ಹುಬ್ಬಳ್ಳಿ: ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ 19 ವರ್ಷೊಳಗಿನವರ ವಿಭಾಗದಲ್ಲಿ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶ ತಂಡಗಳ ನಡುವಣ ಪೈಪೋಟಿಗೆ ಇಲ್ಲಿನ ರಾಜನಗರದ ಕೆಎಸ್ಸಿಎ ಕ್ರೀಡಾಂಗಣ ಸಜ್ಜಾಗಿದೆ.
ನಾಲ್ಕು ದಿನಗಳ ಈ ಪಂದ್ಯವು ಶನಿವಾರ ಆರಂಭಗೊಳ್ಳಲಿದೆ. ಉಭಯ ತಂಡಗಳು ಈಗಾಗಲೇ ತಲಾ ಎರಡು ಪಂದ್ಯ ಆಡಿವೆ. ಹಿಮಾಚಲ ಪ್ರದೇಶ ತಂಡವು ಮೊದಲ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದವಿರುದ್ಧ ಡ್ರಾ ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಮೇಘಾಲಯ ತಂಡದ ವಿರುದ್ಧ ಇನಿಂಗ್ಸ್ ಹಾಗೂ 230 ರನ್ಗಳಿಂದ ಗೆದ್ದು ತುಂಬು ಆತ್ಮವಿಶ್ವಾಸದಲ್ಲಿದೆ.
ತಂಡದ ನಾಯಕ ಇನ್ನೇಶ್ ಮಹಾಜನ್ (77 ರನ್), ಲೋಕೇಶ್ ಚೌಹಾಣ್ (53), ಅನಿಮೇಶ್ ಠಾಕೂರ್(68), ಅರ್ಜುನ್ ವಾಧ್ವಾ(121) ಹಾಗೂ ಗಂಗಾ ಸಿಂಗ್(81) ಹಾಗೂ ಪ್ರವಲ್ ಸಿಂಗ್(75) ಕಳೆದ ಪಂದ್ಯದಲ್ಲಿ ತಲಾ ಅರ್ಧ ಶತಕ ಗಳಿಸಿ ಮಿಂಚಿದ್ದರು.
ಇನ್ನು, ಕರ್ನಾಟಕ ತಂಡವು ಈಗಾಗಲೇ ಆಡಿದ ಎರಡೂ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಮುಂಬೈತಂಡದ ವಿರುದ್ಧ ಹಾಗೂ ಎರಡನೇ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಡ್ರಾ ಸಾಧಿಸಿತ್ತು.
ರಾಜ್ಯ ತಂಡದ ಆರಂಭಿಕ ವಿಶಾಲ್ ಒನತ್, ಪ್ರಖರ್ ಚತುರ್ವೇದಿ ಹಾಗೂ ಧ್ರುವ ಪ್ರಭಾಕರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ವಿಶಾಲ್ ಒನತ್ 296 ರನ್ಗಳಿಸಿ ಮಿಂಚಿದ್ದರು. ಎರಡನೇ ಪಂದ್ಯದಲ್ಲಿ ವಿಶಾಲ್ 163 ಗಳಿಸಿದ್ದಾರೆ.
ಆದರೆ, ಮತ್ತೊಬ್ಬ ಆರಂಭಿಕ ಆಟಗಾರ ರೋಹನ್ ಯರೇಶೀಮಿ ಎರಡೂ ಪಂದ್ಯಗಳಲ್ಲಿ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ರೋಹನ್ ತವರು ನೆಲದಲ್ಲಿ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.