ರಾಜಾರಾವ್ ಅವರ ‘ಕಾಂತಾಪುರ’ ಕಾದಂಬರಿ 1938ರಲ್ಲಿ ಮೊದಲು ಪ್ರಕಟಗೊಂಡು ಹಲವು ಮರುಮುದ್ರಣ, ಅನುವಾದ ಕಂಡಿದೆ. ಗಾಂಧೀಜಿಯು ಸತ್ಯಾಗ್ರಹ, ಅಹಿಂಸೆ, ಸ್ವದೇಶಿ ತತ್ವಗಳನ್ನು ಆಯುಧಗಳನ್ನಾಗಿ ಪ್ರಯೋಗಿಸಿ ಪ್ರಾರಂಭಿಸಿದ ಚಳವಳಿಯು ದೇಶದಾದ್ಯಂತ ಬಿರುಸಾಗಿದ್ದ ದಿನಗಳಲ್ಲಿ, ಮೈಸೂರು ಪ್ರಾಂತ್ಯದ ಮಲೆನಾಡಿನ ‘ಕಾಂತಾಪುರ’ ಎಂಬ ಗ್ರಾಮವನ್ನು ಆಧಾರವಾಗಿಟ್ಟು ಈ ಕಾದಂಬರಿ ರಚಿತವಾಗಿದೆ. ಮೂರ್ತಿ ಎಂಬ ಗಾಂಧಿ ತತ್ವಗಳ ಸಾಕಾರಮೂರ್ತಿಯ ಮುಖಾಂತರ, ಅಲ್ಲಿನ ವಿವಿಧ ಜಾತಿ, ಕಸುಬು, ಸ್ತರಗಳ ಸಮುದಾಯವನ್ನು ಹೊಕ್ಕು ಆವರಿಸಿ, ಇಡೀ ಸಮುದಾಯವು ಉತ್ಸಾಹ ಆವೇಶಗಳಿಂದ ಚಳವಳಿಯಲ್ಲಿ ಧುಮುಕಿ ಸರ್ಕಾರದ ಕ್ರೌರ್ಯ, ಅತ್ಯಾಚಾರಗಳಿಗೆ ಅಳುಕದೆ, ಹಿಂಸೆ ನೋವು ಅನುಭವಿಸಿ ದಿಟ್ಟತನದಿಂದ ತೊಡಗಿಕೊಳ್ಳುವ ಪರಿ ಕಾದಂಬರಿಯಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ.