ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾಡ್‌: ಓಟದಲ್ಲಿ ಮನಗೆದ್ದ ಮಂಜೀತ್‌; ರಿಲೆಯಲ್ಲೂ ಭಾರತಕ್ಕೆ ಬೆಳ್ಳಿ

800 ಮೀಟರ್ಸ್ ಓಟದಲ್ಲಿ ಜಿನ್ಸನ್‌ ಜಾನ್ಸನ್‌ ಮಿಂಚಿನ ಓಟ; ಸಾಮರ್ಥ್ಯ ಮೆರೆದ ಪೂವಮ್ಮ
Last Updated 28 ಆಗಸ್ಟ್ 2018, 18:49 IST
ಅಕ್ಷರ ಗಾತ್ರ

ಜಕಾರ್ತ: ಇಲ್ಲಿನ ಜಿಬಿಕೆ ಕ್ರೀಡಾಂಗಣದ ಗ್ಯಾಲರಿಗಳಲ್ಲಿ ತುಂಬಿದ್ದ ಅಥ್ಲೆಟಿಕ್ಸ್ ಪ್ರಿಯರಿಗೆ ಭಾರತದ ಓಟಗಾರರು ಮಂಗಳವಾರ ಸಂಜೆ ರಸರೋಮಾಂಚನದ ಭರಪೂರ ಭೋಜನ ಉಣಬಡಿಸಿದರು. ಪುರುಷರ 800 ಮೀಟರ್ಸ್‌ ಓಟದಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಭಾರತದ ಓಟಗಾರರು ಮಿಶ್ರ ರಿಲೆಯಲ್ಲಿ ಬೆಳ್ಳಿ ಬೆಳಗು ಮೂಡಿಸಿದರು. ಮಿಶ್ರ ರಿಲೆಯನ್ನು ಇದೇ ಮೊದಲ ಬಾರಿ ಏಷ್ಯನ್ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ.

ಖತಾರ್‌ನ ಅಬ್ದುಲ್ಲ ಅಬೂಬಕ್ಕರ್‌, ಇರಾನ್‌ನ ಮೊರಡಿ ಅಮೀರ್‌ ಮತ್ತು ಬಹರೇನ್‌ನ ರೊಟಿಚ್ ಅಬ್ರಹಾಂ ಅವ ರನ್ನು ಒಳಗೊಂಡಿದ್ದ 800 ಮೀಟರ್ಸ್ ಓಟದಲ್ಲಿ ಭಾರತದ ಮಂಜೀತ್‌ ಸಿಂಗ್‌ ಮತ್ತು ಜಿನ್ಸನ್‌ ಜಾನ್ಸನ್‌ ಭಾರಿ ಪೈಪೋಟಿ ನೀಡಿದರು. ಕೊನೆಗೂ ಇಬ್ಬರೂ ಮೊದಲ ಎರಡು ಸ್ಥಾನಗಳನ್ನು ಗೆದ್ದು ಭಾರತಕ್ಕೆ ಅಪರೂಪದ ‘ಡಬಲ್‌’ ಪದಕಗಳನ್ನು ಗಳಿಸಿಕೊಟ್ಟರು.

ಸ್ಪರ್ಧೆ ಆರಂಭಕ್ಕೂ ಮೊದಲು ಜಿನ್ಸನ್ ಜಾನ್ಸನ್ ಮೇಲೆ ಚಿನ್ನದ ನಿರೀಕ್ಷೆ ಇತ್ತು. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿದ್ದ ಜಿನ್ಸನ್‌ ಅರಂಭದಲ್ಲಿ ಈ ನಿರೀಕ್ಷೆಗೆ ತಕ್ಕಂತೆ ಓಡಿದರು. ಎರಡನೇ ಲ್ಯಾಪ್‌ನ 250 ಮೀಟರ್ಸ್ ವರೆಗೂ ಅವರು ಅಬ್ದುಲ್ಲ ಅಬೂಬಕ್ಕರ್‌, ‌ಮೊರಡಿ ಅಮೀರ್‌ ಮತ್ತು ರೊಟಿಚ್ ಅವರೊಂದಿಗೆ ಸ್ಪರ್ಧಿ ಸುತ್ತ ಮುನ್ನುಗ್ಗಿದರು.

ಆದರೆ ಏಕಾಏಕಿ ಇವರೆಲ್ಲರನ್ನು ಮಿಂಚಿನ ವೇಗದಲ್ಲಿ ಹಿಂದಿಕ್ಕಿದ ಮಂಜೀತ್‌ ಅವರು ಅಚ್ಚರಿ ಮೂಡಿಸಿ ದರು. ಅಂತಿಮ 50 ಮೀಟರ್ಸ್ ಬಾಕಿ ಇದ್ದಾಗ ಎರಡನೇಯವರಾಗಿ ಓಟ ಮುಗಿಸುವತ್ತ ಸಾಗಿದರು. ಆದರೆ ಇನ್ನೂ 25 ಮೀಟರ್ಸ್ ಉಳಿದಿರುವಾಗ ವೇಗವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಚಿನ್ನ ಗೆದ್ದರು. 1:46.15 ನಿಮಿಷದಲ್ಲಿ ಅವರು ಗುರಿ ಮುಟ್ಟಿದರೆ ಜಿನ್ಸನ್‌ 1:46.35 ನಿಮಿಷದಲ್ಲಿ ಓಟ ಮುಗಿಸಿದರು. ಅಬ್ದುಲ್ಲ ಅಬೂಬಕ್ಕರ್‌ (1:46.38 ನಿಮಿಷ) ಕಂಚು ಗೆದ್ದರು.

ಬೆಳ್ಳಿ ಗೆದ್ದ ಭಾರತೀಯ ರಿಲೆ ತಂಡ
ಬೆಳ್ಳಿ ಗೆದ್ದ ಭಾರತೀಯ ರಿಲೆ ತಂಡ

ಮೂರೂವರೆ ದಶಕಗಳ ನಂತರ ಸಾಧನೆ: ಭಾರತವು ಪುರುಷರ 800 ಮೀಟರ್ಸ್ ಓಟದಲ್ಲಿ ಕೊನೆಯದಾಗಿ 1982ರಲ್ಲಿ ಚಿನ್ನ ಗೆದ್ದಿತ್ತು. ಅಂದು ಚಾರ್ಲ್ಸ್‌ ಬೊರೊಮೊ ಮೊದಲಿಗರಾಗಿದ್ದರು. 800 ಮೀಟರ್ಸ್ ಓಟದಲ್ಲಿ ಭಾರತ ಈ ಹಿಂದೆ 1951ರಲ್ಲಿ ಗೆದ್ದಿತ್ತು. ನವದೆಹಲಿಯಲ್ಲಿ ನಡೆದಿದ್ದ ಆ ಕೂಟದಲ್ಲಿ ರಂಜಿತ್ ಸಿಂಗ್ ಮತ್ತು ಕುಲ್ವಂತ್ ಸಿಂಗ್‌ ಈ ಸಾಧನೆ ಮಾಡಿದ್ದರು.

ಮಿಂಚಿದ ಪೂವಮ್ಮ: ಕರ್ನಾಟಕದ ಎಂ.ಆರ್.ಪೂವಮ್ಮ ಅವರನ್ನು ಒಳಗೊಂಡ 4x400 ಮೀಟರ್ಸ್ ಮಿಶ್ರ ರಿಲೆಯಲ್ಲಿ ಭಾರತ ಅಮೋಘ ಸಾಧನೆ ಮಾಡಿತು.

ಮೊದಲ ಲ್ಯಾಪ್‌ ಓಡಿದ ಅರೋಕ್ಯ ರಾಜೀವ್‌ ಅವರು ಉತ್ತಮ ಮುನ್ನಡೆ ಗಳಿಸಿಕೊಟ್ಟರು. ನಂತರ ಓಟ ಮುಂದುವರಿಸಿದ ಪೂವಮ್ಮ ಮಿಂಚಿನ ಓಟದ ಮೂಲಕ ಭರವಸೆ ಮೂಡಿಸಿದರು. ಮೂರನೇ ಲ್ಯಾಪ್‌ನಲ್ಲಿ ಹಿಮಾ ದಾಸ್ ಮತ್ತು ಕೊನೆಯಲ್ಲಿ ಮೊಹಮ್ಮದ್ ಅನಾಸ್‌ ಭಾರತದ ಸವಾಲನ್ನು ಎತ್ತಿ ಹಿಡಿದರು. 3:15.71 ನಿಮಿಷಗಳಲ್ಲಿ ಭಾರತ ಗುರಿ ಮುಟ್ಟಿತು. ಬಹರೇನ್‌ನ (3:11.89 ನಿಮಿಷ) ಓಟಗಾರರು ಚಿನ್ನ ಗೆದ್ದರು. ಕಂಚಿನ ಪದಕ ಕಜಕಸ್ತಾನದ (3:19.52 ನಿಮಿಷ) ಪಾಲಾಯಿತು.
**
ನನ್ನ ಓಟದ ವಿಡಿಯೊಗಳನ್ನು ಸೂಕ್ಷ್ಮವಾಗಿ ನೋಡಿದ್ದೆ. ತಪ್ಪುಗಳನ್ನು ಸರಿಪಡಿಸಿಕೊಂಡು ಓಡಲು ನಿರ್ಧರಿಸಿದೆ. ಇದಕ್ಕೆ ಫಲ ಕಂಡು ಚಿನ್ನ ಗೆದ್ದೆ.
ಮಂಜೀತ್‌ ಸಿಂಗ್‌, ಚಿನ್ನ ಗೆದ್ದ ಅಥ್ಲೀಟ್‌
**
ತುರಮುರಿಯಲ್ಲಿ ಸಂಭ್ರಮ

ಏಷ್ಯನ್‌ ಕ್ರೀಡಾಕೂಟದ ಕುರಾಶ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ ಅವರ ಹುಟ್ಟೂರು ಬೆಳಗಾವಿ ತಾಲ್ಲೂಕಿನ ತುರಮುರಿ ಗ್ರಾಮದಲ್ಲಿ ಮಂಗಳವಾರ ಸಂಜೆ ಹಬ್ಬದ ವಾತಾವರಣ ಕಂಡುಬಂತು. ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಸಿಹಿ ಹಂಚಿ, ಸಂಭ್ರಮ ಪಟ್ಟರು.

‘ನನ್ನ ಮಗಳು ಕಂಚಿನ ಪದಕ ಗೆದ್ದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಶಾಲಾ ದಿನಗಳಿಂದಲೂ ಅವಳು ಆಟದಲ್ಲಿ ಚುರುಕಾಗಿದ್ದಳು. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ’ ಎಂದು ಮಲಪ್ರಭಾ ಅವರ ತಾಯಿ ಶೋಭಾ ಸುದ್ದಿಗಾರರ ಜೊತೆ ಸಂತಸ ಹಂಚಿಕೊಂಡರು.

ರೈತ ಕುಟುಂಬದ ಯಲ್ಲಪ್ಪ ಹಾಗೂ ಶೋಭಾ ದಂಪತಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದಾರೆ. ಮೂವರು ಹೆಣ್ಣುಮಕ್ಕಳ ಮದುವೆಯಾಗಿದ್ದು, ನಾಲ್ಕನೇ ಮಗಳು ಮಲಪ್ರಭಾ ಬೆಳಗಾವಿಯಲ್ಲಿ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದಾರೆ. ಬೆಳಗಾವಿಯ ಕ್ರೀಡಾ ವಸತಿ ನಿಲಯದಲ್ಲಿ ವಾಸವಾಗಿದ್ದಾರೆ.
**
ಇದನ್ನೂ ಓದಿರಿ
* ಏಷ್ಯನ್‌ ಕ್ರೀಡಾಕೂಟ: ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧುಗೆ ಬೆಳ್ಳಿ
* ಆರ್ಚರಿ: ಭಾರತದ ಪುರುಷ ಮತ್ತು ಮಹಿಳಾ ತಂಡಗಳಿಗೆ ಬೆಳ್ಳಿ ಪದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT