ಪ್ರತಿಪಕ್ಷಗಳಲ್ಲಿ ಮೂಡದ ಒಮ್ಮತ ಮುಂದುವರಿದ ಅನಿಶ್ಚಿತ ಸ್ಥಿತಿ
ನವದೆಹಲಿ, ಏ. 24– ಬಿಜೆಪಿ ನೇತೃತ್ವದ ಸರ್ಕಾರ ವಿಶ್ವಾಸಮತ ಕಳೆದುಕೊಂಡು ಪತನವಾಗಿ ಒಂದು ವಾರವಾದರೂ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಪರ್ಯಾಯ ಸರ್ಕಾರ ರಚನೆ ಮಾಡುವಲ್ಲಿ ಇನ್ನೂ ಒಮ್ಮತಕ್ಕೆ ಬರಲಾಗದ ಕಾರಣ ಅನಿಶ್ಚಿತ ಸ್ಥಿತಿ ಮುಂದುವರಿದಿದೆ.
ಸೋನಿಯಾ ಇಲ್ಲವೇ ಜ್ಯೋತಿ ಬಸು ಅವರ ನೇತೃತ್ವದಲ್ಲಿ ಪರ್ಯಾಯ ಸರ್ಕಾರ. ಈ ಪ್ರಯತ್ನದಲ್ಲಿ ವಿರೋಧಿ ಬಣ ವಿಫಲವಾದರೆ, ಅಟಲ್ ಬಿಹಾರಿ ವಾಜಪೇಯಿ ಮತ್ತೆ ಅಧಿಕಾರಕ್ಕೆ. ಇಲ್ಲವಾದರೆ ಲೋಕಸಭೆಗೆ ಮಧ್ಯಂತರ ಚುನಾವಣೆ ಅನಿವಾರ್ಯ. ಇದಿಷ್ಟು ಮಾತ್ರ ಈಗ ತೆರೆದಿಟ್ಟ ಮಾರ್ಗಗಳು.
ಆದರೆ ಪ್ರತಿಪಕ್ಷಗಳ ಬೆಂಬಲ ಗಳಿಸಲು ಮತ್ತೆ ಅವಕಾಶ ಪಡೆದಿರುವ ಕಾಂಗ್ರೆಸ್ನ ನಿನ್ನೆಯ ಪರಿಸ್ಥಿತಿಯಲ್ಲಿ ಈ ಹೊತ್ತಿನವರೆಗೆ ಯಾವುದೇ ಪ್ರಗತಿ ಕಂಡುಬಂದಂತೆ ಇಲ್ಲ. ಹೆಚ್ಚು ಕಡಿಮೆ ಕಾಂಗ್ರೆಸ್ ಪಕ್ಷ ಅಲ್ಪ
ಬಹುಮತದ ಸರ್ಕಾರ ರಚನೆಯ ತಂತ್ರಕ್ಕೆ ಜೋತುಬಿದ್ದಿದೆ.
***
ಸಮ್ಮಿಶ್ರ ಸರ್ಕಾರ ರಚನೆ ಕಾಂಗ್ರೆಸ್ ಪರಿಶೀಲನೆ
ನವದೆಹಲಿ, ಏ. 24 (ಪಿಟಿಐ): ಕೇಂದ್ರದಲ್ಲಿ ಪರ್ಯಾಯ ಸರ್ಕಾರ ರಚನೆ ಕುರಿತಂತೆ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸುವ ಬಗ್ಗೆ ಸಹ ಪರಿಶೀಲನೆ ನಡೆಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್
ಫರ್ನಾಂಡಿಸ್ ಅವರು ಇಂದು ಇಲ್ಲಿ ತಿಳಿಸಿದರು.
ಕಾಂಗ್ರೆಸ್ ನೇತೃತ್ವದಲ್ಲಿ ರಚನೆಗೊಳ್ಳುವ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಇಂದು ಮತ್ತೆ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.