ಬೆಂಗಳೂರು, ಮೇ 24– ಶೇಕಡ 20ಕ್ಕಿಂತ ಕಡಿಮೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಬರುವ ಖಾಸಗಿ ಶಾಲೆಗಳಿಗೆ ವಿಧಿಸಲಾಗುತ್ತಿರುವ ದಂಡವನ್ನು ರದ್ದುಗೊಳಿಸುವ ಸಾಧ್ಯತೆ ಬಗ್ಗೆ ಸರ್ಕಾರ ಪರಿಶೀಲಿಸುವುದು ಎಂದು ಶಾಲಾ ಶಿಕ್ಷಣ ರಾಜ್ಯ ಮಂತ್ರಿ ಈವಾವಾಜ್ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಈ ಸಂಬಂಧದಲ್ಲಿ ಮಳ್ಳೂರು ಆನಂದರಾಯರು ಎತ್ತಿದ ಚರ್ಚೆಗೆ ಉತ್ತರ ನೀಡಿದ ವಾಜ್ ಅವರು, ತೀರಾ ಕಳಪೆ ಫಲಿತಾಂಶ ಬರುವ ಶಾಲೆಗಳನ್ನು ಸುಧಾರಿಸಲು ಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವ ಪದ್ಧತಿ ತಪ್ಪಿಸಲು ಪರೀಕ್ಷೆಗಾಗಿ ಒಂದು ಶಾಲೆಯ ವಿದ್ಯಾರ್ಥಿಗಳನ್ನು ಇನ್ನೊಂದು ಕೇಂದ್ರಕ್ಕೆ ಕಳುಹಿಸುವ, ಶಿಕ್ಷಕರನ್ನು ಪರೀಕ್ಷಕರಾಗಿ ಬೇರೆ ಶಾಲೆಗಳಿಗೆ ಕಳುಹಿಸುವ ಪ್ರಯೋಗಗಳು ನಡೆಯುತ್ತಿವೆ ಎಂದರು.
ಆನಂದರಾಯರು ತಮ್ಮ ಭಾಷಣದಲ್ಲಿ, ಪರೀಕ್ಷಾ ದಂಡಗಳ ಹೆದರಿಕೆಯಿಂದಾಗಿ ಖಾಸಗಿ ಶಾಲೆಗಳಲ್ಲಿ ಕಾಪಿ ಹೊಡೆದು ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಅಭ್ಯಾಸ ಬೆಳೆಯುತ್ತಿದೆ ಎಂದು ಆಪಾದಿಸಿದರು.