ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪುತ್ರ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಅವರು ಇದೇ ಮೊದಲ ಬಾರಿಗೆ ಮುಂಬೈ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಗಾಗಿ ಪ್ರಕಟಿಸಿರುವ 22 ಮಂದಿಯ ತಂಡದಲ್ಲಿ ಅರ್ಜುನ್ ಹೆಸರೂ ಇದೆ.
ಮುಂಬೈ ತಂಡದ ಮುಖ್ಯ ಕೋಚ್ ಸಲೀಲ್ ಅಂಕೋಲಾ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ. ಅರ್ಜುನ್ ಅಲ್ಲದೆ ಮತ್ತೊಬ್ಬ ವೇಗಿ ಕೃತಿಕ್ ಹನಗವಾಡಿ ಕೂಡ ತಂಡದಲ್ಲಿದ್ದಾರೆ.
‘ಬಿಸಿಸಿಐ ಆರಂಭದಲ್ಲಿ 20 ಆಟಗಾರರನ್ನು ಮಾತ್ರ ಆಯ್ಕೆ ಮಾಡುವಂತೆ ಸೂಚಿಸಿತ್ತು. ಬಳಿಕ 22 ಮಂದಿಯನ್ನೂ ಆಯ್ಕೆ ಮಾಡಬಹುದು ಎಂದು ಹೇಳಿತ್ತು. ಅದರಂತೆ ಹೆಚ್ಚುವರಿಯಾಗಿ ಇಬ್ಬರು ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ‘ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಅಧಿಕಾರಿಯೊಬ್ಬರು ಹೇಳಿದ್ದಾರೆ.
21 ವರ್ಷದ ಅರ್ಜುನ್ ಅವರು ಇದೇ ಮೊದಲ ಬಾರಿಗೆ ಮುಂಬೈ ಸೀನಿಯರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಹಿಂದೆ ಅವರು ವಯೋವರ್ಗಗಳ ಹಾಗೂ ಆಹ್ವಾನಿತ ಟೂರ್ನಿಗಳಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು.
ಭಾರತ 19 ವರ್ಷದೊಳಗಿನವರ ತಂಡದಲ್ಲೂ ಅರ್ಜುನ್ ಆಡಿದ್ದಾರೆ.
ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಜನವರಿ 10ರಿಂದ ಟೂರ್ನಿ ಆರಂಭವಾಗಲಿದೆ.