ನವದೆಹಲಿ:ವಿರಾಟ್ ಕೊಹ್ಲಿಯು ಐಸಿಸಿಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿಲ್ಲ ಎಂದುಹೇಳುತ್ತಿದ್ದೀರಿ. ಆದರೆ, ಆತಈವರೆಗೆ ಒಂದೇಒಂದು ಐಪಿಎಲ್ ಟ್ರೋಫಿಯನ್ನೂ ಗೆದ್ದಿಲ್ಲ. ಆತನಿಗೆ ಇನ್ನಷ್ಟು ಸಮಯ ನೀಡಬೇಕಿದೆ ಎಂದುಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೋಲು ಕಂಡ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಮೂಡಿವೆ. ಕೆಲ ಹಿರಿಯ ಕ್ರಿಕೆಟಿಗರು ಮತ್ತು ಕ್ರಿಕೆಟ್ ವಿಶ್ಲೇಷಕರು ಟೀಂ ಇಂಡಿಯಾದ ನಾಯಕತ್ವ ಬದಲಾವಣೆಗೆ ಸಲಹೆ ನೀಡಿದ್ದಾರೆ.
ಭಾರತ ತಂಡವು ವಿರಾಟ್ ನಾಯಕತ್ವದಲ್ಲಿ ಸಾಕಷ್ಟು ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದೆಯಾದರೂ, ಐಸಿಸಿ ಟ್ರೋಫಿಗಳನ್ನು ಗೆಲ್ಲಲು ವಿಫಲವಾಗಿದೆ.ಹೀಗಾಗಿ ಕಿಂಗ್ ಕೊಹ್ಲಿಯ ನಾಯಕತ್ವವನ್ನು ಪ್ರಶ್ನಿಸಲಾಗುತ್ತಿದೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಆರ್ಸಿಬಿಸಹಈವರೆಗೆ ಒಮ್ಮೆಯೂ ಕಪ್ ಗೆದ್ದಿಲ್ಲ.
ಇದನ್ನೂ ಓದಿ:ಆಳ-ಅಗಲ | ವಿರಾಟ್ ಕೊಹ್ಲಿ ಪಟ್ಟಕ್ಕೆ ಸಂಚಕಾರ?
ಕ್ರೀಡಾವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರೈನಾ,ʼಆತ (ಕೊಹ್ಲಿ) ನಂ. 1 ನಾಯಕನಾಗಿದ್ದಾರೆ ಎಂದು ನನಗನಿಸುತ್ತದೆ. ಆತ ಸಾಕಷ್ಟು ಸಾಧಿಸಿರುವುದನ್ನುಅಂಕಿ ಅಂಶಗಳೇ ಸಾಬೀತು ಮಾಡಿವೆ. ನನ್ನ ಪ್ರಕಾರ ಕೊಹ್ಲಿ ವಿಶ್ವದ ನಂ. 1 ಬ್ಯಾಟ್ಸ್ಮನ್. ನೀವು ಐಸಿಸಿ ಟೂರ್ನಿಗಳ ಬಗ್ಗೆ ಮಾತನಾಡುತ್ತಿದ್ದೀರಿʼ ಆದರೆ, ಆತ ಈವರೆಗೆ ಒಂದೇಒಂದು ಐಪಿಎಲ್ ಟ್ರೋಫಿಯನ್ನೂ ಗೆದ್ದಿಲ್ಲ. ಆತನಿಗೆ ಇನ್ನಷ್ಟು ಸಮಯ ನೀಡಬೇಕಿದೆ ಎಂದು ನನಗನಿಸುತ್ತದೆ. ಒಂದರ ಹಿಂದೊಂದು ಎಂಬಂತೆ ಎರಡುಮೂರು ವಿಶ್ವಕಪ್ ಟೂರ್ನಿಗಳು- ಎರಡು ಟಿ20 ವಿಶ್ವಕಪ್ ಮತ್ತು ಬಳಿಕ ಏಕದಿನ ವಿಶ್ವಕಪ್ ನಡೆಯುತ್ತಿವೆ. ಫೈನಲ್ ಪ್ರವೇಶಿಸುವುದು ಸುಲಭದ ವಿಚಾರವಲ್ಲ. ಕೆಲವೊಮ್ಮೆ ನೀವು ಕೆಲವೊಂದನ್ನು ಕಳೆದುಕೊಳ್ಳಬೇಕಾಗುತ್ತದೆʼ ಎಂದು ಹೇಳಿದ್ದಾರೆ.
ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಎಂಟು ವಿಕೆಟ್ ಅಂತರದ ಸೋಲು ಕಾಣಲು ಬ್ಯಾಟ್ಸ್ಮನ್ಗಳ ವೈಫಲ್ಯವೇ ಕಾರಣ ಎಂದಿರುವರೈನಾ, ಕೊಹ್ಲಿ ತಮ್ಮನ್ನು ತಾವು ಸಾಬೀತು ಮಾಡಲು ಇನ್ನಷ್ಟು ಸಮಯ ನೀಡಬೇಕಿದೆ ಎಂದು ಕೋರಿದ್ದಾರೆ.
ʼವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಒಂದು ಉದಾಹರಣೆ. ಜನರುಪಂದ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಆದರೆ, ಬ್ಯಾಟಿಂಗ್ನಲ್ಲಿ ಕೊರತೆ ಇತ್ತು ಎಂದು ನನಗನಿಸುತ್ತದೆ. ದೊಡ್ಡ ಬ್ಯಾಟ್ಸ್ಮನ್ಗಳು ಜೊತೆಯಾಟ ಬೆಳೆಸಬೇಕಾಗುತ್ತದೆ ಮತ್ತು ಜವಾಬ್ದಾರಿ ಹೊರಬೇಕಾಗುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ʼನೋಡಿ, ನಾವು ಚೋಕರ್ಸ್ಗಳಲ್ಲ. ಏಕೆಂದರೆ1983ರಲ್ಲಿ ಏಕದಿನ ವಿಶ್ವಕಪ್, 2007ರಲ್ಲಿ ಟಿ20ವಿಶ್ವಕಪ್ ಮತ್ತು 2011ರಲ್ಲಿ ಮತ್ತೆ ಏಕದಿನ ವಿಶ್ವಕಪ್ ಗೆದ್ದಿದ್ದೇವೆ. ಆಟಗಾರರು ಕಠಿಣ ಅಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮೂರು ವಿಶ್ವಕಪ್ಗಳು ಸಮೀಪಿಸುತ್ತಿರುವ ಹೊತ್ತಿನಲ್ಲಿ ಯಾರಾದರೂಅವರನ್ನು (ಕೊಹ್ಲಿ ಪಡೆಯನ್ನು)ಚೋಕರ್ಸ್ ಎನ್ನುತ್ತಾರೆ ಎಂದು ನಾನು ಭಾವಿಸುವುದಿಲ್ಲ. ನಾವು ಕೊಹ್ಲಿಗೆ ಮತ್ತಷ್ಟು ಸಮಯ ನೀಡಬೇಕಿದೆ. ಹೊಸ ಶೈಲಿಯ ನಾಯಕತ್ವವನ್ನು ಗೌರವಿಸಬೇಕಿದೆ. ಆದಾಗ್ಯೂ, ಮುಂದಿನ 12ರಿಂದ 16 ತಿಂಗಳುಗಳಲ್ಲಿ ಭಾರತವು ಐಸಿಸಿ ಟ್ರೋಫಿ ಗೆಲ್ಲಲಿದೆ ಎಂಬ ಭರವಸೆಯಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ನಲ್ಲಿನಡೆದ 2019ರ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಪಡೆ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ, ಆ ಪಂದ್ಯದಲ್ಲಿಯೂ ನ್ಯೂಜಿಲೆಂಡ್ ತಂಡದೆದುರು ಸೋಲು ಅನುಭವಿಸಿತ್ತು.
ಇದನ್ನೂ ಓದಿ:ಕೂಲ್ ಕ್ಯಾಪ್ಟನ್ ಕೇನ್ ಹೋರಾಟದ ಕೆಚ್ಚು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.