ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿಧಾಮ ಮತ್ತು ಬಳ್ಳಾರಿ ಜಿಲ್ಲೆ ಗುಡೆಕೋಟೆಯ ಕರಡಿಧಾಮ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ, ರಾಜ್ಯ ವನ್ಯಜೀವಿ ಮಂಡಳಿಗೆ ಪ್ರಸ್ತಾವಗಳು ಸಲ್ಲಿಕೆಯಾಗಿವೆ ಎಂದು ವರದಿಯಾಗಿದೆ (ಪ್ರ.ವಾ., ಆ. 29). ಕರ್ನಾಟಕದಲ್ಲಿ ಗಣಿಗಾರಿಕೆಯು ಜಿಎಸ್ಡಿಪಿಯ ಪ್ರಮುಖ ಮೂಲವಲ್ಲ. ಉದಾಹರಣೆಗೆ, ರಾಜ್ಯದ ಜಿಎಸ್ಡಿಪಿಗೆ 2020-21ರಲ್ಲಿ ಅರಣ್ಯಗಾರಿಕೆ- ದಿಮ್ಮಿ ಆರ್ಥಿಕತೆ ಹಾಗೂ ಮೀನುಗಾರಿಕೆಯ ಕೊಡುಗೆ ಕ್ರಮವಾಗಿ ₹ 9,872 ಕೋಟಿ ಮತ್ತು ₹ 5261 ಕೋಟಿ (ಒಟ್ಟು ₹ 15,133 ಕೋಟಿ). ಆದರೆ ಗಣಿಗಾರಿಕೆ ಮತ್ತು ಕಲ್ಲುಗಣಿಗಳಿಂದ 2020–21ರಲ್ಲಿ ಬಂದ ವರಮಾನ ₹ 6,568 ಕೋಟಿ. ಅಪಾರ ವರಮಾನ ನೀಡುವ ಅರಣ್ಯಗಳನ್ನು ನಾಶ ಮಾಡಿ, ಮೀನುಗಾರಿಕೆಯನ್ನು ನಿರ್ಲಕ್ಷಿಸಿ ಗಣಿಗಾರಿಕೆಗೆ ಸರ್ಕಾರ ಏಕೆ ಇಷ್ಟೊಂದು ಮಹತ್ವ ನೀಡುತ್ತಿದೆ?