ಬೆಂಗಳೂರು: ಗುಂಡಿಗಳಿಂದಾಗಿ ಚರ್ಚೆಗೆ ಗ್ರಾಸವಾಗಿದ್ದ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಅಂತೂ ಇಂತೂ ಹೊಸ ರೂಪ ಪಡೆದುಕೊಳ್ಳಲಿದೆ. ಹೊಸ ಹೊದಿಕೆ ಹಾಕುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.
‘ಟ್ರ್ಯಾಕ್ಗೆ ಹೊಸ ಹೊದಿಕೆ ಹಾಕಲು ಸರ್ಕಾರವು ₹ 4.98 ಕೋಟಿ ಮಂಜೂರು ಮಾಡಿದೆ. ಬಾಲಾಜಿ ಸ್ಪೋರ್ಟ್ಸ್ ಸಂಸ್ಥೆ ಕಾಮಗಾರಿ ನಿರ್ವಹಿಸಲಿದೆ. ಸೋಮವಾರ ಕಾರ್ಯಾರಂಭವಾಗಲಿದ್ದು, 90 ದಿನಗಳೊಳಗೆ ಸಂಪೂರ್ಣಗೊಳಿಸುವುದು ಕಡ್ಡಾಯ’ ಎಂದು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ರಾಜವೇಲು ತಿಳಿಸಿದ್ದಾರೆ.
ಕಳಪೆ ಟ್ರ್ಯಾಕ್ ಕಾರಣದಿಂದಾಗಿ ಹೋದ ವರ್ಷ ಇಲ್ಲಿ ಆಯೋಜನೆಗೊಳ್ಳಬೇಕಾಗಿದ್ದ ರಾಷ್ಟ್ರಮಟ್ಟದ ಅಥ್ಲೆಟಿಕ್ ಕೂಟವನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಲಾಗಿತ್ತು. ರಾಜ್ಯ ಅಥ್ಲೆಟಿಕ್ ಸಂಸ್ಥೆಯು ಭಾರತಅಥ್ಲೆಟಿಕ್ ಫೆಡರೇಷನ್ ಅಸಮಾಧಾನಕ್ಕೂ ಗುರಿಯಾಗಿತ್ತು.
ಇದೀಗ ಕಾಮಗಾರಿಯು, ಒಪ್ಪಂದದ ಪ್ರಕಾರ ಜೂನ್ ಅಂತ್ಯದ ವೇಳೆಗೆ ಸಂಪೂರ್ಣವಾಗುವ ನಿರೀಕ್ಷೆ ಇದೆ. ಅದರ ನಂತರ ಇಲ್ಲಿ ರಾಷ್ಟ್ರಮಟ್ಟದ ಕೂಟಗಳು ಆಯೋಜನೆಗೊಳ್ಳಲು ಅವಕಾಶವಾಗಲಿದೆ.