ಇಂದು ದ್ವೇಷ ಬಿತ್ತುವ ಮಾತುಗಳನ್ನು ಹರಿಯಬಿಡುವ ಚಟ ಯಾವುದೇ ಒಂದು ಪಂಗಡಕ್ಕೆ ಸೀಮಿತವಾಗಿಲ್ಲ. ದ್ವೇಷದ ಮಾತನಾಡುವುದು ಒಂದು ಅಮಲಿನಂತೆ ಪಸರಿಸುತ್ತಿದೆ. ನಾವು ಪಾಲಿಸಿದ, ಪೋಷಿಸಿದ ಸಂಸ್ಕೃತಿಗೆ ವಿರುದ್ಧವಾದ ನಡೆಯಾಗಿದೆ. ‘ಇದು ನನ್ನ ದೇಶ, ಈ ಸಮಾಜದಲ್ಲಿ ನನ್ನಂತೆಯೇ ಅನೇಕರು ಇದ್ದಾರೆ, ಎಲ್ಲರ ಶಾಂತಿಯನ್ನು ಕಾಪಾಡುವುದು ನನ್ನ ಆದ್ಯ ಕರ್ತವ್ಯವಾಗಿದೆ’ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಆಗಮಾತ್ರ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಲು ಸಾಧ್ಯ. ಎಲ್ಲ ಧರ್ಮಕ್ಕಿಂತ ಮನುಷ್ಯಧರ್ಮ ಶ್ರೇಷ್ಠ ಎಂಬ ಅರಿವಿಲ್ಲದೆ ದ್ವೇಷಭಾಷೆಯ ಮೂಲಕ ಸಾಮರಸ್ಯ ಕೆಡಿಸುವವರಿಗೆ ನಮ್ಮ ದೇಶದ ಮೇಲೆ ಗೌರವವಿಲ್ಲ ಎಂದೇ ಅರ್ಥೈಸಿಕೊಳ್ಳಬೇಕು. ನಮ್ಮ ದೇಶ ಅಶಾಂತಿಯ ತಾಣವಾದರೆ ವಿದೇಶಗಳಲ್ಲಿ ನಮ್ಮ ದೇಶದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂಬ ಅರಿವು ಇಂತಹ ಜನರಿಗೆ ಇದ್ದಂತೆ ಇಲ್ಲ.