ಅಪರೂಪದ ತಳಿಯಾಗಿದ್ದು ಭೌಗೋಳಿಕ ಮಾನ್ಯತೆ ಪಡೆದಿದ್ದರೂ ಬೆಳೆ ಪ್ರಮಾಣ ಕುಂಠಿತವಾಗುತ್ತಿರುವ ಜನಪ್ರಿಯ ‘ನಂಜನಗೂಡು ರಸಬಾಳೆ’ಯನ್ನು ಬೆಳೆಯಲು ರೈತರನ್ನು ಉತ್ತೇಜಿಸುವಂತೆ ತೋಟಗಾರಿಕಾ ಅಧಿಕಾರಿಗಳಿಗೆ ಮೈಸೂರಿನ ಜಿಲ್ಲಾಧಿಕಾರಿ ಸೂಚನೆ ಕೊಟ್ಟಿದ್ದಾರೆ. ನಂಜನಗೂಡು ತಾಲ್ಲೂಕಿನ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿರುವ ದೇವರಸನಹಳ್ಳಿ ಎಂಬ ಗ್ರಾಮದಲ್ಲಿ ಮೊದಲು ಈ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಇದೀಗ ಈ ವಿಶೇಷ ರಸಬಾಳೆ ಬೆಳೆಯುವ ಪ್ರದೇಶದ ಪ್ರಮಾಣ ತೀರಾ ಕಡಿಮೆಯಾಗಲು ಏನು ಕಾರಣ, ಈ ಬೆಳೆಯನ್ನು ಹೆಚ್ಚಿನ ಪ್ರದೇಶಕ್ಕೆ ವಿಸ್ತರಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಗಂಭೀರವಾದ ಚಿಂತನೆ ನಡೆಯಬೇಕಾಗಿದೆ.