ಬಿಹಾರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನೋ ಕೆಲವೇ ತಿಂಗಳು ಬಾಕಿ ಇದೆ. ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಸಿದ್ಧತೆ ಬಿರುಸಿನಿಂದ ಕೂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ವಿಡಿಯೋಗಳು, ಸ್ಟೇಟಸ್ಗಳು ಸದ್ದು ಮಾಡುತ್ತಿವೆ.
ರಾಷ್ಟ್ರೀಯ ಜನತಾದಳದ ಪ್ರಮುಖ ಲಾಲುಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಫೇಸ್ ಬುಕ್, ವಾಟ್ಸಪ್, ಟ್ವಿಟರ್ಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ತೇಜಸ್ವಿಯಾದವ್ ಕೋವಿಡ್ 19 ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಫೇಸ್ಬುಕ್, ಟ್ವಿಟರ್ನಲ್ಲಿ ಹಾಕಿದ ವಿಡಿಯೋ ಒಂದು ಭಾರಿ ಸದ್ದು ಮಾಡಿದೆ.
ಈ ವಿಡಿಯೋದಲ್ಲಿ ತೇಜಸ್ವಿಯಾದವ್ ಅವರು ನಳಂದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಸ್ಥಿತಿ ಎಂದು ಹೇಳಿ ವ್ಯಕ್ತಿಯೊಬ್ಬ ಮಾಡಿರುವ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಾಕಿದ್ದಾರೆ. ವಿಡಿಯೋಗೆ ವಿವರಣೆ ನೀಡಿರುವ ತೇಜಸ್ವಿ ಯಾದವ್, ಇದು ಸರ್ಕಾರಿ ಆಸ್ಪತ್ರೆ ನಳಂದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ (ಎನ್ಎಂಸಿಎಚ್)ಯ ಕೋವಿಡ್19 ವಾರ್ಡ್ ಸ್ಥಿತಿ. ಇಲ್ಲಿ ಕಳಪೆ ಆರೋಗ್ಯ ಮತ್ತು ವೈದ್ಯಕೀಯ ಸ್ಥಿತಿ 'ಬಿಹಾರದ ಭಯಾನಕ ಸ್ಥಿತಿಯನ್ನು ನೋಡಿ' ಎಂದು ವಿವರಣೆ ನೀಡಿದ್ದಾರೆ.
ಕೋವಿಡ್ 19 ರೋಗಿಗಳನ್ನು ಹೊಂದಿರುವ ಆಸ್ಪತ್ರೆಯ ಕೊಠಡಿಯಲ್ಲಿ ಮೃತದೇಹಗಳನ್ನೂ ಎರಡು ದಿನಗಳ ಕಾಲ ಇರಿಸಲಾಗಿದೆ.
ಇಲ್ಲಿ ಯಾವುದೇ ವೈದ್ಯರು, ದಾದಿಯರು, ವೆಂಟಿಲೇಟರ್ಗಳ ಸುಳಿವಿಲ್ಲ, ಅವರೆಲ್ಲರೂ ಸಿಎಂ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಅಲ್ಲಿ 60 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ವೈದ್ಯರು, ನರ್ಸ್ಗಳು ಅಲ್ಲಿ ಕರ್ತವ್ಯದಲ್ಲಿದ್ದಾರೆ. ಇಷ್ಟೆಲ್ಲಾ ಸಮಸ್ಯೆಯಿದ್ದರೂ ಸರ್ಕಾರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುವಲ್ಲಿ ನಿರತವಾಗಿದೆ ಎಂದು ಯಾದವ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಕೋವಿಡ್ 19 ಪರಿಸ್ಥಿತಿ ಇಲ್ಲಿ ತುಂಬಾ ಕಷ್ಟಕರವಾಗಿದೆ. ಜನರು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರವನ್ನು
ಅವಲಂಬಿಸುವ ಬದಲು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಹುಡುಕುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಧಿಕ ಶೇರ್ ಮತ್ತು ಲೈಕ್ ಗಿಟ್ಟಿಸಿಕೊಂಡಿದೆ.
ತೇಜಸ್ವಿಯಾದವ್ ಅವರು ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ತಮ್ಮ ತಂದೆ ಲಾಲುಪ್ರಸಾದ್ ಯಾದವ್ ಹಾಗೂ ತಾಯಿ ರಾಬ್ಡಿದೇವಿ ಆಡಳಿತದ ಸಮಯದಲ್ಲಿ ನಡೆದ ಕೆಲವು ಕಹಿಘಟನೆಗಳ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಬಿಹಾರದಲ್ಲಿ ನಿತೀಶ್ ನೇತೃತ್ವದ ಜೆಡಿಯು ಸರ್ಕಾರ ಅಧಿಕಾರದಲ್ಲಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾದಳ ತೇಜಸ್ವಿ ಯಾದವ್ ಪ್ರಮುಖಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
बिहार सरकार ग़लतियाँ स्वीकार करने को तैयार ही नहीं। स्वास्थ्य मंत्री तो लाशों का स्कोर पूछ उसे कम करने के मैच में लिप्त रहते है।दो दिन तक मृत मरीज़ों के शव उसी वार्ड में रहते है कोई डॉक्टर-नर्स नहीं रहते। लगता है मंत्री को अच्छे से दिखाई और सुनाई नहीं देता। ये video फिर देखें https://t.co/ubz32LiAsx pic.twitter.com/KnifR9JxwR
— Tejashwi Yadav (@yadavtejashwi) July 10, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.