ಬಿಹಾರ ಪ್ರತಿಧ್ವನಿ: ಸಂಸತ್ ಉಭಯ ಸದನ ಕಲಾಪ ಮುಂದಕ್ಕೆ
ನವದೆಹಲಿ, ಫೆ. 23– ಬಿಹಾರದ ರಾಬ್ಡಿದೇವಿ ನೇತೃತ್ವದ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತಂದುದನ್ನು ರಾಷ್ಟ್ರೀಯ ಜನತಾದಳ ಮತ್ತು ಸಮಾಜವಾದಿ ಪಕ್ಷದ ಸದಸ್ಯರು ಇಂದು ತೀವ್ರವಾಗಿ ಪ್ರತಿಭಟಿಸಿ, ಗದ್ದಲ ಮತ್ತು ಕೋಲಾಹಲ ಉಂಟು ಮಾಡಿದ್ದರಿಂದ, ಸಂಸತ್ನ ಉಭಯ ಸದನಗಳು ಕಲಾಪವಿಲ್ಲದೆ ಮುಂದಕ್ಕೆ ಹೋದವು.
ರಾಜ್ಯಸಭೆಯು ಯಾವುದೇ ಕಲಾಪವಿಲ್ಲದೆ ನಾಳೆಗೆ ಮುಂದಕ್ಕೆ ಹೋಯಿತು. ಆದರೆ ಲೋಕಸಭೆಯು ಪ್ರಶ್ನೋತ್ತರ ವೇಳೆಯನ್ನು ಮುಗಿಸಿತಾದರೂ ಮಧ್ಯಪ್ರದೇಶ, ಗುಜರಾತ್ ಮತ್ತು ಒರಿಸ್ಸಾದಲ್ಲಿ ಕ್ರೈಸ್ತರ ಮೇಲೆ ನಡೆದ ಹಿಂಸಾಚಾರದ ಘಟನೆಗಳು ಪ್ರತಿಧ್ವನಿ
ಸಿದವು. ಪ್ರಶ್ನೋತ್ತರ ಅವಧಿ ಮುಗಿದ ಕೂಡಲೇ ಇಲ್ಲಿಯೂ ಕೋಲಾಹಲ ಉಂಟಾಗಿ ಎರಡು ಬಾರಿ ಮುಂದೂಡಬೇಕಾಯಿತು.
ಕೆ.ಎಸ್.ನ. ಸಹಿತ ಆರು ಮಂದಿಗೆ ಸಾಹಿತ್ಯ ಅಕಾಡೆಮಿ ಫೆಲೋಶಿಪ್
ನವದೆಹಲಿ, ಫೆ. 23 (ಯುಎನ್ಐ)– ‘ಮೈಸೂರು ಮಲ್ಲಿಗೆ’ಯ ಕವಿ ಕೆ.ಎಸ್. ನರಸಿಂಹಸ್ವಾಮಿ ಸಹಿತ ವಿವಿಧ ಭಾಷೆಗಳ ಆರು ಮಂದಿ ಹೆಸರಾಂತ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ಗೆ ಪಾತ್ರರಾಗಿದ್ದಾರೆ.
ಅಕಾಡೆಮಿ ನೀಡುವ ಅತ್ಯಂತ ದೊಡ್ಡ ಗೌರವ ಇದು. ಕೆ.ಎಸ್. ನರಸಿಂಹಸ್ವಾಮಿ ಅವರೊಂದಿಗೆ ತೆಲುಗು ಕವಿ– ವಿಮರ್ಶಕ ಗುಂಟೂರು ಶೇಷೇಂದ್ರ ಶರ್ಮ, ಅಸ್ಸಾಮಿ ಸಾಹಿತಿ ಸೈಯದ್ ಅಬ್ದುಲ್ ಮಲಿಕ್, ಮಣಿಪುರಿ ಸಾಹಿತಿ ನಿಂಗ್ಥಂಖಾಂಗ್ಜಂಖೈಚಂದ್ರ ಸಿಂಗ್, ಹಿಂದಿ ಕವಿ ರಾಮ್ ವಿಲಾಸ್ ಶರ್ಮ ಮತ್ತು ಗುಜರಾತಿ ಕವಿ ರಾಜೇಂದ್ರ ಷಾ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿದ ವ್ಯಕ್ತಿಗಳಿಗೆ ಮಾತ್ರ ಸಾಮಾನ್ಯವಾಗಿ ಈ ಪುರಸ್ಕಾರ ಕೊಡಲಾಗುತ್ತದೆ.