ನವದೆಹಲಿ: ಒಲಿಂಪಿಕ್ಸ್ಗೆ ತೆರಳುವ ಭಾರತದ ಕ್ರೀಡಾಪಟುಗಳ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮುಂದಾಗಿರುವ ಭಾರತ ಒಲಿಂಪಿಕ್ ಸಮಿತಿ (ಐಒಎ) ನಿರ್ಧರಿಸಿದ್ದು ಇದಕ್ಕಾಗಿ ‘ಧ್ಯಾನ್’ ಎಂಬ ಸ್ಟಾರ್ಟ್ ಅಪ್ ಜೊತೆ ಒಪ್ಪಂದ ಮಾಡಿಕೊಂಡಿದೆ.
‘ಒಪ್ಪಂದದ ಅಂಗವಾಗಿ ಧ್ಯಾನ್ ರಿಂಗ್ ಎಂಬ ಸಾಧನ ಬಳಸಲಾಗುವುದು. ಇದು ಆಟಗಾರರು, ಕೋಚ್ ಮತ್ತು ನೆರವು ಸಿಬ್ಬಂದಿಯ ಮಾನಸಿಕ ನೆಮ್ಮದಿಗೆ ನೆರವಾಗಲಿದೆ. ಪಂದ್ಯಗಳ ಸಂದರ್ಭದಲ್ಲಿ ಒತ್ತಡ ನಿಭಾಯಿಸುವುದಕ್ಕೂ ಸಹಕಾರಿಯಾಗಲಿದೆ. ಒಲಿಂಪಿಕ್ಸ್ಗೆ ಸಂಬಂಧಿಸಿ ಧ್ಯಾನಕ್ಕಾಗಿ ಸಂಸ್ಥೆಯೊಂದರ ಜೊತೆ ದೇಶವೊಂದು ಒಪ್ಪಂದ ಮಾಡಿಕೊಳ್ಳುವುದು ಇದೇ ಮೊದಲು’ ಎಂದು ಐಒಎ ತಿಳಿಸಿದೆ.
ಎಂಟು ಮಂದಿ ಜೊತೆ ಪ್ಯೂಮಾ ಒಪ್ಪಂದ
ಕ್ರೀಡಾ ಪೋಷಾಕಿಗೆ ಸಂಬಂಧಿಸಿದ ದೈತ್ಯ ಪ್ಯೂಮಾಕಂಪನಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿರುವ ಭಾರತದ 15 ಕ್ರೀಡಾಪಟುಗಳು ಮತ್ತು ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಮೂವರ ಜೊತೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದೆ.
ಬಾಕ್ಸರ್ ಮೇರಿ ಕೋಮ್, ಸ್ಪ್ರಿಂಟರ್ ದ್ಯುತಿ ಚಾಂದ್, ಬಾಕ್ಸರ್ ಪೂಜಾ ರಾಣಿ, ಶಾಟ್ ಪಟ್ ಎಸೆತಗಾರ ತಜಿಂದರ್ ಸಿಂಗ್, ಶೂಟರ್ ಮನು ಭಾಕರ್, ಈಜುಪಟು ಶ್ರೀಹರಿ ನಟರಾಜ್, ಹಾಕಿ ಆಟಗಾರರಾದ ರೂಪಿಂದರ್ ಪಾಲ್ ಸಿಂಗ್, ಹರ್ಮನ್ಪ್ರೀತ್ ಸಿಂಗ್, ಮನದೀಪ್ ಸಿಂಗ್, ಗುರ್ಜಂತ್ ಸಿಂಗ್, ಸವಿತಾ ಪೂನಿಯಾ, ಸುಶೀಲಾ ಚಾನು, ನವನೀತ್ ಕೌರ್, ನವಜ್ಯೋತ್ ಕೌರ್, ವಂದನಾ ಕಟಾರಿಯಾ, ಗುರುಜೀತ್ ಕೌರ್, ಉದಿತಾ ದುಹಾನ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪ್ಯಾರಾ ಅಥ್ಲೀಟ್ಗಳಾದ ಶೂಟರ್ ಅವನಿ ಲೇಖರ, ಟೇಬರ್ ಟೆನಿಸ್ ಪಟು ಭವಿನಾ ಪಟೇಲ್ ಮತ್ತು ಡಿಸ್ಕಸ್ ಥ್ರೋ ಪಟು ಏಕ್ತಾ ಭಯಾನ್ ಅವರೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಂಪನಿಯ ಭಾರತದ ವ್ಯವಹಾರಗಳ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.