ಬೀದರ್: ಅಖಿಲ ಭಾರತ ಕತ್ತಿ ವರಸೆ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ಇಲ್ಲಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕವು 15 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಬಾಚಿಕೊಳ್ಳುವುದರೊಂದಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
6 ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಜಯಿಸಿದ ಮಹಾರಾಷ್ಟ್ರ ತಂಡ ರನ್ನರ್ ಅಪ್ಗೆ ತೃಪ್ತಿ ಪಟ್ಟುಕೊಂಡಿತು. ನಾಲ್ಕು ಚಿನ್ನದ ಪದಕ ಗೆದ್ದ ಮಧ್ಯಪ್ರದೇಶ ತೃತೀಯ ಹಾಗೂ ಒಂದು ಬೆಳ್ಳಿ ಪದಕ ಪಡೆದ ಕೇರಳ ನಾಲ್ಕನೇ ಸ್ಥಾನ ಗಳಿಸಿತು.
ನಾಲ್ಕು ರಾಜ್ಯಗಳ ಒಟ್ಟು 50 ಕ್ರೀಡಾಪಟಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಪಟುಗಳ ಕಾದಾಟ, ಮ್ಯಾಟ್ ಕಟ್ಟಿಂಗ್ ಹಾಗೂ ಕತ್ತಿಯೊಂದಿಗೆ ಪ್ರದರ್ಶಿಸಿದ ಪ್ರಾತ್ಯಕ್ಷಿಕೆಗಳು ಪ್ರೇಕ್ಷಕರನ್ನು ಬೆರಗುಗೊಳಿಸಿದವು.
ಕರ್ನಾಟಕ ರಾಜ್ಯ ಸಮುರಾಯ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು.