ನವದೆಹಲಿ/ಧರ್ಮಶಾಲಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಏಕದಿನ ಕ್ರಿಕೆಟ್ ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳ ವೇಳೆ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶ ನಿರ್ಬಂಧಿಸಲಾಗಿದೆ.
ಎರಡನೇ ಪಂದ್ಯ ಮಾರ್ಚ್ 15ರಂದು ಲಖನೌದಲ್ಲಿ ಮತ್ತು ಮೂರನೇ ಪಂದ್ಯ 18ರಂದು ಕೋಲ್ಕತ್ತದಲ್ಲಿ ನಿಗದಿಯಾಗಿವೆ. ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಈ ಸಲದ ಐಪಿಎಲ್ ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ಆಯೋಜಿಸುವ ಸಾಧ್ಯತೆ ಇದೆ.
ಶನಿವಾರ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನವಾಗಲಿದೆ.
*ದೇಶದಲ್ಲಿ ಕೋವಿಡ್–19 ದೃಢಪಟ್ಟ 14 ಹೊಸ ಪ್ರಕರಣಗಳು ಗುರುವಾರ ವರದಿಯಾಗಿವೆ. ಹೀಗಾಗಿ ಪೀಡಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮಹಾರಾಷ್ಟ್ರದ ಒಂಬತ್ತು, ದೆಹಲಿ, ಲಡಾಖ್, ಉತ್ತರ ಪ್ರದೇಶ ಹಾಗೂ ಆಂಧ್ರ ಪ್ರದೇಶದಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ
*ಚೀನಾ, ಅಮೆರಿಕ, ಇಟಲಿ, ದಕ್ಷಿಣ ಕೊರಿಯಾ ಸೇರಿ 15 ದೇಶಗಳ ಪ್ರವಾಸಿಗರು ದೆಹಲಿ ವಿಮಾನ ನಿಲ್ದಾಣದ ಡ್ಯೂಟಿ–ಫ್ರೀ ಮಳಿಗೆಗಳಿಗೆ ಹೋಗುವುದನ್ನು ಭಾರತೀಯ ಕಸ್ಟಮ್ಸ್ ನಿಷೇಧಿಸಿದೆ
*ರಾಜತಾಂತ್ರಿಕ, ಉದ್ಯೋಗದಂತಹ ವೀಸಾಗಳನ್ನು ಬಿಟ್ಟು ಉಳಿದೆಲ್ಲ ವೀಸಾಗಳನ್ನು ಕೇಂದ್ರ ಸರ್ಕಾರವು ಅಮಾನತು ಮಾಡಿದೆ. ಏಪ್ರಿಲ್ 15ರವರೆಗೆ ಇದು ಜಾರಿಯಲ್ಲಿರುತ್ತದೆ. ಭಾರತಕ್ಕೆ ಈಗಾಗಲೇ ಬಂದಿರುವ ವಿದೇಶಿಯರ ವೀಸಾಗಳಿಗೆ ಮಾನ್ಯತೆ ಇದೆ. ಅನಗತ್ಯ ವಿದೇಶ ಪ್ರವಾಸ ಕೈಬಿಡುವಂತೆ ಭಾರತೀಯರಿಗೆ ಸರ್ಕಾರವು ಸಲಹೆ ನೀಡಿದೆ
*ಸಾಗರೋತ್ತರ ಭಾರತೀಯ ಪೌರರಿಗೆ ನೀಡಲಾಗಿರುವ ವೀಸಾಮುಕ್ತ ಪ್ರಯಾಣ ಸೌಲಭ್ಯವನ್ನೂ ಏ. 15ರವರೆಗೆ ಅಮಾನತಿನಲ್ಲಿ ಇಡಲಾಗಿದೆ. ಅತ್ಯಂತ ಅಗತ್ಯ ಕೆಲಸಗಳಿಗಾಗಿ ವಿದೇಶಕ್ಕೆ ಹೋದ ಭಾರತೀಯರು ಹಿಂದಿರುಗಿದಾಗ ಅವರನ್ನು 14 ದಿನ ಪ್ರತ್ಯೇಕಿಸಲಾದ ನಿಗಾ ವಿಭಾಗದಲ್ಲಿ ಇರಿಸಲಾಗುವುದು
*ಕೇಂದ್ರದ ಸಚಿವರು ವಿದೇಶ ಪ್ರವಾಸಗಳನ್ನು ಕೈಗೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.