ಅಹಮದಾಬಾದ್: ವಿರಾಟ್ ಕೊಹ್ಲಿ ಅವರು ಅತ್ಯಂತ ಯಶಸ್ವಿ ನಾಯಕರಾಗಿ ಕಾಣಿಸುತ್ತಿದ್ದಾರೆ. ಆದರೆ ಅವರ ಯಶಸ್ಸಿಗೆ ಅನುಭವಿ ಆಟಗಾರ ಮಹೇಂದ್ರಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರು ತಂಡದಲ್ಲಿ ಇರುವುದೇ ಕಾರಣ ಎಂದು ಹಿರಿಯ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
ಶನಿವಾರ ಇಲ್ಲಿಯ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
‘ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿದ್ದರು. ಆದರೂ ಅವರು ಸಾಗಬೇಕಾದ ಹಾದಿ ಇನ್ನೂ ದೂರ ಇದೆ. ಧೋನಿ ಅವರು ಭಾರತವು ಕಂಡ ಶ್ರೇಷ್ಠ ನಾಯಕರು. ಐಪಿಎಲ್ನಲ್ಲಿ ರೋಹಿತ್ ಶರ್ಮಾ ಯಶಸ್ವಿ ನಾಯಕ. ಇಬ್ಬರೂ ಪ್ರತಿಭಾವಂತರು. ಅವರ ಇರುವಿಕೆಯೇ ಕೊಹ್ಲಿ ಯಶಸ್ಸಿಗೆ ಕಾರಣವಾಗಿದೆ’ ಎಂದರು.
‘ಕೆ.ಎಲ್. ರಾಹುಲ್ ಅವರಿಗೆ ಬಹಳಷ್ಟು ಅವಕಾಶಗಳನ್ನು ನೀಡಿದ್ದಾರೆ. ಮುಂಬರುವ ಟೆಸ್ಟ್ ಸರಣಿಯಲ್ಲಿ ರೋಹಿತ್ ಅವರಿಗೆ ಇನಿಂಗ್ಸ್ ಆರಂಭಿಸುವ ಹೊಣೆ ನೀಡಿರುವುದು ಉತ್ತಮ ನಿರ್ಧಾರ’ ಎಂದರು.