ದಕ್ಷಿಣ ಕರ್ನಾಟಕ ಭಾಗದ ಜನ, ಅದರಲ್ಲೂ ಮೈಸೂರು ಭಾಗದವರು (ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಹಾಸನ, ಚಾಮರಾಜನಗರ) ರಾಗಿಯನ್ನು ಹೆಚ್ಚು ಬಳಸುತ್ತಾರೆ. ರಾಗಿ ಮುದ್ದೆ ಈ ಭಾಗದ ಜನರಿಗೆ ದಿನವೂ ಬೇಕಿರುವ ಆಹಾರ. ಹಿಂದಿನ ಕಾಲದಿಂದಲೂ ರಾಗಿಯನ್ನೇ ಉಪಯೋಗಿಸಿ ರಾಗಿಯನ್ನೇ ಹೆಚ್ಚು ಹೆಚ್ಚು ಬೆಳೆಯುತ್ತಾ ಬಂದಿದ್ದಾರೆ. 50– 60 ವರ್ಷಗಳ ಹಿಂದೆ ನೀರಾವರಿ ಇಲ್ಲದೆ ಭತ್ತ ಬೆಳೆಯಲು ಆಗದವರು, ಅಕ್ಕಿ ಕೊಳ್ಳಲು ಆಗದವರು ವಾರಕ್ಕೊಮ್ಮೆ, ಹಬ್ಬ ಹರಿದಿನಗಳಲ್ಲಿ ಅನ್ನ ತಿನ್ನುತ್ತಿದ್ದರು ಎಂಬ ಮಾತು ಸಹ ಇದೆ. ಇವರು ಅಕ್ಕಿಯನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಬಳಸಲು ಪ್ರಾರಂಭಿಸಿದ್ದು ಪಡಿತರ ಅಕ್ಕಿ ನೀಡಲಾರಂಭಿಸಿದ ಮೇಲೆ. ಕಡಿಮೆ ಖರ್ಚಿನಲ್ಲಿ ರಾಗಿ ಬೆಳೆದು, ಯಾವಾಗಲೂ ಉತ್ತಮ ಇಳುವರಿಯಾಗದಿದ್ದರೂ ತಮ್ಮ ಹೊಟ್ಟೆಪಾಡಿಗೆ ಸಾಕಾಗುವುದರಿಂದ ಈ ಪ್ರದೇಶದ ಜನರಿಗೆ ರಾಗಿ ಉತ್ತಮ ಆಯ್ಕೆಯಾಗಿತ್ತು. ಹೀಗೆ ರಾಗಿಯನ್ನೇ ಬೆಳೆದು ತಿನ್ನುವವರಿಗೆ ಅಕ್ಕಿಯ ಬದಲು ರಾಗಿ ಕೊಡುತ್ತೇವೆ ಎಂದರೆ ಸಹಜವಾಗಿ ಅಕ್ಕಿ ಕೊಡಿ ಎಂದೇ ಕೇಳುತ್ತಾರೆ.