ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ 24 ಎಕರೆ ಪ್ರದೇಶದಲ್ಲಿ 30 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕಾಗಿ ಭೂಮಿಪೂಜೆ ನಡೆದಿರುವುದು ವರದಿಯಾಗಿದೆ. ಈ ಪಾರ್ಕಿನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸುವುದಾಗಿ ಸಚಿವರು ಹೇಳಿದ್ದಾರೆ. ಶಾಂತಿ ಮತ್ತು ವೈರಾಗ್ಯದ ಸಂದೇಶ ಸಾರಿದ ಬಾಹುಬಲಿಯ 57 ಅಡಿಗಳ ಏಕಶಿಲಾ ವಿಗ್ರಹ ಶ್ರವಣಬೆಳಗೊಳದಲ್ಲಿದೆ ಮತ್ತು ಇದು ವಿಶ್ವವಿಖ್ಯಾತಿ ಪಡೆದಿದೆ. ಇದಕ್ಕಿಂತ ಎತ್ತರದ ಪ್ರತಿಮೆಗಳಿಗೆ ಅರ್ಥವಿದೆಯೇ ಎಂದು ರಾಜ್ಯದ ಜನ ಪ್ರಶ್ನಿಸಿಕೊಳ್ಳಬೇಕು. ಥೀಮ್ ಪಾರ್ಕ್ ಮಾಡಿ, ಕೆಂಪೇಗೌಡರ ಪ್ರತಿಮೆಯನ್ನೂ ಸ್ಥಾಪಿಸಿ. ಆದರೆ 108 ಅಡಿಯ ಕಂಚಿನ ಪ್ರತಿಮೆ ಮತ್ತು ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದು ಪ್ರಶ್ನಾರ್ಹವಾಗಿದೆ. ಇದರ ಅಗತ್ಯವಿದೆಯೇ ಎಂದು ಆಲೋಚಿಸಬೇಕಾಗಿದೆ.