ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದ ತಮ್ಮ ಮಗ ಬಿ.ವೈ. ವಿಜಯೇಂದ್ರ ಸ್ಪರ್ಧಿಸುತ್ತಾರೆ. ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅಲ್ಲಿನ ಮತದಾರ ರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದಾಗ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಜ ಅರ್ಥದಲ್ಲಿ ಬಯಸುವ ಯಾರಲ್ಲಾದರೂ ಹಲವಾರು ಪ್ರಶ್ನೆಗಳು ಪುಟಿದೇಳುತ್ತವೆ. ಯಡಿಯೂರಪ್ಪನವರ ನಂತರ ಅವರ ಮಗನನ್ನೇ ಅಲ್ಲಿನ ಮತದಾರರು ಏಕೆ ಆರಿಸಬೇಕು? ಅವರಿಗೆ ಬೇರೆ ಆಯ್ಕೆ ಇರಬಾರದೇ?! ಯಡಿಯೂರಪ್ಪ ಅವರನ್ನು ಲಾಗಾಯ್ತಿನಿಂದಲೂ ಬೆಂಬಲಿಸಿಕೊಂಡು ಬಂದಿರುವ ಅವರದೇ ಪಕ್ಷದ ಒಬ್ಬ ಕಾರ್ಯಕರ್ತ ಏಕೆ ಅವರ ಉತ್ತರಾಧಿಕಾರಿ ಆಗಬಾರದು?