ಹೆಸರಘಟ್ಟ: ಹುಟ್ಟಿದ್ದು ಕೇರಳದಲ್ಲಿ, ಮಾತೃಭಾಷೆ ಮಲೆಯಾಳಂ ಆದರೂ ಕನ್ನಡದಲ್ಲಿ 122 ಅಂಕ ಗಳಿಸುವ ಮೂಲಕ ಆರ್.ರಮ್ಯಾ ಸಾಧನೆ ಮಾಡಿದ್ದಾಳೆ.
ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವ, ಕನ್ನಡ ಮಾಧ್ಯಮದಲ್ಲಿ ಓದಿದ ಈ ಬಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 612 ಅಂಕ ಗಳಿಸಿದ್ದಾಳೆ. ಇವಳು ಬಿಳಿಜಾಜಿಗ್ರಾಮದ ನಿವಾಸಿ ರಘು ಮತ್ತು ಸುಮಾ ದಂಪತಿ ಎರಡನೆ ಮಗಳು.
ಜೀವನ ನಿರ್ವಹಣೆಗಾಗಿ ಕೇರಳದಿಂದ ಹದಿನೈದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ರಘು ಅವರು ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದರು. ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳನ್ನು ಓದಿಸಿದರು.
ರಮ್ಯಾ 1ನೇ ತರಗತಿಯಿಂದ 5ನೇ ತರಗತಿಯ ವರೆಗೆ ಲಗ್ಗೆರೆಯ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡಿದಳು. ಬಳಿಕ ಹೆಸರಘಟ್ಟದಲ್ಲಿನ ನ್ಯಾಷನಲ್ ಸ್ಕೂಲ್ಗೆ ಸೇರಿ, ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡಳು.
‘ಕನ್ನಡ ಮೇಷ್ಟ್ರುಗಳು ಮನಮುಟ್ಟುವಂತೆ ಪಾಠ ಮಾಡುತ್ತಿದ್ದರು. ಅದರಿಂದ ಭಾಷೆಯಲ್ಲಿ ಆಸಕ್ತಿ ಹುಟ್ಟಿತು. ಕನ್ನಡದಲ್ಲಿನ ಪದ್ಯಗಳೆಂದರೆ ನನಗೆ ಬಹಳ ಇಷ್ಟ. ಜಿ.ಪಿ.ರಾಜರತ್ನಂ ಅವರ ‘ಬಣ್ಣದ ತಗಡಿನ ತುತ್ತೂರಿ’ ಪದ್ಯವನ್ನು ಆಗಾಗ ಗುನುಗುತ್ತಿರುತ್ತೇನೆ’ ಎನ್ನುತ್ತಾರೆ ವಿದ್ಯಾರ್ಥಿನಿ ರಮ್ಯಾ.
‘ಕನ್ನಡದ ನೆಲ ಬದುಕು ನೀಡಿದೆ. ಮಗಳನ್ನು ಐಎಎಸ್ ಅಧಿಕಾರಿ ಆಗಿಸುವ ಆಸೆ ಇದೆ’ ಎನ್ನುತ್ತಾರೆ ಪೋಷಕರು.
ರಮ್ಯಾ ಈಗ ತೋಟಗೆರೆಯ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿದ್ದಾಳೆ. ಇವಳಿಗೆ ಉಚಿತವಾಗಿ ಪಿ.ಯು.ಸಿ. ಶಿಕ್ಷಣ ನೀಡುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಆನಂದ್ ತಿಳಿಸಿದ್ದಾರೆ.