ಸಬ್ ಇನ್ಸ್ಪೆಕ್ಟರಿಗೆ ಮರಣದಂಡನೆ ಮೂವರಿಗೆ ಜೀವಾವಧಿ ಶಿಕ್ಷೆ
ನವದೆಹಲಿ, ನ. 16– ಕೊಲೆ ಪ್ರಕರಣದ ಸಂಬಂಧದಲ್ಲಿ ದೆಹಲಿಯ ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಕ್ಷಿಸಿಂಗ್ ಎಂಬುವವರಿಗೆ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಶ್ರೀ ಎಂ.ಕೆ. ಚಾವ್ಲಾ ಅವರು ಇಂದು ಮರಣದಂಡನೆ ವಿಧಿಸಿದರು.
ಹೆಡ್ ಕಾನ್ಸ್ಟೆಬಲ್ ಸುಜನ್ ಸಿಂಗ್ ಮತ್ತು ಕಾನ್ಸ್ಟೆಬಲ್ ಧರಂಪಾಲ್ ಅವರೂ ಸೇರಿ ಒಂಬತ್ತು ಆರೋಪಿಗಳಲ್ಲಿ ಮೂವರಿಗೆ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿದರು. ತೀರ್ಪು ನೀಡಿದ ನ್ಯಾಯಾಧೀಶರು ‘ಕಾನೂನು ಪಾಲಕರೇ ಕಾನೂನನ್ನು ಕೈಗೆತ್ತಿಕೊಂಡು, ನಿರಪರಾಧಿ ಹಾಗೂ ಶಾಂತಿಪ್ರಿಯ ನಾಗರಿಕನ ಕೊಲೆ ಮಾಡಿದ ಪ್ರಕರಣವಿದು’ ಎಂದರು.
ಅನಾಣ್ಯೀಕರಣಕ್ಕೆ ಒತ್ತಾಯ ಬೆಲೆ ಏರಿಕೆ ಬಗ್ಗೆ ಆತಂಕ
ನವದೆಹಲಿ, ನ.16– ಬೆಲೆಗಳು ಏರುತ್ತಿರುವುದನ್ನು ತಡೆಗಟ್ಟಲು ಅನಾಣ್ಯೀಕರಣ ಮಾಡಬೇಕೆಂದು ಇಂದು ಸಂಸದೀಯ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಸಭೆಯಲ್ಲಿ ಪ್ರಬಲವಾಗಿ ಒತ್ತಾಯಪಡಿಸಲಾಯಿತು.
ನಾಗಾಲೋಟದಿಂದ ಏರುತ್ತಿರುವ ಬೆಲೆಗಳನ್ನು ತಡೆಗಟ್ಟುವುದರಲ್ಲಿ ಸರ್ಕಾರ ವಿಫಲವಾಗಿರುವುದಕ್ಕೆ, ಒಬ್ಬರಾದ ಮೇಲೊಬ್ಬರಂತೆ ಸದಸ್ಯರು ತೀವ್ರ ಆತಂಕ ವ್ಯಕ್ತಪಡಿಸಿದರು.
ಬೆಲೆಗಳ ಏರಿಕೆಯನ್ನು ತಡೆಗಟ್ಟಲು ಸರ್ಕಾರ ಅಸಮರ್ಥವಾದಲ್ಲಿ ಕೊನೆಯಪಕ್ಷ ಈಗ ಇರುವ ಮಟ್ಟವನ್ನೇ ಕಾಯ್ದುಕೊಂಡು ಬರುವುದಕ್ಕೆ ಪ್ರಯತ್ನಿಸಬೇಕು ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.