ಬೆಂಗಳೂರು: ಕರ್ನಾಟಕ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ತಂಡಗಳು ಜೂನ್ 4 ರಿಂದ 8ರವರೆಗೆ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ನಲ್ಲಿ ಮುಖಾಮುಖಿಯಾಗಲಿವೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವೆಬ್ಸೈಟ್ (ಬಿಸಿಸಿಐ ಡಾಟ್ ಟಿವಿ)ನಲ್ಲಿ ರಣಜಿ ಟ್ರೋಫಿ ನಾಕೌಟ್ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಗುಂಪು ಹಂತದ ಪಂದ್ಯಗಳು ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಬೇರೆ ಬೇರೆ ನಗರಗಳಲ್ಲಿ ಆಯೋಜನೆಗೊಂಡಿದ್ದವು.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಈ ಪಂದ್ಯಗಳು ನಡೆದಿದ್ದವು. ಮೇ 29ರಂದು ಐಪಿಎಲ್ ಫೈನಲ್ ಮುಗಿಯಲಿದೆ. ಜೂನ್ ಮೊದಲ ವಾರದಲ್ಲಿ ರಣಜಿ ನಾಕೌಟ್ ಹಂತದ ಪಂದ್ಯಗಳನ್ನು ಆಯೋಜಿಸಲಗುವುದು ಎಂದು ಈ ಹಿಂದೆಯೇ ಮಂಡಳಿಯು ಹೇಳಿತ್ತು.
ಕರ್ನಾಟಕ ತಂಡವು ಸಿ ಗುಂಪಿನಲ್ಲಿ ಪ್ರಥಮ ಸ್ಥಾನ ಗಳಿಸಿ ಎಂಟರ ಘಟ್ಟಕ್ಕೆ ನೇರ ಪ್ರವೇಶ ಪಡೆದಿತ್ತು. ಉತ್ತರಪ್ರದೇಶ ಜಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ಹೊರವಲಯದಲ್ಲಿರುವ ಆಲೂರಿನ ಕೆಎಸ್ಸಿಎ ಮೈದಾನ ಮತ್ತು ಜಸ್ಟ್ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯುವುದು ಬಹುತೇಕ ಖಚಿತವಾಗಿದೆ. ಜೂನ್ 12ರಿಂದ 16ರವರೆಗೆ ಸೆಮಿಫೈನಲ್ ಮತ್ತು 20 ರಿಂದ 24ರವರೆಗೆ ಫೈನಲ್ ಪಂದ್ಯಗಳು ನಡೆಯಲಿವೆ.