯಾದ ಮರಗಳನ್ನು ಪುನಃ ತರುವುದು ಹೇಗೆ ಎಂಬುದನ್ನು.

ಅರಣ್ಯವನ್ನು ನಗರವಾಗಿ ಪರಿವರ್ತಿಸಿದ ಮನುಷ್ಯ ‘ಕುಡಿಯಲು ನೀರು ಇಲ್ಲ, ಬದುಕುವುದು ಹೇಗೆ’ ಎಂಬ ಹಾಹಾಕಾರ ಎಬ್ಬಿಸಿದ್ದಾನೆ. ಹಾಹಾಕಾರದಿಂದ ಏನೂ ಪ್ರಯೋಜನವಿಲ್ಲ. ನೀರು ಇಲ್ಲವೇ ಇಲ್ಲ ಎಂದಾದರೆ ಜೀವ ಉಳಿಸಿಕೊಳ್ಳಲು ಇರುವುದು ಒಂದೇ ದಾರಿ: ಮನುಷ್ಯ ಮರಗಿಡಗಳ ಹಸಿರೆಲೆಗಳನ್ನು ಜಗಿದು ಅದರ ರಸವನ್ನು ನುಂಗಬೇಕು. ಅಪರೂಪಕ್ಕೆ ಬಗೆ ಬಗೆಯ ಹಣ್ಣುಗಳು ಕೂಡ ಸಿಗಬಹುದು. ಹಣ್ಣನ್ನು ತಿನ್ನಬೇಕಾದರೆ, ಎಲೆಯ ರಸವನ್ನು ನುಂಗಬೇಕಾದರೆ ಎಲ್ಲಾ ಮರಗಿಡಗಳ ಹಣ್ಣುಗಳ ಮತ್ತು ಹಸಿರೆಲೆಗಳ ಗುಣಧರ್ಮಗಳನ್ನು ತಿಳಿದಿರಬೇಕಾದ್ದು ಅಗತ್ಯ. ಹಣ್ಣು, ಹಸುರೆಲೆಗಳಲ್ಲಿ ವಿಷಸದೃಶವಾದವು ಕೂಡ ಇವೆ ಎಂದು ಅರಿತಿರಬೇಕು. ತಿನ್ನಬಹುದಾದ ಹಣ್ಣುಗಳು ಮತ್ತು ಹಸಿರೆಲೆಗಳು ಕೆಲವೇ ದಿನಗಳಲ್ಲಿ ಖಾಲಿಯಾಗಬಹುದು. ಇದಿಷ್ಟೇ ಸಾಲದು. ಅರಣ್ಯದಲ್ಲಿರುವ ಮೃಗ ಪಕ್ಷಿ ಸರೀಸೃಪಗಳನ್ನು ಪ್ರೀತಿಸಲು ಮತ್ತು ಅವುಗಳ ಜೊತೆ ಸಂವಹನ ನಡೆಸಲು ಮತ್ತು ಅನ್ಯೋನ್ಯವಾಗಿರಲು ಕಲಿಯಬೇಕು. ಅರಣ್ಯದಲ್ಲಿ ಬದುಕುವುದು ನಗರದ ಫ್ಲಾಟಿನಲ್ಲಿ ಬದುಕುವಷ್ಟು ಸುಲಭವಲ್ಲ.

ಆದ್ದರಿಂದ ಇರುವುದೊಂದೇ ದಾರಿ: ಸಾಲು ಮರದ ತಿಮ್ಮಕ್ಕನಂತೆ ಮರಗಿಡಗಳನ್ನು ನೆಡಲು ಆರಂಭಿಸಬೇಕು. ಭೂಮಿಯಲ್ಲಿ ಎಲ್ಲೆಲ್ಲಿಯೂ ಮರಗಿಡಗಳು ಮೇಲೆದ್ದರೆ ಭೂಮಿಗೆ ಬೀಳುವ ಮಳೆಯ ನೀರು ಮಣ್ಣಿನಲ್ಲಿ ಉಳಿಯುತ್ತದೆ. ಕೆರೆ, ಬಾವಿ, ನದಿಗಳಲ್ಲಿ ನೀರು ಇದ್ದರೆ ಅಲ್ಲಿಂದ ಎತ್ತಿ ತಂದು ಗಿಡಮರಗಳಿಗೆ ಉಣಿಸಬೇಕು. ಭೂಮಿಯನ್ನು ನೀರಿಗಾಗಿ ಕೊರೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ತೀರಾ ಅಗತ್ಯವಾದ ಲೋಹ ಖನಿಜಗಳಿಗೆ ಮಾತ್ರ ಭೂಮಿ ಕೊರೆಯಬೇಕು; ಕೊರೆದು ಉಂಟಾದ ರಂಧ್ರಗಳನ್ನು ಮಣ್ಣು ತುಂಬಿ ಮುಚ್ಚಬೇಕು; ಅಲ್ಲೆಲ್ಲಾ ಗಿಡ ಮರಗಳನ್ನು ನೆಟ್ಟು ಬೆಳೆಸಬೇಕು.

ಹಿಮಾಲಯದಲ್ಲಿ ಹಿಮ ಕರಗದಿರುವಲ್ಲಿ, ಮಂಜುಗಡ್ಡೆಗಳು ಇರುವುದಾದರೆ ಅಲ್ಲಿಂದ ಬಸ್ಸುಗಳಲ್ಲಿ, ಉಗಿಬಂಡಿಗಳಲ್ಲಿ, ವಿಮಾನಗಳಲ್ಲಿ ಮಂಜುಗಡ್ಡೆಗಳನ್ನು ಕೇರಳ, ದಕ್ಷಿಣ ಕನ್ನಡ ಮುಂತಾದ ಕಡೆಗೆ ತರಬಹುದು. ಯಾವತ್ತಾದರೂ ಭೂಮಿ ಮೇಲೆ ಮತ್ತೆ ಸಾಮಾನ್ಯ ಮಳೆ ಬೀಳಬಹುದು, ಆಗ ಎಲ್ಲಾ ಕಡೆ ಬಿದ್ದ ಹನಿ ಹನಿ ನೀರನ್ನು ಕೂಡ ಸಂಗ್ರಹಿಸಿಟ್ಟುಕೊಂಡರೆ ಅದರ ಬಲದಿಂದ ಹೇಗೋ ಬದುಕಬಹುದು. ನೀರು ಜಲಜನಕ ಮತ್ತು ಆಮ್ಲಜನಕದ ಸಂಯುಕ್ತವಾಗಿರುವುದರಿಂದ ಗಾಳಿಯಿಂದ ನೀರು ಸೃಷ್ಟಿಸಬಹುದು ಎಂದು ವಿಜ್ಞಾನಿಗಳು ಕಂಡುಹಿಡಿದಿರುವುದು ಪ್ರಯೋಜನಕಾರಿಯಾಗಬಹುದು.

ಭೂಮಿ ಮೇಲೆ ಗಾಳಿ ಇಲ್ಲದಾಗಬಹುದು ಎಂಬ ಯೋಚನೆ ಬಹುಶಃ ಯಾರ ತಲೆಯಲ್ಲಿಯೂ ಮೂಡುವುದಿಲ್ಲ. ತಲೆಗೂ ಬೇಕಲ್ಲವೆ ರಕ್ತದ ಜೊತೆ ಸ್ವಲ್ಪ ಆಕ್ಸಿಜನ್? ಗಾಳಿಯಿಲ್ಲವೆಂದಾದರೆ ಉಸಿರು ಇಲ್ಲ; ನಡೆ ನುಡಿ, ಬರಹ, ಸಾಹಿತ್ಯ ಸಂಗೀತ ಇತ್ಯಾದಿ ಯಾವುದೂ ಇಲ್ಲ. ಆದ್ದರಿಂದ ಗಾಳಿ ಎಲ್ಲಾ ಕಾಲಕ್ಕೂ ಯಥೇಚ್ಛವಾಗಿ ಇರುತ್ತದೆ ಎಂದು ನಂಬೋಣ. ಬೈಬಲಿನಲ್ಲಿ ಹೇಳಿರುವ ಕೊನೆಯ ತೀರ್ಪಿನ ನಂತರ ಮಾನವ ಸಂತತಿ ಉಳಿಸಲೆಂದೇನೋಹನ ದೋಣಿ ಬಂದರೆ ಆ ದೋಣಿಯಲ್ಲಿ ಬಂದ ಕೆಲವೇ ಜನರ ಸಣ್ಣ ಗುಂಪಿನಿಂದ ಮಾನವ ಸಂತತಿ ಉಳಿದು ಬೆಳೆಯಬಹುದು. ಇದು ನಂಬಿಕೆ ಮಾತ್ರ. ವೈಜ್ಞಾನಿಕ ಅಭಿಪ್ರಾಯವಲ್ಲ. ಕೊನೆ ಕ್ಷಣದಲ್ಲಿ ಯಾರಿಗೆ ಬೇಕು ವೈಜ್ಞಾನಿಕ ಚಿಂತನೆ? ಯಾರಿಗೆ ಬೇಕು ಎಂದೋ ಧರ್ಮಗ್ರಂಥದಲ್ಲಿರುವ ನಂಬಿಕೆಯ ಕತೆ!

ನೀರು ಇಲ್ಲದಾದರೆ ಮಾನವ ಸಂತತಿ ನಾಶವಾಗುತ್ತದೆ ನಿಜ. ಆದರೆ ಎಲ್ಲರೂ ಸಾಯಲಿಕ್ಕಿಲ್ಲ ಎಂಬುದು ಕೆಲವರ ನಂಬಿಕೆಯಾದರೆ, ಯಾಗ ಯಜ್ಞಗಳನ್ನು ಮಾಡಿಸಿ ತಾವು ಉಳಿದೇವು ಎಂಬುದು ಮತ್ತೆ ಕೆಲವರ ನಂಬಿಕೆ. ಇನ್ನುಳಿದವರು ಸಾಯಲು ಸಿದ್ಧ
ವಾಗಿರೋಣ ಎನ್ನಬಹುದು. ಸಿದ್ಧವಾಗಿರುವುದೂ ಸಿದ್ಧವಾಗಿಲ್ಲದಿರುವುದೂ ಎರಡೂ ಒಂದೇ ಎಂದು ಬುದ್ಧಿಜೀವಿಗಳು ಹೇಳಬಹುದು. ಈ ನಡುವೆ ‘ಸಂತೋಷದಿಂದ ಸಾಯೋಣ’ ಎಂದು ಕೊನೆ ತನಕವೂ ಸಂತೋಷದಿಂದಿರುವವರು ಕೂಡ ಇರಬಹುದು. ಈಗ ಎಲ್ಲರ ಮುಂದಿರುವ ಪ್ರಶ್ನೆ ಬಹುಶಃ ‘ಸಂತೋಷ’ ಎಂದರೇನು ಎಂಬುದಾಗಿರಬಹುದು.

ಈಗ ಸಂಭವಿಸಿರುವ ಜಲಪ್ರಳಯ Doomsdayಎನ್ನಲಾಗುವ ಜಗತ್ತಿನ ಕೊನೆಯ ತೀರ್ಪಿನ ಒಂದು ಸ್ಯಾಂಪಲ್ ಎಂದು ಭಾವಿಸುವವರಿಗೂ ಏನೋ ಒಂದು ಸಮಾಧಾನ ಕಾಣಿಸಬಹುದು. ಈ ಎಲ್ಲ ಚಿಂತೆಗಳನ್ನು ಚಿಂತಿಸುವವರಿಗೆ ಬಿಟ್ಟು ವೈಜ್ಞಾನಿಕ ವಿಶ್ಲೇಷಣೆ ಏನೆಂದು ನೋಡೋಣ: ಭೂಮಿಯ ಅಡಿ ಪದರಗಳಲ್ಲಿ ಕೆಲವೊಮ್ಮೆ ಸಂಚಲನ ಉಂಟಾಗುತ್ತದೆ. ಅದನ್ನು ಭೂಕಂಪನ ಎಂದು ತಿಳಿಯುತ್ತೇವೆ. ಅದರ ಪರಿಣಾಮವಾಗಿ ಪದರಗಳಲ್ಲಿ ಉಂಟಾಗುವ ಬಿರುಕುಗಳಲ್ಲಿ ಮೇಲ್ಪದರದಲ್ಲಿರುವ ನೀರು ಕೆಳಗೆ ಹೋಗುತ್ತದೆ. ಆ ಕಾರಣದಿಂದ ಭೂಮಿಯ ಮೇಲೆ ನೀರು ಇಲ್ಲದಾಗುತ್ತದೆ ಎಂಬುದು ಒಂದು ವಿಶ್ಲೇಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT