ಎಲ್ಲ ಯಂತ್ರೋಪಕರಣ ತಯಾರಿಕೆಯಲ್ಲೂ ಸ್ವಾವಲಂಬನೆಗೆ ರಾಷ್ಟ್ರಪತಿ ಗಿರಿ ಕರೆ
ಬೆಂಗಳೂರು, ಮೇ 14– ‘ನಮಗೆ ಅಗತ್ಯವಾದ ಪ್ರತಿಯೊಂದು ಯಂತ್ರೋಪಕರಣವನ್ನೂ– ಸೂಜಿಯಿಂದ ಜಹಜುವರೆಗೆ– ಇನ್ನೊಂದು ದಶಕದೊಳಗಾಗಿ ರಾಷ್ಟ್ರದಲ್ಲಿಯೇ ತಯಾರಿಸಲು’ ರಾಷ್ಟ್ರಪತಿ ವಿ.ವಿ ಗಿರಿ ಇಂದು ಇಲ್ಲಿ ಕಾರ್ಮಿಕ ಮತ್ತು ಕೈಗಾರಿಕೋದ್ಯಮಿಗಳಿಗೆ ಕರೆಯಿತ್ತರು.
‘ಸ್ವಾತಂತ್ರ್ಯ ಪಡೆದು 22 ವರ್ಷಗಳು ಉರುಳಿದರೂ ನಾವಿನ್ನೂ ಯಂತ್ರೋಪಕರಣಗಳಿಗೆ ಪರದೇಶಗಳನ್ನು ಅವಲಂಬಿಸಿರುವುದಕ್ಕೆ’ ಅವರು ವಿಷಾದಿಸಿ ‘ಅಗತ್ಯವಾದವುಗಳನ್ನೆಲ್ಲಾ ಇಲ್ಲೇ ಉತ್ಪಾದಿಸುವ ಹೊರತು ಭವಿಷ್ಯವಿಲ್ಲ. ಅದನ್ನು ಪ್ರತೀ ಕಾರ್ಮಿಕ ಮತ್ತು ಕೈಗಾರಿಕೋದ್ಯಮಿ ಮನಸ್ಸಿನಲ್ಲಿಟ್ಟುಕೊಳ್ಳಲಿ’ ಎಂದರು.
ಹಿಂದುಳಿದ ಪ್ರದೇಶ: ಪುನರ್ವಿಮರ್ಶೆಗೆ ಸದಸ್ಯರ ಆಗ್ರಹ
ನವದೆಹಲಿ, ಮೇ 14– ರಾಜ್ಯ ಸರ್ಕಾರಗಳು ಆಯ್ಕೆ ಮಾಡಿರುವ ‘ಹಿಂದುಳಿದ’ ಪ್ರದೇಶಗಳ ವಿಷಯದಲ್ಲಿ ಇಂದು ರಾಜ್ಯಸಭೆ ಯಲ್ಲಿ ಕೋಲಾಹಲ ಉಂಟಾಯಿತು.
ಇನ್ನೂ ‘ಹೆಚ್ಚು ಹಿಂದೆ ಉಳಿದಿರುವ’ ಪ್ರದೇಶಗಳನ್ನು ಕೈಬಿಡಲಾಗಿದೆ ಎಂದು ಅನೇಕ ರಾಜ್ಯಗಳ ಸದಸ್ಯರು ದೂರಿದರು.
ಇನ್ನೂ ಹಿಂದೆ ಬಿದ್ದಿರುವ ಪ್ರದೇಶಗಳಿರಬಹುದೆಂದೂ ಆದರೆ ಅದನ್ನು ನಿರ್ಧರಿಸುವುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದೆಂದೂ ಪ್ರಧಾನಿ ಅವರು ಉತ್ತರ ಕೊಟ್ಟರು.