ನವದೆಹಲಿ, ಡಿ. 1– ಕೇಂದ್ರದಲ್ಲಿ ಸರ್ಕಾರ ರಚಿಸಲು ತನಗೊಂದು ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷವು ಇಂದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಮನವಿ ಮಾಡಿದೆ.
ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ಸಿನ ಏಳು ಸದಸ್ಯರ ನಿಯೋಗವೊಂದು ರಾಷ್ಟ್ರಪತಿ ಅವರನ್ನು ಇಂದು ರಾತ್ರಿ ಭೇಟಿ ಮಾಡಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿತು.
ಸಂಯುಕ್ತರಂಗ ಮತ್ತು ಬಿಜೆಪಿಗೆ ಈ ಹಿಂದೆ ಸರ್ಕಾರ ರಚಿಸಲು ಅವಕಾಶ ನೀಡಿರುವುದರಿಂದ ಈ ಬಾರಿ ತನಗೆ ಅವಕಾಶ ನೀಡುವಂತೆ ರಾಷ್ಟ್ರಪತಿಯವರನ್ನು ಕಾಂಗ್ರೆಸ್ ಕೋರಿತು.
ಪಕ್ಷ ಬಿಟ್ಟು ಬನ್ನಿ: ಕಾಂಗ್ರೆಸ್ ಸಂಸದರಿಗೆ ಅಟಲ್ ಕರೆ
ನವದೆಹಲಿ, ಡಿ.1 (ಯುಎನ್ಐ)– ‘ಹೊಸ ಚುನಾವಣೆಯನ್ನು ತಡೆಯಬೇಕು ಅನ್ನುವುದೇ ಆದರೆ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರು ತಮ್ಮ ಮಾತೃಪಕ್ಷ ತೊರೆದು ಬಿಜೆಪಿ ನೇತೃತ್ವದ ಸರ್ಕಾರವನ್ನು ಬೆಂಬಲಿಸಬೇಕು’ ಎಂದು ಭಾರತೀಯ ಜನತಾ ಪಕ್ಷ ಇಂದು ಬಹಿರಂಗ ಕರೆ ನೀಡಿದೆ.
‘ಕೇಂದ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್ನ ಹಲವರು ಹಾಗೂ ಇತರೆ ಪಕ್ಷಗಳ ಕೆಲವು ಲೋಕಸಭಾ ಸದಸ್ಯರು ತಮ್ಮೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ’ ಎಂದು ಬಿಜೆಪಿ ನಾಯಕ ಎ.ಬಿ. ವಾಜಪೇಯಿ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.