ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ತಂಡಕ್ಕೆ ಮರಳಿದ ರೋಹಿತ್, ಕೊಹ್ಲಿ: ಸೂಕ್ತ ನಿರ್ಧಾರವೇ, ಹಿಂಜರಿಕೆಯೇ...?

Published 8 ಜನವರಿ 2024, 20:41 IST
Last Updated 8 ಜನವರಿ 2024, 20:41 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ಒಂದು ಹೆಜ್ಜೆ ಮುಂದಿಡುವಾಗ, ಭಾರತದ ಕ್ರಿಕೆಟ್‌ ಆಯ್ಕೆಗಾರರು ಎರಡು ಹೆಜ್ಜೆ ಹಿಂದೆಯಿಟ್ಟು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಕಾಣುತ್ತಿದೆ. ಅಫ್ಗಾನಿಸ್ತಾನ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಗೆ ಅನುಭವಿಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಅವಕಾಶ ಮಾಡಿರುವುದು ಇತ್ತೀಚಿನ ಒಂದು ನಿದರ್ಶನ.

2022ರ ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಮುಖಭಂಗ ಅನುಭವಿಸಿದ ನಂತರ ಸುಮಾರು 14 ತಿಂಗಳ ಕಾಲ ಇವರಿಬ್ಬರು ತಂಡದಿಂದ ಹೊರಗಿದ್ದರು. ನಂತರ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ವಹಿಸಲಾಯಿತು. ಅವರು ಗಾಯಾಳಾದಾಗ, ಸೂರ್ಯಕುಮಾರ್ ಯಾದವ್ ಅವರಿಗೆ (ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು ಹೊರಗಡೆ ದಕ್ಷಿಣ ಆಫ್ರಿಕಾ ವಿರುದ್ಧ) ತಂಡದ ನೇತೃತ್ವ ವಹಿಸಲಾಯಿತು.

ಈಗ ಹಾರ್ದಿಕ್ ಮತ್ತು ಸೂರ್ಯ ಅವರಿಬ್ಬರೂ ಗಾಯಾಳಾಗಿ ತಂಡಕ್ಕೆ ಲಭ್ಯರಿಲ್ಲ. ಋತುರಾಜ್ ಗಾಯಕವಾಡ ಅವರಿಗೆ ಬೆರಳಿನ ಗಾಯವಾಗಿದೆ. ಆದರೆ ಇತರ ಆಟಗಾರರಿದ್ದರೂ, ಈ ಇಬ್ಬರು ಏಕದಿನ ಮಾದರಿಯ ಅನುಭವಿಗಳನ್ನು ತಂಡಕ್ಕೆ ಮರಳಿ ಕರೆತರಲಾಗಿದೆ. ರೋಹಿತ್ ಮತ್ತು ಕೊಹ್ಲಿ ಅವರಿಗೂ ಕೊನೆಯದಾಗಿ ಆಡಬೇಕೆಂಬ ಬಯಕೆಯಿರುವುದು ಸಹಜ. ಅಜಿತ್‌ ಅಗರಕರ್ ನೇತೃತ್ವದ ಆಯ್ಕೆ ಸಮಿತಿ ಅವರಿಗೆ ಅವಕಾಶ ನೀಡಿದೆ. ಈ ಸರಣಿಯಲ್ಲಿ ಮತ್ತು ಐಪಿಎಲ್‌ನಲ್ಲಿ ಗಳಿಸುವ ಯಶಸ್ಸಿನ ಮೇಲೆ ವಿಶ್ವಕಪ್‌ ತಂಡಕ್ಕೆ ಅವರ ಆಯ್ಕೆ ಅವಲಂಬಿಸಿದೆ. ಆದರೆ ಈ ಆಯ್ಕೆಯಿಂದ ಅವರಿಗೆ ಬಾಗಿಲು ಮುಚ್ಚಿಲ್ಲ ಎಂಬ ಸಂದೇಶವಂತೂ ರವಾನೆಯಾಗಿದೆ.

ಕಳೆದ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಸೋಲಿನ ನಂತರ, ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಖರಿ ಬದಲಾಗಬೇಕೆಂದು ನಾಯಕ ರೋಹಿತ್‌ ಶರ್ಮಾ ಸ್ಪಷ್ಟಮಾತುಗಳಲ್ಲಿ ಹೇಳಿದ್ದರು. ನಿರ್ಭೀತ ಆಟ ಅಗತ್ಯವಿರುವ ಮಾದರಿಯಲ್ಲಿ ಭಾರತ ಸಾಂ‍ಪ್ರದಾಯಿಕ ರೀತಿಯ ಆಡುತ್ತಿದೆ ಎಂಬುದು ಅವರ ಇಂಗಿತವಾಗಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲೂ ಆಕ್ರಮಣಕಾರಿ ಆಟ ಕಾಣುತ್ತಿರುವಾಗ ಭಾರತ ಟಿ20 ಮಾದರಿಯಲ್ಲಿ ಇತರ ತಂಡಗಳಿಗಿಂತ ಹಿಂದುಳಿದಿದೆ ಎಂಬ ಭಾವನೆ ಮೂಡಿತ್ತು. ಆದರೆ ರೋಹಿತ್‌ ಏಕದಿನ ವಿಶ್ವಕಪ್‌ನಲ್ಲಿ 126 ರನ್ ಸರಾಸರಿಯಲ್ಲಿ ರನ್‌ ಸಂಗ್ರಹಿಸಿದ್ದರು. ಮ್ಯಾಕ್ಸ್‌ವೆಲ್‌ (150.37), ಕ್ಲಾಸೆನ್ (133) ಮತ್ತು ಟ್ರಾವಿಸ್‌ ಹೆಡ್‌ (127) ಮಾತ್ರ ಅವರಿಗಿಂತ ಮುಂದಿದ್ದರು. ಅವರು ಟಿ20ಗೂ ಸಲ್ಲುವ ಆಟಗಾರ ಎಂಬ ಭಾವನೆ ಮೂಡಿತು. ಆದರೆ ಕೊಹ್ಲಿ ವಿಷಯದಲ್ಲಿ ಇದನ್ನು ಒಪ್ಪುವಂತಿದೆಯೇ?

ವಿಶ್ವಕಪ್‌ನಲ್ಲಿ ರೋಹಿತ್ ಅವರ ಬಿರುಸಿನ ಆಟದಿಂದ ಕೊಹ್ಲಿ ಅವರಿಗೆ ಆಟಕ್ಕೆ ಹೊಂದಿಕೊಳ್ಳಲು ಅವಕಾಶವಿರುತಿತ್ತು. ಆದರೆ ಪ್ರಸ್ತುತ ಟಿ20 ಆಟದಲ್ಲಿ ಇಂಥ ಅವಕಾಶ ಕಡಿಮೆ. ಚುಟುಕು ಕ್ರಿಕೆಟ್ ಮಾದರಿಯಲ್ಲಿ ಅವರ ಅಂಕಿಅಂಶ ಉತ್ತಮವಾಗಿದೆ. ಆದರೆ ಹೆಚ್ಚಿನ ರನ್‌ಗಳು ಈಗಿನ ಆಟದ ರೀತಿ ಬಂದಿಲ್ಲ. ಮ್ಯಾಕ್ಸ್‌ವೆಲ್‌, ಸೂರ್ಯಕುಮಾರ್ ರೀತಿ ಅವರು ‘ಪವರ್‌ ಹಿಟ್ಟರ್‌’ ಅಲ್ಲ. ಕೆರಿಬಿಯನ್‌ನ ನಿಧಾನಗತಿಯ ಪಿಚ್‌ಗಳೂ ಅವರ ಆಟಕ್ಕೆ ಹೊಂದುವುದೂ ಸುಲಭವಲ್ಲ.

ಭಾರತ ಟಿ20 ವಿಶ್ವಕಪ್‌ ಗೆಲ್ಲಬಹುದು ಅಥವಾ ಗೆಲ್ಲದಿರಬಹುದು. ಆದರೆ ಆಯ್ಕೆಗಾರರ ಹೆಜ್ಜೆ ಹಿಂಜರಿಯಕೆಯದ್ದೇ ಆಗಿದೆ. ಸೂಪರ್‌ಸ್ಟಾರ್‌ ಆಟಗಾರರಿಲ್ಲದೇ ತಂಡ ರೂಪಿಸುವುದು ಕಷ್ಟ ಎಂಬ ಮನೋಭಾವ ಇರಬಹುದು. ಆದರೆ ಐಪಿಎಲ್‌, ವಾಣಿಜ್ಯ ಹಿತಾಸಕ್ತಿ ಗಣನೆಗೆ ತೆಗೆದುಕೊಂಡರೆ, ಈ ತಾರಾ ವರ್ಚಸ್ಸಿನ ಆಟಗಾರರನ್ನು ಕೈಬಿಡುವ ನಿರ್ಧಾರವೂ ಸುಲಭವೂ ಅಲ್ಲ ಎಂಬುದು ಆಯ್ಕೆಗಾರರಿಗೆ ಗೊತ್ತಿಲ್ಲದ ವಿಷಯವೇನಲ್ಲ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT