ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಕ್ಷಕರೇ ಭಕ್ಷಕರಾದರೆ ದಾರಿ ಎಲ್ಲಿದೆ’

ಉತ್ಸವದಲ್ಲಿ ಮೀ–ಟೂ ಅಲೆ; ಮನದಾಳ ತೋಡಿಕೊಂಡ ಮಹಿಳೆಯರು
Last Updated 28 ಅಕ್ಟೋಬರ್ 2018, 20:21 IST
ಅಕ್ಷರ ಗಾತ್ರ

ಬೆಂಗಳೂರು: ‘ಜಗತ್ತಿನ ರಕ್ಷಕ ಎಂದು ಕರೆಸಿಕೊಳ್ಳುವ ಪಾದ್ರಿಯ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದರೆ ನನ್ನನ್ನು ಯಾರು ನಂಬುತ್ತಾರೆ’ ಹೀಗೆ ಪ್ರಶ್ನಿಸಿದ್ದು ಕೇರಳದ ಸಿಸ್ಟರ್‌ ಜೆಸ್ಮಿ. ಬದುಕಿನಲ್ಲಿ ತಮಗಾದ ಅನುಭವವನ್ನು ಅವರು ‘ಮೀ–ಟೂ’ ಚರ್ಚೆಯ ಸಂದರ್ಭದಲ್ಲಿ ಹಂಚಿಕೊಂಡರು.

‘ನಾನು ಕೆಲಸಕ್ಕೆ ಸೇರಿ ಒಂದೆರಡು ವರ್ಷಗಳು ಎಲ್ಲವೂ ಚೆನ್ನಾಗಿದೆ ಅನ್ನಿಸಿತು. ಶಿಕ್ಷಣ ಸಂಸ್ಥೆಯಲ್ಲಿ ಎಷ್ಟೊಂದು ಪವಿತ್ರವಾದ ವಾತಾವರಣ ಇದೆ ಎಂದು ಭಾಸವಾಗಿತ್ತು. ಆದರೆ ಕೆಲವೇ ವರ್ಷ
ಗಳಲ್ಲಿ ಪಾದ್ರಿಯೊಬ್ಬರ ನಡವಳಿಕೆ ನನ್ನಲ್ಲಿ ಆತಂಕ ಉಂಟುಮಾಡಿತು. ಬಟ್ಟೆ ಇಲ್ಲದೆ ನನ್ನನ್ನು ನೋಡುವ ಅಭಿಲಾಷೆಯನ್ನು ಅವರು ವ್ಯಕ್ತಪಡಿಸಿದ್ದರು. ಹಲವು ವರ್ಷ ಅವರ ಮಾತುಗಳನ್ನು ಸಹಿಸಿಕೊಂಡ ಮೇಲೆ ನಾನು ಅಲ್ಲಿಂದ ಹೊರಬಂದೆ’ ಎಂದು ಅವರು ಕಣ್ಣಾಲಿ ತುಂಬಿಕೊಂಡರು.

‘ಪಾದ್ರಿ ವಿರುದ್ಧವೇ ಆರೋಪ ಮಾಡಿದ್ದರಿಂದ ನಾನು ಸಾಕಷ್ಟು ನೋವು ಅನುಭವಿಸಬೇಕಾಯಿತು. ನಾನು ಹೋರಾಟಕ್ಕೆ ಮುಂದಾದ ಬಳಿಕ, ಇದಕ್ಕೆ ಬೆಂಬಲ ಸೂಚಿಸಿ ಜರ್ಮನಿಯಿಂದಲೂ ನನಗೆ ಇ–ಮೇಲ್‌ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ನನ್‌–ಟೂ (ಧರ್ಮಭಗಿನಿಯರಿಗೂ) ಆಂದೋಲನ ಆರಂಭಿಸುವುದಾಗಿ ಅವರು ಹೇಳಿದರು’ ಎಂದು ತಿಳಿಸಿದರು.

ಆತ್ಮಕತೆ ‘ಅಮೆನ್‌’ ಮೂಲಕ ಜೆಸ್ಮಿ ಅವರು ತಮ್ಮ ಮೇಲಾದ ಲೈಂಗಿಕ ಕಿರುಕುಳವನ್ನು ಬಹಿರಂಗಪಡಿಸಿದ್ದರು. ಇದು ಮೀ–ಟೂ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸಿತ್ತು.

‘ನನಗಿಂತ 30 ವರ್ಷ ಹಿರಿಯರಾದ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿದರು. ಆದರೆ ಕಚೇರಿಯಲ್ಲಿ ಕೆಲವರು ನನ್ನನ್ನು ನಂಬಲಿಲ್ಲ’ ಎಂದು ಪತ್ರಕರ್ತೆ ಸಂಧ್ಯಾ ಮೆನನ್‌ ಹೇಳಿದರು.

‘ಮನೆಗೆ ಬನ್ನಿ ಎಂದು ಪದೇ ಪದೇ ಹಿಂಸೆ ಮಾಡುತ್ತಿದ್ದರೂ ಕೆಲವು ಕಾಲ ಸಹಿಸಿಕೊಳ್ಳಬೇಕಾಯಿತು’ ಎಂದು ಕಿರುತೆರೆ ಕಲಾವಿದೆ ವಿಂತಾ ನಂದಾ ಹೇಳಿಕೊಂಡರು.

‘ಮೀ–ಟೂ ಈಗ ‘ವೀ–ಟೂ’ ಆಗಿ ಬದಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನವಾಗಿ ರೂಪುಗೊಂಡಿದೆ. ಇದರಿಂದ ಸಾಕಷ್ಟು ಮಹಿಳೆಯರಿಗೆ ಧ್ವನಿ ಸಿಕ್ಕಿದೆ’ ಎಂದು ಪತ್ರಕರ್ತೆ ಬರ್ಖಾ ದತ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT