ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup 2023: ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ, ಫೈನಲ್‌ಗೆ ಲಗ್ಗೆ

Published 12 ಸೆಪ್ಟೆಂಬರ್ 2023, 17:59 IST
Last Updated 12 ಸೆಪ್ಟೆಂಬರ್ 2023, 17:59 IST
ಅಕ್ಷರ ಗಾತ್ರ

ಕೊಲಂಬೊ: ಎಡಗೈ ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಅವರ ಮೋಡಿಯಿಂದಾಗಿ ಭಾರತ ತಂಡವು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ನಾಲ್ಕರ ಹಂತದ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 41 ರನ್‌ಗಳಿಂದ ಶ್ರೀಲಂಕಾ ತಂಡದ ಎದುರು ಜಯಿಸಿತು. ಆದರೆ ಲಂಕಾ ತಂಡದ ಸ್ಪಿನ್, ಆಲ್‌ರೌಂಡರ್ ದುನಿತ್ ವಲ್ಲಾಳಗೆ ಅವರ ಆಟ ಗಮನ ಸೆಳೆಯಿತು. ಈ ಹಂತದಲ್ಲಿ ಎರಡನೇ ಜಯ ದಾಖಲಿಸಿದ ರೋಹಿತ್ ಶರ್ಮಾ ಬಳಗವು ಫೈನಲ್ ಸನಿಹ ಸಾಗಿದರು.

ತಂಡವು ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ಇಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವನ್ನು ದುನಿತ್ (40ಕ್ಕೆ5) ಕಾಡಿದರು. ಅದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.  ಒಂದು ಹಂತದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ, ನಾಯಕ ರೋಹಿತ್ ಅರ್ಧಶತಕ ಗಳಿಸಿ ಬಲ ತುಂಬಿದರು. ಅದರಿಂದಾಗಿ ತಂಡವು   49.1 ಓವರ್‌ಗಳಲ್ಲಿ 213 ರನ್‌ ಗಳಿಸಿತು. 

ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು 41.3 ಓವರ್‌ಗಳಲ್ಲಿ 172 ರನ್‌ ಗಳಿಸಿತು. ಕುಲದೀಪ್ (43ಕ್ಕೆ4) ಮತ್ತು ಜಡೇಜ (33ಕ್ಕೆ2) ಲಂಕಾ ತಂಡಕ್ಕೆ ಪೆಟ್ಟುಕೊಟ್ಟರು.

ರೋಹಿತ್ ಅರ್ಧಶತಕ: ಸ್ಪಿನ್ನರ್ ಸ್ನೇಹಿ ಪಿಚ್‌ನಲ್ಲಿ ಬ್ಯಾಟಿಂಗ್ ಸುಲಭವಾಗಿರಲಿಲ್ಲ.  ಆದರೂ ರೋಹಿತ್ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ನೀಡಿದರು. ಈ ಜೋಡಿಯು 11 ಓವರ್‌ಗಳಲ್ಲಿ 80 ರನ್‌ ಸೇರಿಸಿತು. ಅದರಲ್ಲಿ ಗಿಲ್ ಅವರದ್ದು 19 ರನ್‌ಗಳಷ್ಟೇ. ಉಳಿದದ್ದು ರೋಹಿತ್ ಕಾಣಿಕೆ. ಅವರು 48 ಎಸೆತಗಳಲ್ಲಿ 53 ರನ್‌ ಗಳಿಸಿದರು. ಅದರಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಇದ್ದವು.

ಐದನೇ ಬೌಲರ್‌ ಆಗಿ ಕಣಕ್ಕಿಳಿದ ದುನಿತ್ ಇನಿಂಗ್ಸ್‌ನ 12ನೇ ಓವರ್‌ನಲ್ಲಿ ಗಿಲ್ ವಿಕೆಟ್ ಉರುಳಿಸಿ, ಜೊತೆಯಾಟ ಮುರಿದರು. 14ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಗಳಿಸಿದ ದುನಿತ್ ಸಂತಸದಿಂದ ನಲಿದರು. ಪಾಕ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಹೊಡೆದಿದ್ದ ಕೊಹ್ಲಿ ಇಲ್ಲಿ ಕೇವಲ 3 ರನ್ ಗಳಿಸಿದರು. 16ನೇ ಓವರ್‌ನಲ್ಲಿ ದುನಿತ್ ಮತ್ತೊಂದು ಪೆಟ್ಟು ಕೊಟ್ಟರು. ಉತ್ತಮ ಲಯದಲ್ಲಿದ್ದ ರೋಹಿತ್ ಅವರ ವಿಕೆಟ್ ಉರುಳಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಇಶಾನ್ ಕಿಶನ್ (33; 61ಎ, 4X1, 6X1) ಹಾಗೂ ಕೆ.ಎಲ್. ರಾಹುಲ್ (39; 44ಎ, 4X2)  ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 63 ರನ್‌ ಸೇರಿಸಿದರು. ಇದರಿಂದಾಗಿ ಇನಿಂಗ್ಸ್‌ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡಿತು. 

ದುನಿತ್ ಮತ್ತೊಮ್ಮೆ ತಮ್ಮ ಕೈಚಳಕ ಮೆರೆದು ಈ ಜೊತೆಯಾಟಕ್ಕೂ ತಡೆಯೊ ಡ್ಡಿದರು. 30ನೇ ಓವರ್‌ನಲ್ಲಿ ಅವರು ತಮ್ಮದೇ ಬೌಲಿಂಗ್‌ನಲ್ಲಿ ರಾಹುಲ್ ಅವರ ಕ್ಯಾಚ್ ತೆಗೆದುಕೊಂಡರು. ಹಾರ್ದಿಕ್ ಪಾಂಡ್ಯ ವಿಕೆಟ್ ಕೂಡ ಅವರ ಪಾಲಾಯಿತು.

ಇನ್ನೊಂದು ಬದಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಆಫ್‌ಬ್ರೇಕ್ ಬೌಲರ್ ಅಸಲಂಕಾ ಕೂಡ ಮಿಂಚಿದರು. ಅವರು ಇಶಾನ್,  ಬೂಮ್ರಾ ಮತ್ತು ಕುಲದೀಪ್ ಯಾದವ್ ವಿಕೆಟ್ ಗಳಿಸಿದರು.

ಭಾರತವು 197 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿದ್ದ ಸಂದರ್ಭದಲ್ಲಿ ಮಳೆ ಬಂದ ಕಾರಣ ಸ್ವಲ್ಪ ಹೊತ್ತು ಪಂದ್ಯ ಸ್ಥಗಿತವಾಗಿತ್ತು. ಮಳೆ ನಿಂತ ನಂತರ ಆಟ ಆರಂಭವಾಯಿತು. ಅಕ್ಷರ್ ಪಟೇಲ್ ಒಂದು ಸಿಕ್ಸರ್‌ ಸಹಿತ 26 ರನ್‌ ಗಳಿಸಿದರು. 

ರೋಹಿತ್ ಹತ್ತು ಸಾವಿರ ರನ್

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳ ಗಡಿ ದಾಟಿದರು.

ಈ ಸಾಧನೆ ಮಾಡಿದ ಭಾರತದ ಆರನೇ ಹಾಗೂ ಒಟ್ಟಾರೆ 15ನೇ ಬ್ಯಾಟರ್‌ ಆದರು. ಲಂಕಾ ಎದುರಿನ ಪಂದ್ಯದಲ್ಲಿ ಕಸುನ್ ರಜಿತಾ ಎಸೆತವನ್ನು ಸಿಕ್ಸರ್‌ಗೆತ್ತಿದಾಗ ಅವರು ಹತ್ತು ಸಾವಿರ ರನ್‌ ಮೈಲುಗಲ್ಲು ದಾಟಿದರು.

ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರಸಿಂಗ್ ಧೋನಿ ಅವರ ಸಾಲಿಗೆ ರೋಹಿತ್ ಸೇರಿದರು. 36 ವರ್ಷದ ರೋಹಿತ್ ಇದುವರೆಗೆ 248 ಪಂದ್ಯಗಳಲ್ಲಿ ಆಡಿದ್ದಾರೆ. 30 ಶತಕ, ಮೂರು ದ್ವಿಶತಕ ಹಾಗೂ 51 ಅರ್ಧಶತಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT