ಚೆನ್ನೈ, ಆ. 7 (ಯುಎನ್ಐ)– ಸಂಪೂರ್ಣ ಕ್ಷಮಾದಾನ ಬೇಡಿಕೆ ಮುಂದಿಟ್ಟಿರುವ ಕುಖ್ಯಾತ ನರಹಂತಕ ವೀರಪ್ಪನ್ ಇದೀಗ, ಕ್ಷಮಾದಾನಕ್ಕೆ ಪರ್ಯಾಯವಾಗಿ ಐದು ಕೋಟಿ ರೂಪಾಯಿಗಳ ಪರಿಹಾರ ನೀಡುವಂತೆ ಒತ್ತಾಯಿಸುವುದರೊಂದಿಗೆ ಒತ್ತೆಯಾಳು ಸಮಸ್ಯೆ ಹೊಸ ತಿರುವು ಪಡೆದುಕೊಂಡಿದೆ. ಈ ಬೇಡಿಕೆ ಪೂರೈಕೆಗಾಗಿ ವೀರಪ್ಪನ್ ಒಂದು ವಾರದ ಗಡುವು ನೀಡಿದ್ದಾನೆ.
‘ತನಗೆ ಎಂಟು ದಿನಗಳ ಒಳಗಾಗಿ ಐದು ಕೋಟಿ ರೂಪಾಯಿ ನೀಡಿದಲ್ಲಿ ಮಾತ್ರ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಬಿಡುಗಡೆ ಮಾಡುವುದಾಗಿ ವೀರಪ್ಪನ್ ಸ್ಪಷ್ಟಪಡಿಸಿದ್ದಾನೆ’ ಎಂದು ಎರಡನೇ ಬಾರಿ ವೀರಪ್ಪನ್ನನ್ನು ಭೇಟಿಯಾಗಿ ಬಂದ ಆರ್.ಆರ್.ಗೋಪಾಲ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಈ ಬಗ್ಗೆ ಚರ್ಚಿಸಿ ಆಗಸ್ಟ್ 15ರ ಒಳಗೆ ನಿರ್ಧಾರ ಪ್ರಕಟಿಸಬೇಕು, ಇಲ್ಲದಿದ್ದರೆ ಎಲ್ಲ ಎಂಟು ಮಂದಿ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ವೀರಪ್ಪನ್ ಬೆದರಿಕೆ ಹಾಕಿದ್ದಾನೆ ಎಂದು ಗೋಪಾಲ್ ಹೇಳಿದರು.
ನೇತ್ರಾವತಿ ನದಿ ಅಪಾಯ ಮಟ್ಟದಲ್ಲಿ
ಬಂಟ್ವಾಳ, ಆ.7– ಕಳೆದ ಮೂರು, ನಾಲ್ಕು ದಿನಗಳಿಂದ ಘಟ್ಟದ ಮೇಲಿನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ನೇತ್ರಾವತಿನೀರಿನ ಮಟ್ಟ ಗಮನಾರ್ಹವಾಗಿ ಏರುತ್ತಿದ್ದು, ಅಪಾಯದ ಮಟ್ಟ ತಲುಪುವ ಎಲ್ಲ ಸಾಧ್ಯತೆಗಳು ಕಂಡುಬಂದಿವೆ.
ದೋಣಿ ಬುಡಮೇಲಾಗಿ ಮೂವರು ನೀರುಪಾಲು
ಕಾರವಾರ, ಆ.7– ಮೀನು ಹಿಡಿಯಲು ಹೋಗಿದ್ದ ಹೊನ್ನಾವರ ತಾಲ್ಲೂಕಿನ ಹಳದೀಪುರದ ಮೂವರು ಗೋವಾದಲ್ಲಿ ಸಮುದ್ರ ಪಾಲಾಗಿದ್ದು, ಮೂವರು ಈಜಿ ಪಾರಾಗಿದ್ದಾರೆ.