ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಮೌಲ್ಯ ಜವಾಬ್ದಾರಿ ಹೆಚ್ಚಿಸಿದೆ: ಪವನ್ ದೇಶಪಾಂಡೆ

ಶಿವಮೊಗ್ಗ ಲಯನ್ಸ್ ತಂಡದ ಪವನ್ ದೇಶಪಾಂಡೆ ಮನದ ಮಾತು
Last Updated 28 ಜುಲೈ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ಆಡುವುದೆಂದರೆ ಬಹಳ ಖುಷಿಯ ಸಂಗತಿ. ಏಕೆಂದರೆ ನಾನು ಹುಟ್ಟಿ, ಬೆಳೆದ ಊರಿನ ಕ್ರೀಡಾಂಗಣದಲ್ಲಿ ಆಡುವ ಅವಕಾಶ ಸಿಗುತ್ತದೆ. ಪ್ರತಿ ವರ್ಷವೂ ಇಂತಹದೊಂದು ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿರುತ್ತೇನೆ. ಈ ಬಾರಿ ಇನ್ನೂ ವಿಶೇಷವೆಂದರೆ ನನಗೆ ಈ ಬಾರಿ ಹೆಚ್ಚು ಮೌಲ್ಯದ ಮೊತ್ತ ಲಭಿಸಿದೆ. ಇದು ಅನಿರೀಕ್ಷಿತ ಮತ್ತು ಆನಂದವೂ ಹೌದು’–

ಶನಿವಾರ ಕೆಪಿಎಲ್ ಟೂರ್ನಿಯ ಎಂಟನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ₹ 7.30 ಲಕ್ಷ ಗಳಿಸಿದ ಆಲ್‌ರೌಂಡರ್ ಪವನ್ ದೇಶಪಾಂಡೆ ಅವರ ಸಂತಸದ ನುಡಿಗಳು ಇವು. ಹುಬ್ಬಳ್ಳಿ–ಧಾರವಾಡ ಅವಳಿನಗರದ ಮಧ್ಯದಲ್ಲಿರುವ ನವನಗರದ ಹುಡುಗ, ಬಾಲ್ಯದಲ್ಲಿ ಪವನ್ ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಗಮನಿಸಿದ್ದ ತಂದೆ ಉದಯ ದೇಶಪಾಂಡೆ ಪ್ರೋತ್ಸಾಹದ ನೀರೆರೆದರು. ಧಾರವಾಡದ ಹಿರಿಯ ಕೋಚ್ ವಸಂತ್ ಮುರ್ಡೇಶ್ವರ್ ಅವರ ಅಕಾಡೆಮಿಗೆ ಸೇರಿಸಿದರು. ಅಲ್ಲಿಂದ ಪವನ್ ಕ್ರಿಕೆಟ್‌ ಪಯಣ ಆರಂಭವಾಯಿತು.

ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬುವ ಎಡಗೈ ಬ್ಯಾಟ್ಸ್‌ಮನ್ ಪವನ್ ರಾಜ್ಯ ರಣಜಿ ತಂಡದಲ್ಲಿ ಆಡಿದ್ದಾರೆ. 2016ರಲ್ಲಿ ಮೊಹಾಲಿಯಲ್ಲಿ ಮಹಾರಾಷ್ಟ್ರದ ಎದುರಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಅವರು 70 ರನ್ ಹೊಡೆದಿದ್ದರು. ನಿಗದಿಯ ಓವರ್‌ಗಳಲ್ಲಿ ಮತ್ತು ಕೆಪಿಎಲ್ ಟೂರ್ನಿಗಳಲ್ಲಿ ಸತತವಾಗಿ ತಮ್ಮ ಭುಜಬಲ ಮೆರೆಯುತ್ತಿದ್ದಾರೆ.

ಎರಡು ವರ್ಷದ ಹಿಂದೆ ಐಪಿಎಲ್‌ ಟೂರ್ನಿಯ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿಯೂ ಸ್ಥಾನ ಪಡೆದಿದ್ದರು. ಹೋದ ಬಾರಿ ಕೆಪಿಎಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಪವನ್ ಪ್ರತಿನಿಧಿಸಿದ್ದರು. ಏಳು ‍ಪಂದ್ಯಗಳಲ್ಲಿ 205 ರನ್‌ಗಳನ್ನು ಪೇರಿಸಿದ್ದರು. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದರು.

ಈ ಸಲ ಶಿವಮೊಗ್ಗ ಲಯನ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯೂ ಆಗಿರುವ ಪವನ್ ರಾಜ್ಯ ತಂಡದ ಭರವಸೆಯ ಆಟಗಾರರಾಗಿದ್ದಾರೆ. ‌ಕೆಪಿಎಲ್ ಆಯ್ಕೆಯ ಕುರಿತು 29 ವರ್ಷದ ಪವನ್ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನ ಇಲ್ಲಿದೆ.

* ಅತಿ ಹೆಚ್ಚು ಮೌಲ್ಯದೊಂದಿಗೆ ಆಯ್ಕೆಯಾಗಲು ಕಾರಣವಾದ ಅಂಶಗಳು ಯಾವುವು?
ಹೋದ ಎರಡು, ಮೂರು ವರ್ಷಗಳಿಂದ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದೇನೆ. ಯಾವುದೇ ಮಾದರಿಯ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಪಾತ್ರ ದೊಡ್ಡದು. ಅಂತಿಮ ಹಂತದ ಓವರ್‌ಗಳಲ್ಲಿ ರನ್‌ ಗಳಿಕೆಯ ಜೊತೆಗೆ ವಿಕೆಟ್‌ಗಳ ಉಳಿಕೆಯೂ ಅಗತ್ಯವಾಗಿರುತ್ತದೆ. ಅವೆರಡನ್ನೂ ನಿಭಾಯಿಸುವ ಕಲೆಯನ್ನು ರೂಢಿಸಿಕೊಂಡಿದ್ದೇನೆ. ದೀರ್ಘ ಮಾದರಿ, ಏಕದಿನ ಮತ್ತು ಟ್ವೆಂಟಿ–20 ಮಾದರಿಗಳಿಗೆ ತಕ್ಕಂತೆ ಆಡುವ ಅನುಭವವೂ ಇದೆ. ಆದ್ದರಿಂದ ಶಿವಮೊಗ್ಗ ಫ್ರ್ಯಾಂಚೈಸ್ ನನಗೆ ಆದ್ಯತೆ ನೀಡಿರಬಹುದು. ಬಿಡ್‌ನಲ್ಲಿ ಇಷ್ಟು ದೊಡ್ಡ ಮೊತ್ತ ಸಿಗುವುದೆಂಬ ನಿರೀಕ್ಷೆ ಇರಲಿಲ್ಲ. ಖುಷಿಯ ಜೊತೆಗೆ ಹೊಣೆಯೂ ದೊಡ್ಡದಿದೆ. ಫ್ರ್ಯಾಂಚೈಸ್‌ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇನೆ.

* ಕೆಪಿಎಲ್ ಟೂರ್ನಿಯೂ ಕ್ರಿಕೆಟಿಗರ ಭವಿಷ್ಯಕ್ಕೆ ಯಾವ ರೀತಿಯಲ್ಲಿ ಉಪಯುಕ್ತವಾಗುತ್ತದೆ?
ಈ ಟೂರ್ನಿಯು ಉದಯೋನ್ಮುಖ ಆಟಗಾರರಿಗೆ ಬಹಳ ಉತ್ತಮವಾದ ವೇದಿಕೆ. ಗ್ರಾಮಾಂತರ ಮಟ್ಟದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನಂತಹ ದೊಡ್ಡ ವಾಹಿನಿಯಲ್ಲಿ ಪಂದ್ಯಗಳು ನೇರಪ್ರಸಾರವಾಗುತ್ತವೆ. ಬಹಳಷ್ಟು ಪ್ರಮಾಣದಲ್ಲಿ ವೀಕ್ಷಕರು ಇರುತ್ತಾರೆ. ರಾಷ್ಟ್ರೀಯ ಮಟ್ಟದ ಕ್ರಿಕೆಟಿಗರೂ ಗಮನಿಸುತ್ತಾರೆ. ಈ ಟೂರ್ನಿಯಲ್ಲಿ ಉತ್ತಮವಾಗಿ ಆಡಿದರೆ ಐಪಿಎಲ್ ಸೇರಿದಂತೆ ಬೇರೆ ಬೇರೆ ಟೂರ್ನಿಗಳಲ್ಲಿ ಅವಕಾಶಗಳು ಸಿಗುವ ಸಾಧ್ಯತೆ ಹೆಚ್ಚಿದೆ. ಅದಲ್ಲದೇ ಈ ಟೂರ್ನಿಯಲ್ಲಿ ಆಡಿದ ಅನುಭವ ಕೂಡ ನಮ್ಮ ಬೆಳವಣಿಗೆಗೆ ನೆರವಾಗುತ್ತದೆ.

* ಬೆಂಗಳೂರಿನಿಂದ ಹೊರಗೆ ಮೈಸೂರು, ಹುಬ್ಬಳ್ಳಿ ನಗರಗಳಲ್ಲಿ ಕೆಪಿಎಲ್ ಪಂದ್ಯಗಳು ಆಯೋಜನೆಯಾಗುತ್ತಿವೆ. ಇದರಿಂದ ಆಟಗಾರರಿಗೆ ಯಾವ ರೀತಿಯ ಅನುಕೂಲಗಳಾಗುತ್ತವೆ?
ನಾನು 11ನೇ ವಯಸ್ಸಿನಲ್ಲಿ ಧಾರವಾಡದಲ್ಲಿ ಕ್ರಿಕೆಟ್ ಕಲಿಯಲು ಆರಂಭಿಸಿದೆ. ವಯೋಮಿತಿಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವಾಗ ಇಲ್ಲಿ ಟರ್ಫ್‌ ವಿಕೆಟ್‌ಗಳು ಇರಲೇ ಇಲ್ಲ. ಈ ಭಾಗದಲ್ಲಿ ಮ್ಯಾಟಿಂಗ್ ಪಿಚ್‌ ಮೇಲೆ ಆಡುತ್ತಿದ್ದೇವು. ರಾಜ್ಯ ತಂಡಕ್ಕೆ ಆಯ್ಕೆಯಾಗಿ ಬೆಂಗಳೂರಿಗೆ ಆಡಲು ಹೋದಾಗಲೇ ಟರ್ಫ್‌ ಪಿಚ್‌ಗಳನ್ನು ನೋಡಿದ್ದು. ಆದರೆ, ಈಗ ಸ್ಥಿತಿ ಹಾಗಿಲ್ಲ. ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಶಿವಮೊಗ್ಗ ಸೇರಿದಂತೆ ಹಲವು ಕಡೆ ಕೆಎಸ್‌ಸಿಎಯು ಟರ್ಫ್‌ ಪಿಚ್‌ಗಳನ್ನು ಅಭಿವೃದ್ಧಿಪಡಿಸಿದೆ. ಇದರಿಂದಾಗಿ ಪ್ರಮುಖ ಪಂದ್ಯಗಳು ನಡೆಯುತ್ತಿವೆ. ನನ್ನಂತಹ ಆಟಗಾರರಿಗೆ ತವರಿನ ಜನರ ಮುಂದೆ ಆಡುವ ಅವಕಾಶ ಸಿಗುತ್ತವೆ. ಬೇರೆ ಬೇರೆ ತಂಡಗಳ ಪ್ರಮುಖ ಆಟಗಾರರ ಆಟ ನೋಡುವ ಅವಕಾಶವು ಇಲ್ಲಿಯವರಿಗೆ ಸಿಗುತ್ತದೆ.

*
ಪವನ್ ದೇಶಪಾಂಡೆ ಉತ್ತಮ ಆಟಗಾರ. ₹ 5.5 ಲಕ್ಷದವರೆಗೆ ಬಿಡ್ ಮಾಡುವ ನಿರೀಕ್ಷೆ ಇತ್ತು. ಆದರೆ ಅವರೊಬ್ಬ ಪ್ರತಿಭಾನ್ವಿತ ಆಟಗಾರ ಆದ್ದರಿಂದ ಮೌಲ್ಯ ಏರಿತು. ನಾವು ಅವರನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು ಖುಷಿಯಾಗಿದೆ. ಒಟ್ಟಾರೆ ಈ ಸಲ ನಾವು ಆಯ್ಕೆ ಮಾಡಿಕೊಂಡಿರುವ ತಂಡವು ಅತ್ಯಂತ ಸಮತೋಲನದಿಂದ ಕೂಡಿದೆ.
– ಆರ್. ಕುಮಾರ್, ಶಿವಮೊಗ್ಗ ಲಯನ್ಸ್‌ ತಂಡದ ಮಾಲೀಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT