ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರಾಷ್ಟ್ರಗೀತೆ ವೇಳೆ ಭಾರತದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಭಾವುಕರಾದರು.
ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದ ಸಿರಾಜ್, ರಾಷ್ಟ್ರಗೀತೆ ವೇಳೆಯಲ್ಲಿ ಅತ್ಯಂತ ಭಾವುಕರಾಗಿ ಕಂಡುಬಂದಿದ್ದರಲ್ಲದೆ ಆನಂದ ಭಾಷ್ಪವನ್ನು ಸುರಿಸಿದರು.
ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಳಿಕ ಅತಿ ಮುಖ್ಯವಾದ ಡೇವಿಡ್ ವಾರ್ನರ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೊದಲ ಬ್ರೇಕ್ ನೀಡಿದರು.
ಪಿತೃವಿಯೋಗದ ದುಃಖದಲ್ಲಿರುವ ಭಾರತ ತಂಡದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ರಾಷ್ಟ್ರೀಯ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಟೀಮ್ ಇಂಡಿಯಾ ಜೊತೆಗೆ ಆಸ್ಟ್ರೇಲಿಯಾದಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದರು.
ಅಲ್ಲದೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಡೆಬ್ಯು ಮಾಡಿದ್ದರಲ್ಲದೆ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದಿದ್ದರು. ಈ ಮೂಲಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ಸಿರಾಜ್ ಭಾರತದ ಪರ ಆಡುವುದು ಅಪ್ಪ ಮೊಹಮ್ಮದ್ ಗೌಸ್ ಅವರ ಬಹುದೊಡ್ಡ ಕನಸಾಗಿತ್ತು. ಈಗ ಅಪ್ಪನ ಕನಸನ್ನು ನನಸು ಮಾಡಿರುವ ಸಿರಾಜ್, ಟೀಮ್ ಇಂಡಿಯಾ ಪರ ಆಡುವ ಮೂಲಕ ಗಮನ ಸೆಳೆದಿದ್ದಾರೆ.
Mohammed Siraj definitely enjoyed that wicket. David Warner gone early. #AUSvIND
ಕಳೆದ ನವೆಂಬರ್ ತಿಂಗಳಲ್ಲಿ ಮೊಹಮ್ಮದ್ ಗೌಸ್ ನಿಧನರಾದರು. ಹೈದರಾಬಾದ್ನಲ್ಲಿ ರಿಕ್ಷಾ ಚಾಲಕರಾಗಿದ್ದ ಅವರು ಮೊಹಮ್ಮದ್ ಸಿರಾಜ್ಗೆ ಕ್ರಿಕೆಟ್ ಭವಿಷ್ಯ ರೂಪಿಸಲು ಬಹಳಷ್ಟು ಶ್ರಮಿಸಿದ್ದರು.