ಬೆಂಗಳೂರು, ಫೆ. 7– ಗ್ರಾನೈಟ್ ಹಗರಣದ ತನಿಖೆಗಾಗಿ ರಚನೆಯಾಗಿರುವ ಜಂಟಿ ಸದನ ಸಮಿತಿ ಸಭೆಯಲ್ಲಿ ಇಂದು ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲದ ವಾತಾವರಣ ನಿರ್ಮಾಣವಾಗಿ, ಇದೇ ಕಾರಣಕ್ಕಾಗಿ ಕಲಾಪವನ್ನು ಮಧ್ಯದಲ್ಲಿಯೇ ಮೊಟುಕುಗೊಳಿಸಿ ಹಠಾತ್ತನೆ ಹತ್ತು ದಿನ ಮುಂದಕ್ಕೆ ಹಾಕಿದ ಅಪರೂಪದ ಘಟನೆ ನಡೆಯಿತು ಎಂದು ವರದಿಯಾಗಿದೆ.
ಗ್ರಾನೈಟ್ ಅವ್ಯವಹಾರದಲ್ಲಿ 21 ಜನರಿದ್ದಾರೆ ಎಂದು ಸದನದ ಒಳಗೆ– ಹೊರಗೆ ಹೇಳಿಕೆ ನೀಡಿರುವ ಗಣಿ ಖಾತೆ ಸಚಿವ ಎಸ್.ಡಿ.ಜಯರಾಂ ಮತ್ತು ಗ್ರಾನೈಟ್ಗೆ ಸಂಬಂಧಿಸಿದಂತೆ ಸಚಿವರಿಂದ ಸೂಚನೆ ಬಂದರೂ ಅದನ್ನು ತಮ್ಮ ಗಮನಕ್ಕೆ ತಾರದೇ ಜಾರಿಗೆ ತರಬಾರದು ಎಂದು ಸುತ್ತೋಲೆ ಹೊರಡಿಸಿ ಕೋಲಾಹಲಕ್ಕೆ ಕಾರಣರಾಗಿದ್ದ ಅಂದಿನ ಗಣಿ ನಿರ್ದೇಶಕ ಎಂ.ಮದನಗೋಪಾಲ್ ಅವರನ್ನು ಸಮಿತಿಯ ಮುಂದೆ ಕರೆಸಬೇಕು ಎನ್ನುವ ಬಹುತೇಕ ಸದಸ್ಯರ ಪಟ್ಟೇ ಇಂದಿನ ಕೋಲಾಹಲಕ್ಕೆ ಕಾರಣವಾಯಿತು ಎನ್ನಲಾಗಿದೆ.
ಜಯಲಲಿತಾ ಮತ್ತೆ ದಾಖಲೆ 5,004 ಜೋಡಿಗಳ ವಿವಾಹ
ತಿರುಚಿನಾಪಳ್ಳಿ, ಫೆ. 7 (ಪಿಟಿಐ)– ಇತ್ತೀಚೆ ಗಷ್ಟೇ ತಮ್ಮ ದತ್ತುಪುತ್ರನ ವಿವಾಹಕ್ಕೆ 117 ಕೋಟಿ ರೂಪಾಯಿ ವೆಚ್ಚ ಮಾಡಿ ದಾಖಲೆ ನಿರ್ಮಿಸಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಈಗ 5,004 ಜೋಡಿಗಳ ವಿವಾಹ ನೆರವೇರಿಸುವ ಮೂಲಕ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ.
ಎಐಎಡಿಎಂಕೆ ಪಕ್ಷದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ಈ ಜೋಡಿಗಳು ದಾಂಪತ್ಯ ಬದುಕಿಗೆ ಅಡಿಯಿಟ್ಟವು.