ಬೆಂಗಳೂರು: ಕಟ್ಟಡ ತ್ಯಾಜ್ಯವನ್ನು ಮಾರೇನಹಳ್ಳಿ ಕ್ವಾರಿಗೆ ಸುರಿಯದಿರಲು ಬಿಬಿಎಂಪಿ ನಿರ್ಧರಿಸಿರುವ ಬೆನ್ನಲ್ಲೇ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಹೂಳು ಈ ಕ್ವಾರಿ ಸೇರುವ ಸಾಧ್ಯತೆ ಇದೆ.
ಈ ಎರಡೂ ಕೆರೆಗಳ ಹೂಳು ಸುರಿಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದೆ. ಮಾರೇನಹಳ್ಳಿ ಕ್ವಾರಿ ಕೂಡ ಆಯ್ಕೆಯಾಗುವ ಸಾಧ್ಯತೆ ಇದ್ದು, ಅಂತಿಮವಾಗಿ ಪಾಲಿಕೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಮಿಟ್ಟಗಾನಹಳ್ಳಿ ಮತ್ತು ಮಾರೇನ ಹಳ್ಳಿಕ್ವಾರಿಗೆ ತ್ಯಾಜ್ಯ ಸುರಿಯಲುಈ ಹಿಂದೆಘನ ತ್ಯಾಜ್ಯ ನಿರ್ವಹಣಾ ವಿಭಾಗ ನೀಡಿದ್ದ ಪ್ರಸ್ತಾವನೆಯನ್ನುತಾಂತ್ರಿಕ ಮಾರ್ಗದರ್ಶನ ಸಮಿತಿ ತಿರಸ್ಕರಿಸಿತ್ತು.
ಎರಡೂ ಕ್ವಾರಿಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸುವುದು ಒಳ್ಳೆಯದಲ್ಲ. ಹೆಚ್ಚು ತ್ಯಾಜ್ಯ ಉತ್ಪತ್ತಿಗೆ ಪ್ರೋತ್ಸಾಹ ನೀಡಿದಂತೆ ಆಗಲಿದೆ ಎಂದು ಅದು ಅಭಿಪ್ರಾಯಪಟ್ಟಿತ್ತು.
ಬೆಳ್ಳಂದೂರು ಕೆರೆಯಿಂದ 60.60 ಲಕ್ಷ ಕ್ಯೂಬಿಕ್ ಮೀಟರ್ ಹಾಗೂ ವರ್ತೂರಿನಿಂದ 30.87 ಲಕ್ಷ ಕ್ಯೂಬಿಕ್ ಮೀಟರ್ನಷ್ಟು ಹೂಳು ಎತ್ತಲು ಯೋಜಿಸಲಾಗಿದೆ.
ಮೂಲಗಳ ಪ್ರಕಾರ, ಈ ಹೂಳನ್ನು 15 ಸಾವಿರ ಎಕರೆಗೂ ಹೆಚ್ಚು ಪ್ರದೇಶಕ್ಕೆ ಗೊಬ್ಬರವಾಗಿ ಬಳಸಬಹುದಾಗಿದೆ.
ಮಾರೇನಹಳ್ಳಿ ಕ್ವಾರಿ ಅಲ್ಲದೇ, ಎಲೆಕ್ಟ್ರಾನಿಕ್ ಸಿಟಿ ಬಳಿಯೂ ಎರಡು ಜಾಗಗಳಲ್ಲಿ ಒಟ್ಟು 10 ಎಕರೆ ಜಾಗವನ್ನು ಗುರುತಿಸಲಾಗಿದೆ. ಆನೇಕಲ್ ಬಳಿ ಗುರುತಿಸಿರುವ ಕ್ವಾರಿಯೊಂದರಲ್ಲಿ ಹೂಳು ಸುರಿಯುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.