ಅಬುಧಾಬಿ: ಮುಂಬರುವ ಟ್ವೆಂಟಿ-20 ವಿಶ್ವಕಪ್ಗಾಗಿ ಭಾರತೀಯ ತಂಡಕ್ಕೆ ಸ್ಫೋಟಕ ಯುವ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಆಯ್ಕೆಯಾಗಿರುವುದರ ಹಿಂದಿನ ರಹಸ್ಯ ಬಯಲಾಗಿದೆ.
ಇದನ್ನು ಸ್ವತಃ ಇಶಾನ್ ಕಿಶನ್ ಅವರೇ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೊನೆಯ ಲೀಗ್ ಪಂದ್ಯದ ಬಳಿಕ ತಿಳಿಸಿದ್ದಾರೆ.
ಯುಎಇ ಹಾಗೂ ಒಮಾನ್ನಲ್ಲಿರುವ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ತಮ್ಮನ್ನು ಆರಂಭಿಕ ಬ್ಯಾಟ್ಸ್ಮನ್ ಆಗಿ ಪರಿಗಣಿಸಿರುವುದಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿರುವುದಾಗಿ ಇಶಾನ್ ತಿಳಿಸಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಗಳಿಸಿರುವ ಇಶಾನ್ ಕಿಶನ್, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ತಮ್ಮ ನೆಚ್ಚಿನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೇಳಿದಾಗ ಇಶಾನ್ ಈ ರೀತಿಯಾಗಿ ಉತ್ತರಿಸಿದರು.
'ನಾನು ಆರಂಭಿಕನಾಗಿ ಕಣಕ್ಕಿಳಿಯಲು ಇಷ್ಟಪಡುತ್ತೇನೆ. ಅದನ್ನೇ ವಿರಾಟ್ ಭಾಯ್ ಹೇಳಿದರು. ವಿಶ್ವಕಪ್ನಲ್ಲೂ ಆರಂಭಿಕನಾಗಿ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಅಂತರರಾಷ್ಟ್ರೀಯ ದರ್ಜೆಯಲ್ಲಿ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ಆಡಲು ಸಜ್ಜರಿರಬೇಕು' ಎಂದು ಇಶಾನ್ ವಿವರಿಸಿದ್ದಾರೆ.
'ವಿಶ್ವಕಪ್ಗೂ ಮೊದಲು ಬ್ಯಾಟಿಂಗ್ ಲಯ ಕಂಡುಕೊಳ್ಳಲು ಸಾಧ್ಯವಾಗಿರುವುದರಿಂದ ನಿರಾಳವಾಗಿದ್ದೇನೆ. ಇದು ನಮ್ಮ ಪಾಲಿಗೆ 'ಮಾಡು, ಇಲ್ಲವೆ ಮಡಿ' ಪಂದ್ಯವಾಗಿತ್ತು. ಅಲ್ಲದೆ ಧನಾತ್ಮಕ ಚಿಂತನೆಯೊಂದಿಗೆ ಕ್ರೀಸಿಗಿಳಿದಿದ್ದೆ' ಎಂದು ಹೇಳಿದರು.
'ಎಲ್ಲ ಸನ್ನಿವೇಶಗಳನ್ನು ಎದುರಿಸಲು ಸಿದ್ದರಾಗಿರಬೇಕು. ಆ ಮನಸ್ಥಿತಿ ಕಾಪಾಡಿಕೊಳ್ಳುವುದು ಮುಖ್ಯ. ಕೆಟ್ಟ ಫಾರ್ಮ್ ಸಂದರ್ಭದಲ್ಲಿ ನಾನು ವಿರಾಟ್ ಭಾಯ್, ಹಾರ್ದಿಕ್ ಭಾಯ್ ಹಾಗೂ ಕೆಪಿ (ಕೀರನ್ ಪೊಲಾರ್ಡ್) ಅವರೊಂದಿಗೆ ಸಮಾಲೋಚನೆ ನಡೆಸಿದ್ದೆ' ಎಂದು ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.