ಬಾಲ್ಯದಲ್ಲಿ ನಾವು ಬೇಸಿಗೆ ರಜೆ ಕಳೆಯಲು ಬೇರೆ ಊರುಗಳಿಗೆ ಹೋಗಿ ಸ್ವಗ್ರಾಮಕ್ಕೆ ಮರಳುವಾಗ, ನಮ್ಮ ಹಳ್ಳಿ ಹತ್ತಿರವಾಗಿದೆ ಎಂದು ಬಸ್ಸಿನ ಕಿಟಕಿ ನೋಡದೇ ತಿಳಿಯುತ್ತಿದ್ದೆವು. ಹೇಗೆಂದರೆ, ಬಸ್ಸಿನೊಳಗೆ ಕವಿಯುತ್ತಿದ್ದ ಕತ್ತಲಿನಿಂದ! ಬಸ್ಸಿನೊಳಗೆ ಇಂತಿಷ್ಟು ಅವಧಿಗೆ ಕತ್ತಲು ಕವಿಯಿತೆಂದರೆ ನಮ್ಮ ಮೈ ಮನಗಳಲ್ಲಿ ಬೆಳಕು ಮೂಡುತ್ತಿತ್ತು. ಅಷ್ಟಕ್ಕೂ ಈ ಕತ್ತಲೆಂದರೆ, ರಸ್ತೆಗಳ ಅಕ್ಕಪಕ್ಕದಲ್ಲಿದ್ದ ದೈತ್ಯ ಮರಗಳ ದಟ್ಟ ನೆರಳು. ‘ನಿಮ್ಮೂರು ಹತ್ತಿರವಾಗಿದೆ’ ಎಂದು ಅದು ಸಾರಿ ಹೇಳುತ್ತಿತ್ತು. ಆ ವಿಶಿಷ್ಟ ಅನುಭೂತಿಯನ್ನು ಮನಸಾರೆ ಅನುಭವಿಸಿ ಪುಳಕಗೊಳ್ಳುತ್ತಿದ್ದೆವು. ಏಕೆಂದರೆ ಆ ಮರಗಳು ನಮ್ಮೂರಿನ ಅಸ್ಮಿತೆಯನ್ನು ಹೊಂದಿದ್ದವು.