ಭಾರತದಲ್ಲಿ ಇಂದಿನಿಂದ ಅಂಧರ ಕ್ರಿಕೆಟ್ ವಿಶ್ವಕಪ್: ಪಾಕ್ ಪಡೆಗೆ ವೀಸಾ ಸಮಸ್ಯೆ

ಕರಾಚಿ: ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ತೆರಳಬೇಕಿದ್ದ ತನ್ನ ತಂಡದ ಪ್ರವಾಸವು ವೀಸಾ ಸಮಸ್ಯೆಯಿಂದಾಗಿ ವಿಳಂಬವಾಗಿದೆ ಎಂದು ಪಾಕಿಸ್ತಾನ ಅಂಧರ ಕ್ರಿಕೆಟ್ ಮಂಡಳಿ (ಪಿಬಿಸಿಸಿ) ತಿಳಿಸಿದೆ.
ಅಂಧರ ಕ್ರಿಕೆಟ್ ಫೆಡರೇಷನ್ ಆಫ್ ಇಂಡಿಯಾ ಡಿಸೆಂಬರ್ 6ರಿಂದ (ಇಂದಿನಿಂದ ) ಡಿಸೆಂಬರ್ 17ರ ವರೆಗೆ ದೇಶದ 9 ನಗರಗಳಲ್ಲಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿದೆ.
'ಇಂದಿನಿಂದ ಪಂದ್ಯಾವಳಿ ಆರಂಭವಾಗುತ್ತಿದೆಯಾದರೂ, ಭಾರತದ ಅಧಿಕಾರಿಗಳು ನಮಗೆ ಇನ್ನೂ ವಿಸಾ ವಿತರಿಸಿಲ್ಲ' ಎಂದು ಪಿಬಿಸಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಿಬಿಸಿಸಿ ತನ್ನ ತಂಡವನ್ನು ಕಳುಹಿಸಲು ಸಾಧ್ಯವಾಗುತ್ತದೆಯೇ ಎಂಬುದು ಖಚಿತವಾಗಿಲ್ಲ. ಏಕೆಂದರೆ ತಂಡವನ್ನು ಕಳುಹಿಸುವುದು ಈಗಾಗಲೇ ವಿಳಂಬವಾಗಿದೆ. ಟೂರ್ನಿಯ ಉದ್ಘಾಟನಾ ಸಮಾರಂಭವು ಗುರುಗ್ರಾಮದ ತೌ ದೇವಿ ಲಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
'ನಾವು ನವೆಂಬರ್ 23ರಂದೇ ವೀಸಾಗಾಗಿ ಅರ್ಜಿ ಸಲ್ಲಿಸಿದ್ದೇವೆ. ಈ ಬಗ್ಗೆ ಗಮನ ಹರಿಸುವಂತೆ ಅಂಧರ ಕ್ರಿಕೆಟ್ ಮಂಡಳಿಗೂ ಪತ್ರ ಬರೆದಿದ್ದೇವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಹಾಯವನ್ನೂ ಕೇಳಿದ್ದೇವೆ' ಎಂದೂ ಪಿಬಿಸಿಸಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
12 ದಿನಗಳ ವರೆಗೆ ನಡೆಯುವ ಈ ಟೂರ್ನಿಯಲ್ಲಿ ಆತಿಥೇಯ ಭಾರತ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಭಾಗವಹಿಸಲಿವೆ.
ಪಾಕಿಸ್ತಾನ ತಂಡ ಡಿಸೆಂಬರ್ 7 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಡಿಸೆಂಬರ್ 8 ರಂದು ಭಾರತದ ವಿರುದ್ಧ ಸೆಣಸಾಟ ನಡೆಸಲಿದೆ.
ಪಾಕ್ ಪಡೆ ಕಳೆದ ಆವೃತ್ತಿಯ ಫೈನಲ್ನಲ್ಲಿ ಭಾರತದೆದುರು ಮಣಿದು ರನ್ನರ್ ಅಪ್ ಆಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.